ಬೆಂಗಳೂರು: ಪ್ರೀತಿ ವಿಚಾರ ಬಹಿರಂಗ, ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ & ಪ್ರೇಮಿ ಆತ್ಮಹತ್ಯೆ
ಬೆಂಗಳೂರು, ನವೆಂಬರ್ 07: ತಮ್ಮ ಪ್ರೀತಿ ವಿಚಾರ ಎಲ್ಲರಿಗೆ ತಿಳಿಯಿತು ಎಂದು ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರ ಬೆಂಕಿ ಹಂಚಿಕೊಂಡು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೊತ್ತನೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ. ಸೌಮಿನಿ ದಾಸ್(20) ಹಾಗೂ ಅಬಿಲ್ ಅಬ್ರಾಹಂ(26) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಮೂಲತಃ ಬಂಗಾಳದ ಸೌಮಿನಿ ದಾಸ್ ವಿವಾಹವಾದ ಬಳಿಕ ನರ್ಸಿಂಗ್ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಆಕೆಗೆ ಕೇರಳ ಮೂಲದ ಅಬಿಲ್ ಅಬ್ರಾಹಂ ಪರಿಚಯವಾಗಿದ್ದ. ಇಬ್ಬರ ನಡುವೆ ಪ್ರೀತಿ ಆರಂಭವಾಗಿ ಒಟ್ಟಿಗೆ ವಾಸಿಸುತ್ತಿದ್ದರು. ಸ್ವಊರಿನ ಯಾವುದೇ ತಂಟೆ-ತಕರಾರಿಲ್ಲದೇ ಸೌಮಿನಿ ದಾಸ್ ಹಾಗೂ ಅಬಿಲ್ ಅಬ್ರಾಹಂ ಜೀವನ ನಡೆಸುತ್ತಿದ್ದರು.

ಆದರೆ ಮೂರು ತಿಂಗಳ ಹಿಂದಷ್ಟೇ ಸೌಮಿನಿ ದಾಸ್ ಊರಿಗೆ ತೆರಳಿದ್ದಾಳೆ. ಈ ವೇಳೆ ಪತಿಯ ಜೊತೆ ಜಗಳವಾಡಿದ್ದು, ಮದುವೆಯಾದಾಗಿನಿಂದಲೂ ಕಿರುಕುಳ ನೀಡುತ್ತಿರುವುದಾಗಿ ಕಾರಣ ನೀಡಿ, ನಿನ್ನ ಜೊತೆ ನಾನು ಇರುವುದಿಲ್ಲ ಎಂದು ಗಂಡನಿಗೆ ಹೇಳಿ ಬೆಂಗಳೂರಿಗೆ ವಾಪಸ್ ಬಂದಿದ್ದಳು. ನನ್ನ ತಂಟೆಗೆ ಬರಬೇಡ, ನಾನು ಮತ್ತೆ ಬರುವುದಿಲ್ಲ ಎಂದು ಹೇಳಿ ಹೋದ ಪತ್ನಿ ಸೌಮಿನಿ ದಾಸ್ ಬಗ್ಗೆ ಪತಿಗೆ ಅನುಮಾನ ಆರಂಭವಾಗಿದೆ.
ಪತ್ನಿಯ ನಡವಳಿಕೆಯಲ್ಲಿನ ಬದಲಾವಣೆ ಕಂಡು ಅನುಮಾನಗೊಂಡಿದ್ದ ಆತ ಬೆಂಗಳೂರಿನಲ್ಲಿ ವಿಚಾರಿಸಿದ್ದಾನೆ. ಈ ವೇಳೆ ಸೌಮಿನಿ ದಾಸ್ ಬೆಂಗಳೂರಿನಲ್ಲಿ ಬಿಲ್ ಅಬ್ರಾಹಂ ಎಂಬಾತನ ಜೊತೆ ಲೀವಿಂಗ್ ಟುಗೆದರ್ ರಿಲೇಷನ್ಶಿಪ್ನಲ್ಲಿ ಇರುವುದು ತಿಳಿದು ಬಂದಿದೆ. ಪತ್ನಿಯ ಮತ್ತೊಂದು ಸಂಬಂಧ ತಿಳಿದು ಬರುತ್ತಿದ್ದಂತೆ ಪತಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಈ ಘಟನೆಯ ಬಳಿಕ ತಮ್ಮ ಪ್ರೀತಿ ವಿಚಾರ ಎಲ್ಲರಿಗೂ ತಿಳಿಯಿತು ಅವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇಬ್ಬರು ತಾವು ಇದ್ದ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications