ಮತದಾರರ ಪಟ್ಟಿ ಪರಿಷ್ಕರಣೆ: ಸೂಪರ್ ಚೆಕ್ಕಿಂಗ್ಗಾಗಿ ಮನೆ ಮನೆಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತರು
ಬೆಂಗಳೂರು, ಡಿಸೆಂಬರ್ 14: ಕೇಂದ್ರ ಚುನಾವಣಾ ಆಯೋಗ ನಿರ್ದೇಶಕನದ ಮೇರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನೆ ಮನೆಗಳಿಗೆ ಭೇಟಿ ನೀಡಿ ಬುಧವಾರ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ಪ್ರತಿ ವರ್ಷವೂ ಮತದಾರ ಪಟ್ಟಿ ಪರಿಷ್ಕರಣೆಯನ್ನು ಮಾಡಲಾಗುತ್ತದೆ. ಅದರಂತೆ ಚುಣಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಶುದ್ಧೀಕರಣವನ್ನು ಅಧಿಕಾರಿಗಳು ಸರಿಯಾಗಿ ಮಾಡಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಲಾಯಿತು. ಅದಕ್ಕಾಗಿ ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನಿಡಿ ಮತದಾರರ ಪಟ್ಟಿ ಪರಿಶೀಲನೆ ಮಾಡಲಾಯಿತು ಎಂದು ಹೇಳಿದರು.
ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯಗಳನ್ನು ಈಗಾಗಲೇ ನಡೆಸಲಾಗಿತ್ತು. ನಂತರ ನವೆಂಬರ್ 9 ರಂದು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಿಸಲಾಯಿತು. ಸದರಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ ಇಲ್ಲವೇ ತಪ್ಪಾಗಿದ್ದಲ್ಲಿ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಬಹುದಾಗಿದೆ. ಅದಕ್ಕೆಂದು ಚುನವಣಾ ಆಯೋಗವು ನಮೂನೆ 6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನವೆಂಬರ್ 9 ರಿಂದ ಡಿಸೆಂಬರ್ 8ರವರೆಗೆ ಅವಕಾಶ ಕಲ್ಪಿಸಿತ್ತು. ಈ ವೇಳೆ ಎಲ್ಲಾ ಬೂತ್ಮಟ್ಟದ ಅಧಿಕಾರಿಗಳು (ಬಿಎಲ್ಓ) ಮತ್ತು ಬಿಎಲ್ಓ ಮೇಲ್ವಿಚಾರಕರು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಶುದ್ಧೀಕರಿಸುವ ಕಾರ್ಯ ಮಾಡಿದ್ದಾರೆ ಎಂದರು.

ಈ ಬಿಎಲ್ಓ ಮತ್ತು ಬಿಎಲ್ಓ ಮೇಲ್ವಿಚಾರಕರ ಶುದ್ಧೀಕರಣದ ನಂತರ ಜಿಲ್ಲಾ ಚುನಾವಣಾ ಅಧಿಕಾರಿ, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು ಕೆಲವು ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದರ ಬಗ್ಗೆ ಸೂಪರ್ ಚೆಕ್ಕಿಂಗ್ ಮಾಡುತ್ತಾರೆ. ಅದರ ಭಾಗವಾಗೇ ಬುಧವಾರ ಗೋವಿಂದರಾಜ ನಗರದ ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದ ಸುತ್ತಮುತ್ತ ಮತ್ತು ವಿಜಯನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ಪರಿಶೀಲಿಸಲಾಗಿದೆ ಎಂದು ಅವರು ವಿವರಿಸಿದರು.
12 ನಮೂನೆಗಳ ಪರಿಶೀಲನೆ
ಮನೆ ಮನೆಗಳಿಗೆ ಭೇಟಿ ನೀಡಿ 12 ನಮೂನೆಗಳನ್ನು ಸೂಪರ್ ಚೆಕ್ಕಿಂಗ್ ಮಾಡಲಾಯಿತು. ಪರಿಶೀಲನೆಯ ವೇಳೆ ಎಲ್ಲವೂ ಸರಿಯಿದ್ದು, ನಮೂನೆಗಳಿಗೆ ಮನೆಯವರ ಹೆಸರು, ವಿಳಾಸ, ಸಹಿ ಪರಿಶೀಲನೆಯ ಜೊತೆಗೆ ಎರಡು ಕಡೆ ಹೆಸರಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಯ ಜೊತೆ ಮಾತನಾಡಿ ಒಂದು ಕಡೆ ಹೆಸರನ್ನು ತೆಗೆಸಲಾಗುವುದು. ಕೆಲವು ನಮೂನೆಗಳಲ್ಲಿ ಅಧಿಕಾರಿಗಳು ಸಮಯ ಹಾಗೂ ದಿನಾಂಕವನ್ನು ಸರಿಯಾಗಿ ನಮೂದಿಸದಿರುವುದು ಕಂಡು ಬಂದದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚಿಸಿದರು.

ಮುಖ್ಯ ಆಯುಕ್ತರಿಗೆ ಅಪರ ಜಿಲ್ಲಾ ಚುನಾವಣಾ ಅಧಿಕಾರಿ (ದಕ್ಷಿಣ) ಹಾಗೂ ದಕ್ಷಿಣ ವಲಯ ಜಂಟಿ ಆಯುಕ್ತರಾದ ಜಗದೀಶ್ ನಾಯ್ಕ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಉಮೇಶ್ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದರು.












Click it and Unblock the Notifications