ಬದುಕಿರುವವರೆಗೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲು ಬಿಡೆವು: ಡಿಕೆಶಿ
ಬೆಂಗಳೂರು, ಡಿಸೆಂಬರ್ 18: ನಾವಿನ್ನೂ ಸತ್ತಿಲ್ಲ, ಬದುಕಿದ್ದೇವೆ, ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, 'ಇಂದಿರಾ ಗಾಂಧಿ ಎಂಬುದು ದೇಶದ ಜನರ ಭಾವನಾತ್ಮಕ ವಿಷಯ ಭಾವನೆಗಳ ಜೊತೆ ರಾಜಕೀಯ ಮಾಡಲು ಪ್ರಯತ್ನಿಸಬೇಡಿ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡುತ್ತೇನೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಅಟಲ್ ಜನಸ್ನೇಹಿ ಕೇಂದ್ರ, ಅಟಲ್ ಸಾರಿಗೆ ಮಾಡಲಾಗಿತ್ತು. ಆದರೆ ನಾವು ಅಧಿಕಾರಕ್ಕೆ ಬಂದಾಗ ಅದನ್ನು ಬದಲಾಯಿಸಲಿಲ್ಲ, ಹೆಸರಿನ ರಾಜಕೀಯ ನಮಗೆ ಬೇಕಿರಲಿಲ್ಲ, ಅಟಲ್ ಹೆಸರು ದೇಶಕ್ಕೆ ಬೇಕಿತ್ತು' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಂದಾಯ ಸಚಿವ ಆರ್.ಅಶೋಕ್ ಕನಸು ಕಾಣುತ್ತಿದ್ದಾರೆ. ನಾವಿನ್ನು ಬದುಕಿದ್ದೇವೆ, ಸತ್ತಿಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಈ ಹಿಂದೆ ಸರ್ಕಾರಗಳು ಯಾವ ರೀತಿ ನಡೆದಿವೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಪೌರತ್ವ ಕಾಯ್ದೆಯ ವಿರುದ್ಧವೂ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಕಾಯ್ದೆಯು ಅಸಾಂವಿಧಾನಿಕ. ದೇಶವನ್ನು ಒಡೆಯುವ ಕಾಯ್ದೆ ಅದಾಗಿದೆ ಎಂದು ಹೇಳಿದರು.












Click it and Unblock the Notifications