'ಐಟಿ ಅಧಿಕಾರಿಗಳು ದಾಳಿ ನಡೆಸಿದರೆ ಕುಮಾರಸ್ವಾಮಿ ಮುಖದಲ್ಲಿ ಏಕೆ ಗಾಬರಿ?'
ಬೆಂಗಳೂರು, ಮಾರ್ಚ್ 29: ಭ್ರಷ್ಟ ಅಧಿಕಾರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾಕೆ ಸಿಟ್ಟು ಬರುತ್ತದೆ ಎಂದು ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎಎನ್ ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿರುವ ಅವರು, ಬಿಜೆಪಿಯು ಆದಾಯ ತೆರಿಗೆ ಇಲಾಖೆಯಂಥ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಪ್ಪತ್ನಾಲ್ಕು ಗಂಟೆಗಳ ಕಾಲ ಕುಮಾರಸ್ವಾಮಿ ಅವರು ಮಾಡಿದ ನಾಟಕವನ್ನು ಜನರು ನೋಡಿದ್ದಾರೆ ಎಂದಿದ್ದಾರೆ.
ಐಟಿ ಅಧಿಕಾರಿಗಳೇ ತಮಗೆ ಸಿಕ್ಕ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾಗಿ ಹೇಳಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಉಲ್ಲಂಘ್ಸಿಸಿದ ಗುತ್ತಿಗೆದಾರರು, ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ. ಅಪಾರ ಪ್ರಮಾಣದಲ್ಲಿ ಹಣ- ಚಿನ್ನ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಭ್ರಷ್ಟರ ರಕ್ಷಣೆಗಾಗಿ ರಾಜಕಾರಣಿಗಳ ಒಂದು ಗುಂಪು ಏಕೆ ನಿಂತಿದೆ?
ಅಕ್ರಮ ಆಸ್ತಿ ಹೊಂದಿರುವ ಅಧಿಕಾರಿಗಳ ರಕ್ಷಣೆಗೆ ರಾಜಕಾರಣಿಗಳ ಒಂದು ಗುಂಪು ಏಕೆ ನಿಂತಿದೆ? ಈ ಅಧಿಕಾರಿಗಳು, ಗುತ್ತಿಗೆದಾರರ ಬಳಿ ಇದ್ದ ಹಣ ಅವರಿಗಾಗಿಯೇ ಮೀಸಲಾಗಿ ಇದ್ದದ್ದು ಎಂಬ ಕಾರಣಕ್ಕೆ ಅವರ ಮುಖದಲ್ಲಿ ಗಾಬರಿ ಕಾಣಿಸಿಕೊಳ್ಳುತ್ತಿದೆಯಾ ಎಂದು ರಾಜೀವ್ ಪ್ರಶ್ನೆ ಮಾಡಿದ್ದಾರೆ.

ಆ ಹಣ ತಮ್ಮದು ಅನ್ನೋ ಹಾಗಿದ್ದರೆ ಘೋಷಿಸಿಕೊಳ್ಳಲಿ
ಒಂದು ವೇಳೆ ಆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಹತ್ತಿರ ಇರುವ ಹಣ ತಮ್ಮದು ಎನ್ನುವ ಹಾಗಿದ್ದರೆ ಅದನ್ನು ಹೇಳಿಕೊಳ್ಳಲಿ. ಇದು ಆಷಾಢಭೂತಿತನ. ಈ ರಾಜಕೀಯ ಭ್ರಷ್ಟಾಚಾರವನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ನವ ಭಾರತ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವ ಮಾತೇ ಇಲ್ಲಿ ಇಲ್ಲ.

ಚುನಾವಣೆ ವೇಳೆ ಕಾಂಗ್ರೆಸ್ ಮಿತ್ರ ಪಕ್ಷಗಳು ಮಾಡುವುದು ಹೀಗೆ
ಜತೆಗೆ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳ ಜತೆಗೆ ಇಂಥ ವ್ಯವಹಾರಗಳನ್ನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮಾಡುತ್ತಿರುವುದು ಇದು ಮೊದಲಲ್ಲ, ಇದೇ ಕೊನೆಯೂ ಆಗಲಿಕ್ಕಿಲ್ಲ. ಆದರೆ ಈ ಸಲ ಜನರು ನೋಡುತ್ತಿದ್ದಾರೆ. ಇವರು ಭ್ರಷ್ಟಾಚಾರದ ಸಮರ್ಥನೆಗೆ ನಿಂತಿದ್ದಾರೆ. ಅದಕ್ಕೆ ಕರ್ನಾಟಕದಲ್ಲಿ ಜನರು ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಮಂತ್ರಿಯಾಗಿ ಗೋಪ್ಯತಾ ಪ್ರಮಾಣ ಮುರಿದಿದ್ದಾರೆ ಎಚ್ ಡಿಕೆ
ತೃಣಮೂಲ ಕಾಂಗ್ರೆಸ್ ಕೂಡ ಹೀಗೆಯೇ ಎಂದು ಆರೋಪಿಸಿರುವ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆದಾಯ ಇಲಾಖೆ ದಾಳಿ ಬಗ್ಗೆ ಹೇಗೆ ಗೊತ್ತಾಯಿತು? ಮುಖ್ಯಮಂತ್ರಿಯಾಗಿ ಗೋಪ್ಯತಾ ಪ್ರಮಾಣ ಸ್ವೀಕರಿಸಿರುವ ಅವರು ಈ ವಿಚಾರವನ್ನು ರಾಷ್ಟ್ರೀಯ ಮಾಧ್ಯಮಗಳ ಎದುರು ಹೇಗೆ ತೆಗೆದುಕೊಂಡು ಹೋದರು ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications