ಪಂಚಾಯಿತಿ ಚುನಾವಣೆ ವಿಳಂಬಕ್ಕೆ ಕೋರ್ಟ್ ಆಕ್ರೋಶ: ಸಚಿವರ ರಿಯಾಕ್ಷನ್ ಏನು?
ಬೆಂಗಳೂರು, ಆಗಸ್ಟ್ 13: ಕರ್ನಾಟಕಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾತ್ರವಲ್ಲದೇ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆ ಸಹ ವಿಳಂಬವಾಗುತ್ತಿದೆ. ಈ ಸಂಬಂಧ ನ್ಯಾಯಾಲಯ ಸಹ ಆಕ್ರೋಶ ಹೊರ ಹಾಕಿದೆ. ಇದು ಸೇರಿದಂತೆ ರಾಜ್ಯ ಪ್ರಮುಖ ವಿಷಯಗಳ ಕುರಿತು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಜಿ.ಪರಮೇಶ್ವರ್, ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಳಂಬವಾಗಿದ್ದು, ಸರ್ಕಾರದ ಗಮನಕ್ಕಿದೆ. ಸೂಕ್ತವಾದ ಸಮಯದಲ್ಲಿ ನಾವು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ. ಕೋರ್ಟ್ ಅಬ್ಸರ್ವೇಷನ್ ಅವರ ವ್ಯಾಪ್ತಿಯಲ್ಲಿ ಮಾಡಿದ್ದಾರೆ.

ಸದ್ಯ ಮೀಸಲಾತಿ, ಕ್ಷೇತ್ರ ವಿಂಗಡಣೆ ಮಾಡಬೇಕಿರುವ ಕಾರಣ, ಈ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಚುನಾವಣೆ ನಡೆಸುವುದು ವಿಳಂಬವಾಗುತ್ತಿದೆ. ಡಿಲಿಮಿಟೇಶನ್ ಮುಗಿದ ಬಳಿಕ ಕೋರ್ಟ್ ಸಲ್ಲಿಸಲಾಗುತ್ತದೆ. ಇದು ತಡವಾದರೆ ಚುನಾವಣೆ ಮತ್ತೆ ಮುಂದೆಕ್ಕೆ ಹೋಗಲಿದೆ.
ಇನ್ನೂ ಹಳೇ ಮೀಸಲಾತಿ ಪ್ರಕಾರವು ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಚುನಾವಣೆ ಎದುರಿಸಬಹುದು. ಈಗಾಗಲೇ ನಾಲ್ಕು ಪಾಲಿಕೆ ಚುನಾವಣೆ ಹಳೆ ಮೀಸಲಾತಿ ಪ್ರಕಾರ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜಮನೆತನದ ವಿರೋಧ
ರಾಜ್ಯದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜಮನೆತನದ ವಿರೋಧ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಅವರು ಹೇಳಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೇವೆ. ಪ್ರಾಧಿಕಾರ ಮಾಡುವ ಉದ್ದೇಶ ಅಲ್ಲಿ ಸಮರ್ಪಕವಾಗಿ ಸರಿಯಾಗಿ ಆಡಳಿತ ನಡೆಯಲಿ ಎಂಬ ಕಾರಣಕ್ಕೆ ಕೆಲವು ದೇವಸ್ಥಾನಗಳಲ್ಲಿ ಈ ರೀತಿ ವ್ಯವಸ್ಥೆ ಇವೆ. ಬೆಳಗಾವಿ ಸವದತ್ತಿಯಲ್ಲಿದೆ, ಅಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತಿದೆ.
ಸವದತ್ತಿಗೆ ಬರುವವರಿಗೆ ಮೂಲಸೌಕರ್ಯ ಒದಗಿಸಲು ಆ ಹಣ ಬಳಕೆ ಮಾಡಲಾಗುತ್ತಿದೆ. ಅದಕ್ಕಾಗಿ ಒಂದು ಪ್ರಾಧಿಕಾರ ಇದ್ದರೆ ಉತ್ತಮ ಎಂಬ ಭಾವನೆ ಇದೆ. ಅದೇ ರೀತಿ ಚಾಮುಂಡಿ ಬೆಟ್ಟ ವಿಚಾರದಲ್ಲೂ ಮಾಡಲಾಗಿತ್ತು ಈಗ ಅವರು ಆಕ್ಷೇಪ ಮಾಡಿದ್ದಾರೆ. ಮುಂದೆ ಕಾನೂನಾತ್ಮಕವಾಗಿ ಏನಾಗುತ್ತೆ ನೋಡೋಣ ಎಂದರು.
ಒಳಮೀಸಲಾತಿಗೆ ಬಗ್ಗೆ ಶೀಘ್ರವೇ ನಿರ್ಧಾರ
ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಡ ಇದೆ. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ ನಾವು ಸಹ ಹೇಳಿದ್ದೇವೆ.

ಚಲವಾದಿ ನಾರಾಯಣ ಸ್ವಾಮಿಗೆ ಪ್ರೋಟೋಕಾಲ್ ಆರೋಪ, ಅವರಿಗೆ ಏನು ಕೊಡಬೇಕು ನಮ್ಮ ಪ್ರೋಟೋಕಾಲ್ ಪ್ರಕಾರ ಡಿಪಿಆರ್ ನವರು ನಿರ್ದಿಷ್ಟವಾಗಿ ಮಾಡಿರುತ್ತಾರೆ. ನನಗೋಸ್ಕರ ಆಗಲೀ ನಾರಾಯಣಸ್ವಾಮಿ ಅವರಿಗೋಸ್ಕರ ನಿಯಮ ಇಲ್ಲ.
ಮೇಲ್ಮನೆ ವಿಪಕ್ಷ ನಾಯಕರಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ. ಆದರೆ ಅವರು ನನಗೆ ಏನು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಅದು ನಿಜವೇ ಆದಲ್ಲಿ, ಸೂಚನೆ ಕೊಡುತ್ತೇನೆ.
ಸಿಎಂಗೆ ವಿರುದ್ಧ ದೂರು: ತೀರ್ಪುಗಾಗಿ ಕಾಯುತ್ತಿದ್ದೇವೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರಿನ ವಿಚಾರದ ತೀರ್ಪು ಕುರಿತ ಪ್ರಶ್ನೆಗೆ ವಿಚಾರಿಸಿದ ಅವರು, ವಿಚಾರಣೆಗೆ ಸಂಬಂಧಪಟ್ಟಂತೆ ಇಂದು ತೀರ್ಪು ಬರುವ ಸಾಧ್ಯತೆ ಇದೆ. ಮೊದಲು ತೀರ್ಪು ಬರಲಿ, ಬಂದ ಮೇಲೆ ಯೋಚನೆ ಮಾಡಬೇಕು.
ಮುಂದೆ ಏನು ಮಾಡಬೇಕು ಎನ್ನುವುದನ್ನು ಚರ್ಚೆ ಮಾಡುತ್ತೇವೆ.
ರಾಜ್ಯಪಾಲರ ತೀರ್ಪಿನ ಮೇಲೆ ತಿರ್ಮಾನ ತೆಗೆದುಕೊಳ್ಳುತ್ತಾರೋ ಇಲ್ಲ ಬಿಟ್ಟು ತೀರ್ಮಾನ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಯಾವುದನ್ನು ಒಂದಕ್ಕೊಂದು ಲಿಂಕ್ ಮಾಡಲು ನಾವು ಹೋಗುವುದಿಲ್ಲ. ಅದು ರಾಜ್ಯಪಾಲರ ಕಚೇರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ರಾಜ್ಯಪಾಲರಿಗೆ ಎಚ್ಚರಿಕೆ
ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಅವರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ. ಸಿಎಂ ವಿರುದ್ಧ ಅವರು ನೀಡಿರುವ ಶೋಕಾಸ್ ನೋಟಿಸ್ ಗೆ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡು ರಾಜ್ಯಪಾಲರಿಗೆ ಸಲಹೆ ನೀಡಿದ್ದೇವೆ. ನೀವು ಮಾಡಿರೋದು ತಪ್ಪು, ನಿಮ್ಮ ನೋಟಿಸ್ ವಾಪಸ್ ಪಡೆಯಿರಿ ಎಂದು ಹೇಳಿದ್ದೇವೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೊಡಬಾರದು ಎಂದು ಹೇಳಿದ್ದೇವೆ. ಅದರ ಬಗ್ಗೆ ಇನ್ನೂ ಏನು ನಿರ್ಣಯ ರಾಜ್ಯಪಾಲರು ತೆಗೆದುಕೊಂಡಿಲ್ಲ. ನಾವು ಕಾದು ನೋಡುತ್ತೇವೆ ಎಂದರು.












Click it and Unblock the Notifications