ಕೆಪಿಎಸ್ಸಿ ಎದುರು ಕೈಕಟ್ಟಿನಿಂತ ಪದವೀಧರರ ಕರುಣಾಜನಕ ಕಥೆಗಳು
Recommended Video

ಬೆಂಗಳೂರು, ಡಿಸೆಂಬರ್ 4: ಇವರ ಹೆಸರು ಪಲ್ಲವಿ ಕಂಕುಳಲ್ಲಿ ಎರಡು ವರ್ಷದ ಮಗುವಿದೆ ಇವರು ನಿಂತಿರುವುದು ಬೆಂಗಳೂರಿನ ಶಕ್ತಿ ಕೇಂದ್ರ ವಿಧಾನ ಸೌಧದ ಹಿಂಭಾಗದಲ್ಲಿರುವ ಉದ್ಯೋಗ ಸೌಧದ ಎದುರು.
ತಮ್ಮ ಮಗುವಿಗೆ ಎರಡು ತಿಂಗಳು ಆಗಿದ್ದಾಗ ಶೀಘ್ರಲಿಪಿಗಾರರ ಹುದ್ದೆಗೆ ಪರೀಕ್ಷೆ ಬರೆದಿದ್ದಾರೆ. ಈಗ ಮಗುವಿಗೆ ಭರ್ತಿ ಎರಡು ವರ್ಷ, ಆದಾಗ್ಯೂ ಅದೇ ಉದ್ಯೋಗಕ್ಕಾಗಿ ಇದೀಗ ಕೆಪಿಎಸ್ಸಿ ಮುಂದೆ ಪ್ರತಿಭಟನೆಗೆ ಇಳಿದಿದ್ದಾಳೆ. ಕಳೆದ ಎರಡು ವರ್ಷಗಳಿಂದ ಹತ್ತಾರು ಬಾರಿ ಕೆಪಿಎಸ್ಸಿಗೆ ಉದ್ಯೋಗಕ್ಕಾಗಿ ಅಲೆದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಲೇ ಇಲ್ಲ.
ಇದು ಕೇವಲ ಪಲ್ಲವಿಯೊಬ್ಬರ ಕಥೆಯಲ್ಲ. ಇಂತಹ ನೂರಾರು ಯುವಕ ಯುವತಿಯರು ಉದ್ಯೋಗದ ಕನಸು ಹೊತ್ತು,, ದಿನನಿತ್ಯ ಕೆಪಿಎಸ್ಸಿಗೆ ಅಲೆಯುತ್ತಿದ್ದಾರೆ. ಆದರೆ ಕೆಪಿಎಸ್ಸಿಯಲ್ಲಿ ಮನೆ ಮಾಡಿರುವ ಜಿಡ್ಡುಗಟ್ಟಿದ ವ್ಯವಸ್ಥೆ ನಿಷ್ಕ್ರಿಯ ಆಡಳಿತ ಅಧ್ಯಕ್ರೂ, ಕಾರ್ಯದರ್ಶಿಗಳು, ಸದಸ್ಯರು ಅಧಿಕಾರಿಗಳು ಹಾಗೂ ನೌಕರರ ವಿಳಂಬ ಧೋರಣೆ, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಿಂದಾಗಿ ರಾಜ್ಯ ಸರ್ಕಾರ ವಹಿಸಿರುವ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವರ್ಷಗಟ್ಟಲೆ ಪೂರ್ಣಗೊಳ್ಳುತ್ತಿಲ್ಲ.

ಬಹುತೇಕ ನೇಮಕಾತಿ ಪ್ರಕರಣಗಳು, ಹೈಕೋರ್ಟ್ ಮೆಟ್ಟಿಲೇರದೆ ಪೂರ್ಣಗೊಳ್ಳುವುದೇ ಇಲ್ಲ ಎಂಬಂತಹ ಆನಾರೋಗ್ಯಕರ ಬೆಳವಣಿಗೆ ಕೆಪಿಎಸ್ಸಿಯಲ್ಲಿ ನಡೆಯುತ್ತಿದೆ.
ಇದಲ್ಲೆದರಿಂದ ಬೇಸತ್ತ ನೂರಾರು ಯುವಕರು ಇದೀಗ ಹೋರಾಟದ ಹಾದಿ ಹಿಡಿದಿದ್ದಾರೆ, ಅನೇಕರು ಸರ್ಕಾರಿ ಹುದ್ದೆಗಳ ಆಸೆಯನ್ನೇ ಬಿಟ್ಟು ಬೇರೆ ಉದ್ಯೋಗದತ್ತ ಮುಖಮಾಡಿದ್ದಾರೆ.
ವಯೋಮಿತಿ ಮೀರುತ್ತಿರುವ ಹತಾಶ ಯುವಕ-ಯುವತಿಯರು ಆತ್ಮಹತ್ಯೆ ಮಾತುಗಳನ್ನಾಡುತ್ತಿದ್ದಾರೆ. ಸರ್ಕಾರ ಹಾಗೂ ಕೆಪಿಎಸ್ಸಿ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್ಸಿ ಯುವಕರ ಬದುಕಿಗೆ ದಾರಿದೀಪವಾಗುವ ಬದಲು ಭ್ರಷ್ಟಾಚಾರ ಕಲಿಸುವ ಅಡ್ಡದಾರಿಯತ್ತ ಮುನ್ನಡೆಸುತ್ತಿದೆ.

ಕೆಪಿಎಸ್ಸಿ ನಂಬಿಕೊಂಡು ಮದುವೆ ಮುಹೂರ್ತಗಳನ್ನು ಫಿಕ್ಸ್ ಮಾಡಿಕೊಂಡಿದ್ದ ಅನೇಕ ಕುಟುಂಬಗಳು ಕೆಪಿಎಸ್ಸಿ ವಿಳಂಬ ನೀತಿಯಿಂದಾಗಿ ಕುಟುಂಬ-ಕುಟುಂಬಗಳ ನಡುವೆ ಬಿರುಕು ಉಂಟಾದ ಘಟನೆಗಳೂ ನಡೆದಿವೆ.
ಉದ್ಯೋಗಾಕಾಂಕ್ಷಿ ಅಂಗವಿಕಲರು ಕೆಪಿಎಸ್ಸಿಯ ಕೇಂದ್ರ ಕಚೇರಿ ಉದ್ಯೋಗ ಸೌಧದ ಮುಂದೆ ನಿತ್ಯ ಭಿಕ್ಷುಕರಂತೆ ಅಲೆದಾಡುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ಇಷ್ಟೆಲ್ಲಾ ಅವಘಡಗಳ ಬಳಿಕವೂ ಎಚ್ಚೆತ್ತುಕೊಳ್ಳದ ಕೆಪಿಎಸ್ಸಿ ವಿರುದ್ಧ ಆಕ್ರೋಶ ದಿನದಿಂದ ದಿನಕ್ಕೆ ಮಡುಗಟ್ಟುತ್ತಿದೆ.

ಮಂಗಳವಾರ ಪ್ರತಿಭಟನೆ ನಡೆಸಿದ ಅನೇಕ ಯುವಕ ಯುವತಿಯರ ಮಾತಿನಲ್ಲಿ ಕೆಪಿಎಸ್ಸಿ ವಿರುದ್ಧದ ಆಕ್ರೋಶದ ಕಟ್ಟೆ ಒಡೆಯುವ ದಿನಗಳು ದೂರವಿಲ್ಲ ಎಂಬುದು ವೇದ್ಯವಾಗುತ್ತಿತ್ತು.












Click it and Unblock the Notifications