ಸಿದ್ದರಾಮಯ್ಯ ಕಾರಿನ ಕೆಂಪು ದೀಪ ತೆಗೆದವರ್ಯಾರು..?!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನಲ್ಲಿದ್ದ ಕೆಂಪು ದೀಪ ನಿನ್ನೆ ಇದ್ದಕ್ಕಿದ್ದಂತೆ ಮಾಯವಾಗಿದೆ! ಅದು ಮಾಯವಾಗಿದ್ದು ಹೇಗೆ ಎಂಬ ಬಗ್ಗೆ ಸ್ವತಃ ಅವರಿಗೂ ಮಾಹಿತಿಯಿಲ್ಲ!
ಬೆಂಗಳೂರು, ಏಪ್ರಿಲ್ 25: ನಿನ್ನೆ (ಏಪ್ರಿಲ್ 24) ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವೊಂದಕ್ಕೆ ಹೊರಟಾಗ ಅವರ ಕಾರಿನಲ್ಲಿ ಮಿನುಗುತ್ತಿದ್ದ ಕೆಂಪು ದೀಪ, ಸಂಜೆಯ ಹೊತ್ತಿಗೆ ಕಾಣೆಯಾಗಿಬಿಟ್ಟಿತ್ತು! ಆ ದೀಪ ಮಾಯವಾಗಿದ್ದು ಹೇಗೆ ಎಂಬುದು ಸ್ವತಃ ಮುಖ್ಯಮಂತ್ರಿಗಳಿಗೂ ಗೊತ್ತಿಲ್ಲ!
ಕೇಂದ್ರ ಸರ್ಕಾರ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸಚಿವರ ಕಾರುಗಳಲ್ಲಿ ಕೆಂಪು ದೀಪವನ್ನು ಉಪಯೋಗಿಸದಂತೆ ತಾಕೀತು ಮಾಡಿರುವುದು ಈಗ ಹಳೇ ವಿಷಯ. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಮ್ಮ ಕಾರಿನಿಂದ ಇನ್ನೂ ಕೆಂಪು ಬತ್ತಿಯನ್ನು ತೆಗೆಸಿರಲಿಲ್ಲ![ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!]
ಈಗಾಗಲೇ ಹಲವು ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಕಾರಿನ ಕೆಂಪು ದೀಪಗಳನ್ನು ತೆಗೆಸಿದ್ದರೂ, ಸಿದ್ದರಾಮಯ್ಯ ಮಾತ್ರ ಅದರತ್ತ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನಿನ್ನೆ ಅವರ ಗಮನಕ್ಕೇ ಬರದೆ ಅವರ ಕಾರಿನಿಂದ ಕೆಂಪು ದೀಪ ಮಾಯವಾಗಿರುವುದು ಅವರನ್ನು ಅಸಮಾಧಾನಗೊಳಿಸಿದೆ.[ಇನ್ಮೇಲೆ, ಭಾರತದಲ್ಲಿ ಪ್ರತಿಯೊಬ್ಬರೂ ವಿಐಪಿಯೇ..!]
ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಫ್ರೀಡಂ ಪಾರ್ಕಿಗೆ ತೆರಳಿದ್ದ ಮುಖ್ಯಮಂತ್ರಿಗಳನ್ನು ಮಾತನಾಡಿಸಿದ ಮಾಧ್ಯಮ ಪ್ರತಿನಿಧಿಗಳು, 'ಕೇಂದ್ರ ಸರ್ಕಾರದ ಆಜ್ಞೆಯಂತೆ, ತಾವು ತಮ್ಮ ಕಾರಿನಲ್ಲಿನ ಕೆಂಪು ದೀಪ ತೆಗೆಸಿದ್ದೀರಿ, ತಮ್ಮ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ' ಎಂದಿದ್ದಾರೆ.
ಈ ಮಾತನ್ನು ಕೇಳಿದ ಸಿದ್ದರಾಮಯ್ಯ, ತಕ್ಷಣವೇ ತಮ್ಮ ಕಾರಿನತ್ತ ನೋಡಿದ್ದಾರೆ. ಅಲ್ಲಿ ಕೆಂಪು ದೀಪ ಇಲ್ಲದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ಅವರು, ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.[ಗೂಟದ ಕಾರಿನ ಬಳಕೆ ನಿಂತರೆ ಖುಷಿ ಪಡೋರು ಪೊಲೀಸರು!]
ನನ್ನ ಕಾರಿನಿಂದ ನನ್ನ ಗಮನಕ್ಕೇ ಬಾರದಂತೆ ಕೆಂಪು ಬತ್ತಿ ಹೇಗೆ ಮಾಯವಾಗಿದೆ ಎಂಬುದು ನನಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಕೆಂಪು ದೀಪ ನಿಷೇಧಿಸಿರುವುದರ ಬಗ್ಗೆಯೂ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರದ ನಿರ್ಧಾರಕ್ಕೆ ತಮ್ಮ ಅಸಮ್ಮತಿಯನ್ನು ಪರೋಕ್ಷವಾಗಿ ಸೂಚಿಸಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಕಾರಿನಿಂದ ಕೆಂಪು ದೀಪ ಮಾಯವಾಗಿದ್ದು ಹೇಗೆ ಎಂಬ ಪ್ರಶ್ನೆ ಮಾತ್ರ ನಿಗೂಢವಾಗಿಯೇ ಇದೆ!