ಸರ್ಕಾರಿ ಶಾಲೆ ಮಾರುತ್ತಿದ್ದರೂ ದಿನೇಶ್ ಗುಂಡೂರಾವ್ ಸುಮ್ಮನಿರುವುದೇಕೆ? ಎಎಪಿ
ಬೆಂಗಳೂರು ಆಗಸ್ಟ್ 19: ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಿಕ್ಕಪೇಟೆಯಲ್ಲಿ ಸರ್ಕಾರಿ ಶಾಲೆ ನಿರ್ಮಿಸಲಾಗಿದೆ. ಈ ಶಾಲೆಯನ್ನು ಬಿಜೆಪಿ ಸರ್ಕಾರ ಮಾರಾಟಕ್ಕೆ ಮುಂದಾದರೂ ಶಾಸಕ ದಿನೇಶ್ ಗುಂಡೂರವ್ ಸುಮ್ಮನಿರಲು ಕಾರಣವೇನು ಎಂದು ಮಾಜಿ ಕೆಎಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಕೆ.ಮಥಾಯಿ ಪ್ರಶ್ನಿಸಿದರು.
ಬೆಂಗಳೂರಿನ ಆಮ್ ಆದ್ಮಿ ಪಾರ್ಟಿ (ಎಎಪಿ) ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಿಕ್ಕಪೇಟೆಯಲ್ಲಿನ ಈ ಶಾಲಾ ಕಟ್ಟಡವನ್ನು ಬಿಜೆಪಿ ಸರ್ಕಾರ ಮಾರಾಟ ಮಾಡಲು ನಿರ್ಧರಿಸಿದೆ. ಆ ಮೂಲಕ ಸಾಕಷ್ಟು ಭ್ರಷ್ಟಾಚಾರಕ್ಕೆ ಮುಂದಾಗಿದೆ. ಇದು ರಾಜ್ಯ ಸರ್ಕಾರದ ಭ್ರಷ್ಟಾಚಾರ ಸ್ವರೂಪವನ್ನು ತೋರಿಸುತ್ತದೆ ಎಂದು ದೂರಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದಾನಿಗಳು ನೀಡಿದ ಜಾಗದಲ್ಲಿ ಚಿಕ್ಕಪೇಟೆಯ ಸರ್ಕಾರಿ ಶಾಲೆ ನಿರ್ಮಿಸಲಾಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಕಟ್ಟಡವನ್ನು ರಾಜ್ಯ ಬಿಜೆಪಿ ಸರ್ಕಾರವು ಮಾರಾಟ ಮಾಡಲು ನಿರ್ಧರಿಸಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ವಿರೋಧಿಸುತ್ತಿಲ್ಲ. ಸರ್ಕಾರಿ ಆಸ್ತಿಯನ್ನು ರಕ್ಷಿಸುವುದು ಶಾಸಕರ ಕರ್ತವ್ಯವಾಗಿದ್ದು, ಸ್ಥಳೀಯ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆಯ ಮಾರಾಟದಲ್ಲಿ ಅವರ ಪಾತ್ರವೇನು ಎಂಬುದು ಜನರಿಗೆ ತಿಳಿಯಬೇಕು ಎಂದು ಅವರು ಆಗ್ರಹಿಸಿದರು.
ಕಮಿಷನ್
ಆಸೆಗೆ
ಸರ್ಕಾರ
ಶಾಲಾ
ಮಾರಲು
ನಿರ್ಧಾರ
ರಾಜ್ಯ ಸರ್ಕಾರ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರದ ಮುಂದುವರಿದ ಭಾಗವಾಗಿ 10 ಸಾವಿರ ಚದರ ಅಡಿ ಇರುವ ನೂರಾರು ಕೋಟಿ ಬೆಲೆಬಾಳುವ ಶಾಲೆ ಮಾರಾಟ ಮಾಡಲು ನಿರ್ಧರಿಸಿದೆ. ಕೋಟಿಗಟ್ಟಲೆ ಕಮಿಷನ್ ಆಸೆಗಾಗಿ ಅಮೂಲ್ಯ ಸಂಪತ್ತನ್ನು ಮಾರುವ ನಿರ್ಧಾರವನ್ನು ಸರ್ಕಾರ ಕೈಬಿಡದಿದ್ದರೆ ಪಕ್ಷದಿಂದ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಒಂದೆಡೆ ಸರ್ಕಾರಿ ಶಾಲೆ ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ರಾಜ್ಯ ಶಿಕ್ಷಣ ಇಲಾಖೆ ಕರೆ ಕೊಟ್ಟಿದೆ. ಮತ್ತೊಂದೆಡೆ ಸರ್ಕಾರವೇ ಐತಿಹಾಸಿಕ ಶಾಲೆಯ ಕಟ್ಟಡ ಮಾರಾಟ ಮಾಡಲು ನಿರ್ಧರಿಸಿದೆ. ಇದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ರವರ ಇಬ್ಬಂದಿತನ ಪ್ರದರ್ಶಿಸುತ್ತಿದೆ. ಸಚಿವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿದ್ದರೆ ಶಾಲಾ ಕಟ್ಟಡವನ್ನು ಸರ್ಕಾರದ ವಶದಲ್ಲೇ ಉಳಿಸಿಕೊಳ್ಲಬೇಕು ಎಂದರು.
300ಕೋಟಿ ರೂ.ಶಾಲೆ 50ಕೋಟಿಗೆ ಮಾರಾಟ
ಎಎಪಿ ಮುಖಂಡ ಗೋಪಿನಾಥ್ ಮಾತನಾಡಿ, "ಸರ್ಕಾರಿ ಶಾಲೆಯನ್ನು ಮಾರಾಟ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಕಟ್ಟಡದಲ್ಲಿ ಕೇವಲ ಶಾಲೆ ಮಾತ್ರವಲ್ಲದೇ 141 ಮಳಿಗೆಗಳು, ಬ್ಯಾಂಕ್ ಹಾಗೂ ವಸತಿ ಗೃಹವಿದೆ. ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಈ ಆಸ್ತಿಯನ್ನು ಕೇವಲ 50 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಪ್ರತಿಯಾಗಿ ಖರೀದಿದಾರರಿಂದ ಶಾಸಕರು, ಸಚಿವರು ಹಾಗೂ ಸಿಎಂಗೆ ಕೋಟಿಗಟ್ಟಲೆ ಕಮಿಷನ್ ಪಡೆಯಲಿದ್ದಾರೆ," ಎಂದು ಅವರು ಆಪಾದಿಸಿದರು.