ಡಿಸಿಎಂ ಅಶ್ವಥ್ ನಾರಾಯಣ್ 'ಕಿಂಗ್ ಪಿನ್' ಎಂದಿದ್ಯಾಕೆ ಎಚ್ ಡಿಕೆ?
ಬೆಂಗಳೂರು, ಸೆಪ್ಟೆಂಬರ್ 5: ಮಾಜಿ ಮುಖ್ಯಮಂತ್ರಿ- ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆರೋಪಗಳ ಬಗ್ಗೆ ಇದ್ದ ಕಡತಗಳಿಗೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ 2011ರಲ್ಲಿ ಬೆಂಕಿ ಬಿದ್ದ ಪ್ರಕರಣದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ 'ಕಿಂಗ್ ಪಿನ್' ಎಂದು ಕುಮಾರಸ್ವಾಮಿ ಬುಧವಾರ ಆರೋಪಿಸಿದ್ದಾರೆ.
ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ನ (ಬಿಎಂಟಿಎಫ್) ಪೊಲೀಸ್ ಠಾಣೆಯಲ್ಲಿ ಕಡತಗಳ ಕೊಠಡಿಯಲ್ಲಿದ್ದ ದಾಖಲೆಗಳು ಬೆಂಕಿ ಅವಘಡದಲ್ಲಿ ನಾಶವಾಗಿದ್ದವು. ಬಿಎಂಟಿಎಫ್ ಅಂದರೆ ಬಿಬಿಎಂಪಿ, ಬಿಡಿಎ ಹಾಗೂ ಬಿಡಬ್ಲ್ಯುಎಸ್ ಎಸ್ ಬಿಯಲ್ಲಿನ ಅವ್ಯವಹಾರಗಳನ್ನು ತನಿಖೆ ಮಾಡುವ ಸಂಸ್ಥೆ. ಮೇಲ್ ಸ್ತರದ ರಾಜಕೀಯ ನಾಯಕರು, ಗುತ್ತಿಗೆದಾರರು ಬಹುಕೋಟಿ ಮೌಲ್ಯದ ನಕಲಿ ಬಿಲ್ ಹಗರಣದಲ್ಲಿ ಭಾಗಿಯಾದ ಬಗ್ಗೆ ತನಿಖೆ ಮಾಡಲಾಗುತ್ತಿತ್ತು.
"ಉಪ ಮುಖ್ಯಮಂತ್ರಿಗಳು ನವ ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ಇವರು ಏನು ಅಂತ ನಮಗೆ ಗೊತ್ತಿಲ್ಲವಾ? ಪಾಲಿಕೆ ಮುಖ್ಯ್ ಕಚೇರಿಯಲ್ಲಿ ಇದ್ದ ಬಿಬಿಎಂಪಿ ಕಡತಗಳಿಗೆ ಬೆಂಕಿ ಹೊತ್ತಿಸಿದ ಕಿಂಗ್ ಪಿನ್ ಗಳಲ್ಲಿ ಇವರಿಲ್ಲವಾ?" ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

ಶಿವಕುಮಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಅದಕ್ಕೆ ಬೆಲೆ ತೆರುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದರು. ಅದಕ್ಕೆ ಕುಮಾರಸ್ವಾಮಿ ಮೇಲ್ಕಂಡಂತೆ ಪ್ರತಿಕ್ರಿಯಿಸಿದ್ದಾರೆ. ಶಿವಕುಮಾರ್ ವಿರುದ್ಧ ಬಿಜೆಪಿಯ ಕೇಂದ್ರ ನಾಯಕತ್ವ ದ್ವೇಷ ರಾಜಕಾರಣ ಮಾಡುತ್ತಿದೆ ಎಂದ ಅವರು, ಇದು ಮೊದಲ ಬಾರಿಗೆ ಅಲ್ಲ ಎಂದಿದ್ದಾರೆ.
ವಿಚಕ್ಷಣ ದಳದಲ್ಲಿ ಮುಖ್ಯ ಆಯುಕ್ತ ಸ್ಥಾನದಲ್ಲಿ ಇದ್ದ ಎನ್. ವಿಠ್ಠಲ್ ಸೇರಿದಂತೆ ಹಲವು ಅಧಿಕಾರಿಗಳು ದಾಖಲು ಮಾಡಿಟ್ಟಿದ್ದಾರೆ. ಸರಕಾರಗಳು ಹೇಗೆ ಇ. ಡಿ. ಹಾಗೂ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ವಿರೋಧಿಗಳನ್ನು ಹೇಗೆ ಹಣಿಯುತ್ತಿವೆ ಎಂಬುದನ್ನು ಬಯಲು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications