ಬೆಂಗಳೂರು ಮೇಯರ್ ಆಯ್ಕೆಗೆ 24 ಗಂಟೆ ಬಾಕಿ: ಯಾರಿಗೆ ಒಲಿಯುತ್ತೆ ಗೌನ್?
ಬೆಂಗಳೂರು, ಸೆ.27: ಬಿಬಿಎಂಪಿ ಮೇಯರ್ ಚುನಾವಣೆಗೆ ಇನ್ನೂ ಕೇವಲ 24 ಗಂಟೆಗಳು ಮಾತ್ರ ಉಳಿದಿದ್ದು ಮೇಯರ್ ಪಟ್ಟ ಲಿಂಗಾಯತರ ಪಾಲಾಗಲಿದೆಯೇ ಅಥವಾ ಒಕ್ಕಲಿಗರ ಪಾಲಾಗಲಿದೆಯೇ ಎಂದು ಕಾದುನೋಡಬೇಕಿದೆ.
ಬಿಬಿಎಂಪಿ ಮೇಯರ್ ಗಾದಿಗೆ ಜಯನಗರ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಮತ್ತು ಶಾಂತಿನಗರ ವಾರ್ಡ್ ನ ಸೌಮ್ಯ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ಇಬ್ಬರ ಪರವಾಗಿ ಕಾಂಗ್ರೆಸ್ ನ ಪ್ರಭಾವಿ ನಾಯಕು ಬ್ಯಾಟಿಂಗ್ ನಡೆಸುತ್ತಿದ್ದು, ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯು ಕಗ್ಗಂಟಾಂಗಿ ಪರಿಣಮಿಸಿದೆ.
ಮೇಯರ್, ಉಪಮೇಯರ್ ಚುನಾವಣೆ ಸೆ.28ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಮೇಯರ್ ಆಯ್ಕೆ ಸಂಬಂಧ ಬುಧವಾರ ರಾತ್ರಿ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಭೆ ನಡೆಸಿದ್ದಾರೆ.

ಅಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ತೆರಳಲಿದ್ದಾರೆ.
ಸಚಿವ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಅವರು ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಅವರಿಗೆ ಮೇಯರ್ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಆದರೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಲಿಂಗಾಯತ ಸಮುದಾಯದ ಗಂಗಾಂಬಿಕೆ ಮಲ್ಲಿಕಾರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ ಹೀಗಾಗಿ ಮೇಯರ್ ಸ್ಥಾನಕ್ಕೆ ಅಂತಿಮವಾಗಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಸಧ್ಯದ ಕುತೂಹಲವಾಗಿದೆ.












Click it and Unblock the Notifications