ರಾಜ್ಯದಲ್ಲಿ ನೀರಿನ ದರ ಪರಿಷ್ಕರಣೆಗೆ ಸಮಿತಿ ರಚನೆ
ಬೆಂಗಳೂರು, ಡಿ. 1: ದಶಕದ ನಂತರ ರಾಜ್ಯ ಸರ್ಕಾರ ಈಗ ನೀರಿನ ದರ ಪರಿಷ್ಕರಣೆಗೆ ಮುಂದಾಗಿದೆ. 2002ರ ನಂತರ ನೀರಿನ ದರ ಪರಿಷ್ಕರಣೆಗೆ ಸರ್ಕಾರ ಮುಂದಾಗಿರಲಿಲ್ಲ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ನೀರಿನ ದರ ಪರಿಷ್ಕರಣೆಗಾಗಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎರಡು ತಿಂಗಳೊಳಗೆ ಕೃಷಿ, ಕೈಗಾರಿಕೆ ಹಾಗೂ ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ನೀರಾವರಿ ಕಾಯ್ದೆ 1957ರ ಪ್ರಕಾರ ನೀರಿನ ದರವನ್ನು ಯೋಜನೆಗಳಲ್ಲಿ ನೀಡಿರುವ ಸವಲತ್ತುಗಳು ಹಾಗೂ ಬೆಳೆಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಅದರಂತೆಯೇ ಕನಿಷ್ಠ ಯೋಜನೆಗಳ ನಿರ್ವಹಣಾ ವೆಚ್ಚಕ್ಕೆ ಸರಿದೂಗುವಂತೆ ನೀರಿನ ದರ ಪರಿಷ್ಕರಿಸುವ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹನಿ ನೀರಾವರಿ, ಏತ ನೀರಾವರಿ, ಇಆರ್ಎಂ ಯೋಜನೆಗಳು ಹಾಗೂ ಸೂಕ್ಷ್ಮ ನೀರಾವರಿ ಅಳವಡಿಸಿದ ಬೆಳೆಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗುವುದು. ಕುಡಿಯಲು ಹಾಗೂ ಕೈಗಾರಿಕೆಗಾಗಿ ಕಾಲುವೆ, ಕೆರೆ, ಅಣೆಕಟ್ಟು ಇತರ ಮೂಲಗಳಿಂದ ಪಡೆಯುವ ನೀರಿನ ದರಗಳನ್ನು ಪರಿಷ್ಕರಿಸಲಾಗುವುದು ಎಂದು ಸಚಿವರು ವಿವರಿಸಿದರು. [ಎಲ್ಲ ಮಹಾನಗರಗಳಲ್ಲಿ ನೀರಿನ ದರ ಹೆಚ್ಚಳ]
ಶೇ. 25ರಷ್ಟು ಹಣ ಸಂಗ್ರಹ: ನಿರ್ವಹಣಾ ವೆಚ್ಚ ಸಂಗ್ರಹದಲ್ಲಿ ದಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ನಿಗದಿ ಪಡಿಸಿದ ಗುರಿಯ ಶೇ. 25ರಷ್ಟು ಹಣವನ್ನಷ್ಟೇ ಸಂಗ್ರಹಿಸಲಾಗುತ್ತಿದೆ. ಹಂತ ಹಂತವಾಗಿ ಲೋಪಗಳನ್ನು ಸರಿಪಡಿಸಲಾಗುವುದು. ಸಮರ್ಪಕ ನೀರು ಪೂರೈಕೆಯಾಗುತ್ತಿರುವ ಪ್ರದೇಶದಲ್ಲಿ ಶುಲ್ಕ ಸಂಗ್ರಹವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]
ಕಾಡಾ ಮತ್ತು ವಾಲ್ಮಿ ಸುಧಾರಣೆಗೆ ಕ್ರಮ: ರಾಜ್ಯದಲ್ಲಿ ಆರು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಗಳು ಇವೆ. ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅಧ್ಯಯನ ಸಮಿತಿ ರಚಿಸಲಾಗಿದೆ. ಈ ಸಮಿತಿಯು ರಾಜಸ್ಥಾನ, ಆಂದ್ರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿನ ಕಾಡಾ ಹಾಗೂ ವಾಲ್ಮಿ ಸಂಸ್ಥೆಗಳ ಆಡಳಿತ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಇದೇ ವರ್ಷ ಸೆಪ್ಟೆಂಬರ್ 19ರಂದು ವರದಿ ಸಲ್ಲಿಸಿದೆ. ಈ ಸಮಿತಿಯು ನೀಡಿರುವ ಶಿಫಾರಸುಗಳ ಅನುಷ್ಠಾನದ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಮಿತಿಯ ಅಧ್ಯಕ್ಷರಾಗಿದ್ದ ಎಂ. ಶಿವಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಡಾ ಮತ್ತು ವಾಲ್ಮಿಗಳ ಆಡಳಿತ ವ್ಯವಸ್ಥೆ ಉತ್ತಮವಾಗಿದೆ. ಆದರೆ ಮಾನವ ಸಂಪನ್ಮೂಲದ ಕೊರತೆ, ವಿವಿಧ ಇಲಾಖೆಗಳ ನಡುವಣ ಸಮನ್ವಯದ ಕೊರತೆಯಿಂದ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಅಧ್ಯಯನ ವರದಿಯಲ್ಲಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲಾಗಿದೆ ಎಂದು ವಿವರಿಸಿದರು. [ಬೆಂಗಳೂರು ನೀರು ಸರಬರಾಜು ಮಂಡಳಿ ವೆಬ್ ಸೈಟ್]
ಜಲ ಸಂಪನ್ಮೂಲ ಇಲಾಖೆಯನ್ನುಇ ಲೋಕೋಪಯೋಗಿ ಇಲಾಖೆಯಿಂದ ಬೇರ್ಪಡಿಸುವ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ. ಇದರಿಂದ ಇಲಾಖೆಯ ವಿಶೇಷ ವಿಷಯಗಳಲ್ಲಿ ಇಂಜಿನಿಯರ್ಗಳಿಗೆ ತರಬೇತಿ ನೀಡಿ ಅವರ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದರು.
ಸನ್ನತಿ ಏತ ನೀರಾವರಿ ಯೋಜನೆ: ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಒಟ್ಟು 30 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದ ಸನ್ನತಿ ಏತ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಪರಿಸರ ತೀರುವಳಿ ನೀಡಿದೆ. ಶೀಘ್ರ ಕೇಂದ್ರ ಜಲ ಆಯೋಗದ ಅನುಮೋದನೆ ಪಡೆದು, ಕೇಂದ್ರ ಧನ ಸಹಾಯ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.