ಹತ್ಯೆಗೀಡಾದ ಗೌರಿ ಅವರಿಗೆ ಪ್ರಾಣ ಬೆದರಿಕೆಯಿತ್ತೆ?
ಬೆಂಗಳೂರು, ಸೆಪ್ಟೆಂಬರ್ 05 : ಎಡಪಂಥೀಯ ವಿಚಾರವಾದಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆ ಮತ್ತು ಹತ್ಯೆ ಮಾಡಿರುವ ರೀತಿ ಇಡೀ ಕರ್ನಾಟಕವನ್ನೇ ನಡುಗಿಸಿದೆ. 'ಲಂಕೇಶ್' ವಾರಪತ್ರಿಕೆಯ ಸಂಪಾದಕಿಯಾಗಿದ್ದ ಅವರಿಗೆ ಯಾರಿಂದಲಾದರೂ ಜೀವಬೆದರಿಕೆಯಿತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಕೆಲವೇ ದಿನಗಳ ಹಿಂದೆ ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ರಾಮಲಿಂಗಾ ರೆಡ್ಡಿಯವರು, ಅವರಿಗೆ ಯಾರಿಂದಲಾದರೂ ಜೀವ ಬೆದರಿಕೆ ಇದ್ದಿದ್ದರೆ ಖಂಡಿತವಾಗಿ ಪೊಲೀಸ್ ಇಲಾಖೆಗೆ ದೂರು ನೀಡಿರುತ್ತಿದ್ದರು. ಅವರು ಯಾವುದೇ ದೂರು ನೀಡಿರದ ಕಾರಣ ಅವರಿಗೆ ಜೀವ ಬೆದರಿಕೆ ಇರಲಿಲ್ಲ ಎಂದು ತಿಳಿಯಬೇಕಾಗಿದೆ ಎಂದಿದ್ದಾರೆ.
ಅವರ ಮೇಲೆ ಸುಮಾರು ಏಳು ಸುತ್ತು ಗುಂಡು ಹಾರಿಸಲಾಗಿದ್ದು, ಹಣೆಗೆ ಒಂದು ಮತ್ತು ಎದೆಯ ಮೇಲೆ ಒಂದು ಗುಂಡುಗಳು ಬಿದ್ದಿದ್ದು, ನಾಲ್ಕು ಗುಂಡುಗಳು ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಗೋಡೆಗೆ ಬಡಿದಿವೆ. ಗುಂಡುಗಳನ್ನು ಅತ್ಯಂತ ಹತ್ತಿರದಿಂದ ಹಾರಿಸಿರುವುದನ್ನು ನೋಡಿದರೆ, ಮೊದಲೇ ಯೋಜನೆ ರೂಪಿಸಿಕೊಂಡೇ ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ.

ಕೇವಲ ಒಂದು ತಿಂಗಳ ಹಿಂದಷ್ಟೇ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಅವರೊಂದಿಗೆ ಮಾತನಾಡುತ್ತ, ತಮಗೆ ಯಾರೋ ಜೀವಬೆದರಿಕೆ ಕರೆ ಮಾಡುತ್ತಿದ್ದಾರೆ ಎಂಬ ಸಂಗತಿ ಹಂಚಿಕೊಂಡಿದ್ದರಂತೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲವೆಂದು ಸುಮ್ಮನಿದ್ದದ್ದು ಅವರ ಜೀವಕ್ಕೇ ಮುಳುವಾಗಿದೆ.
ಎಡಪಂಥೀಯ ಬಲವಾದ ಪ್ರತಿಪಾದಕಿಯಾಗಿದ್ದ ಗೌರಿ ಲಂಕೇಶ್ ಅವರು ನಕ್ಸಲೀಯರ ಪರವಹಿಸಿ ಹಲವಾರು ಬಾರಿ ಮಾತನಾಡಿದ್ದರು ಮತ್ತು ಹಲವಾರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಈ ವಿಚಾರಧಾರೆಯಿಂದಾಗಿ ಗೌರಿ ಲಂಕೇಶ್ ಅವರು ತೀವ್ರ ಟೀಕೆಗೂ ಗುರಿಯಾಗಿದ್ದರು.
2008ರಲ್ಲಿ ಲಂಕೇಶ್ ವಾರಪತ್ರಿಕೆಯಲ್ಲಿ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಮತ್ತು ಮತ್ತೊಬ್ಬ ಮುಖಂಡ ಉಮೇಶ್ ಎಂಬುವವರ ವಿರುದ್ಧ ಲೇಖನ ಪ್ರಕಟಿಸಿದ್ದಕ್ಕಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಅವರಿಗೆ 2016ರ ನವೆಂಬರ್ 29ರಂದು 6 ತಿಂಗಳು ಜೈಲು ಮತ್ತು 10 ಸಾವಿರ ರುಪಾಯಿ ದಂಡ ಕೂಡ ವಿಧಿಸಲಾಗಿತ್ತು.
ಗೌರಿ ಲಂಕೇಶ್ ಹತ್ಯೆಯ ತನಿಖೆಗಾಗಿ ಪೊಲೀಸ್ ಇಲಾಖೆಯಿಂದ 3 ತಂಡಗಳನ್ನು ರಚಿಸಲಾಗಿದ್ದು, ತನಿಖೆ ನಡೆದ ನಂತರವಷ್ಟೇ ತಿಳಿದುಬರಬೇಕಿದೆ.












Click it and Unblock the Notifications