ಸಂಪುಟ ವಿಸ್ತರಣೆ: ಇಂದು ರಾತ್ರಿ ಯಡಿಯೂರಪ್ಪ ದೆಹಲಿಗೆ
ಬೆಂಗಳೂರು, ಆಗಸ್ಟ್ 15: ಸಿಎಂ ಯಡಿಯೂರಪ್ಪ ಅವರು ಇಂದು ರಾತ್ರಿಯೇ ನವದೆಹಲಿಗೆ ತೆರಳಲಿದ್ದು ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ರಾತ್ರಿ ಒಂಬತ್ತು ಗಂಟೆಗೆ ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ತಮ್ಮೊಂದಿಗೆ ಸಚಿವ ಸ್ಥಾನಾಕಾಂಕ್ಷಿಗಳು ಮತ್ತು ತಾವು ತಯಾರಿಸಿರುವ ಪಟ್ಟಿಯನ್ನು ಒಯ್ಯಲಿದ್ದಾರೆ. ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಡಿಯೂರಪ್ಪ ಭೇಟಿ ಆಗಲಿದ್ದು, ಪ್ರವಾಹ ಪರಿಸ್ಥಿತಿ ವಿವರ, ಆಗಿರುವ ನಷ್ಟದ ವರದಿ ನೀಡಿ, ಸಹಾಯಕ್ಕೆ ಮನವಿ ಮಾಡಲಿದ್ದಾರೆ.

ಮೋದಿ ಭೇಟಿಯ ನಂತರ ಮಧ್ಯಾಹ್ನ ಕೇಂದ್ರ ರೈಲ್ವೆ ಸಚಿವ, ಗೃಹ ಸಚಿವ, ಜಲಸಂಪನ್ಮೂಲ ಸಚಿವ ಸೇರಿದಂತೆ ಇನ್ನೂ ಕೆಲವು ಸಚಿವರನ್ನು ಭೇಟಿ ಮಾಡಲಿರುವ ಅವರು ರಾಜ್ಯದ ಕುರಿತು ಚರ್ಚೆ ನಡೆಸಲಿದ್ದಾರೆ.
ನಂತರ ಆಗಸ್ಟ್ 17 ರಂದು ಸಚಿವ ಸಂಪುಟ ವಿಸ್ತರಣೆ ಕುರಿತು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರುಗಳ ಜೊತೆ ದೀರ್ಘ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚರ್ಚೆಯ ನಂತರ ಅಂದೇ ರಾತ್ರಿ ಯಡಿಯೂರಪ್ಪ ಅವರು ರಾಜ್ಯಕ್ಕೆ ಮರಳಲಿದ್ದಾರೆ.
ಯಡಿಯೂರಪ್ಪ ಅವರು ತಮ್ಮ ಪಟ್ಟಿಯನ್ನು ಹೈಕಮಾಂಡ್ ಮುಂದಿಡಲಿದ್ದಾರೆ. ಆದರೆ ಹೈಕಮಾಂಡ್ ಬಳಿ ಈಗಾಗಲೇ ಎರಡು ಪಟ್ಟಿ ಸೇರಿದ್ದು, ಯಾವ ಪಟ್ಟಿ ಅಂತಿಮವಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.












Click it and Unblock the Notifications