Voter data theft: ಪೊಲೀಸರಿಂದ ಬಿಬಿಎಂಪಿ ಆರ್ಒಗಳ ವಿಚಾರಣೆ
ಬೆಂಗಳೂರು, ನವೆಂಬರ್ 21: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿದ್ದ ಚಿಲುಮೆ ಸಂಸ್ಥೆ ಮುಖ್ಯಸ್ಥ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಸೋಮವಾರ ಬಿಬಿಎಂಪಿ ಕೆಲವು ಅಧಿಕಾರಿಗಳು ವಿಚಾರಣೆಗೆ ಹಾಜರಾಗಲಿದ್ದಾರೆ.
ಬಿಬಿಎಂಪಿಯು ಹಲಸೂರು ಗೇಟ್ ಹಾಗೂ ಕಾಡುಗೋಡಿಯ ಪೊಲೀಸ್ ಠಾಣೆಯಲ್ಲಿ ಅಕ್ರಮದ ಕುರಿತು ತನಿಖೆ ನಡೆಸುವಂತೆ ದೂರು ನೀಡಿತ್ತು. ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಸಹೋದರ ಕೆಂಪೇಗೌಡ ಸೇರಿದಂತೆ ಐವರನ್ನು ಇದುವರೆಗೂ ಬಂಧಿಸಲಾಗಿದೆ.
ಶಿವಮೊಗ್ಗದಲ್ಲಿ 6 ಪೊಲೀಸ್ ಠಾಣೆಯ 82 ರೌಡಿಗಳ ಪರೇಡ್, ಖಡಕ್ ವಾರ್ನಿಂಗ್
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾತನಾಡಿ, ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಚಿಲುಮೆಯ ಮುಖ್ಯಸ್ಥ ರವಿಕುಮಾರ್ ಲಾಲ್ಬಾಗ್ ಸಮೀಪ ವಕೀಲರ ಭೇಟಿಗೆ ಆಗಮಿಸಿದ್ದರು. ಈ ವೇಳೆ ರವಿಕಮಾರ್ ಬಂಧನವಾಗಿದೆ. ಸಂಸ್ಥೆಯ ಮೇಲ್ವಿಚಾರಕ ಕೆಂಪೇಗೌಡ. ಚಿಲುಮೆ ಸಂಸ್ಥೆ ಸಿಬ್ಬಂದಿ ಧರ್ಮೇಶ್ ಮತ್ತು, ರೇಣುಕಾ ಪ್ರಸಾದ್ ಹಾಗೂ ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ ಪ್ರಜ್ವಲ್ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ವಿಚಾರಣೆ; "ಈ ಮೂಲಕ ತನಿಖೆ ಇನ್ನಷ್ಟು ಚುರುಕುಗೊಳ್ಳುತ್ತಿದೆ. ಬಂಧಿತರ ಪೈಕಿ ಡಿಜಿಟಲ್ ಆಪ್ ಡೆವಲಪ್ ಮಾಡಿದವರ ಲ್ಯಾಪ್ಟಾಪ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿಚಾರಣೆ ಮುಂದುವರಿದಿದ್ದು, ಸೋಮವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರ್ಒಗಳನ್ನು ವಿಚಾರಣೆ ನಡೆಸಲಾಗುವುದು" ಎಂದು ಡಿಸಿಪಿ ತಿಳಿಸಿದರು.
"ಮತದಾರರ ದತ್ತಾಂಶ ಸಂಗ್ರಹದಲ್ಲಿ ಮೊದಲು ಕೆಂಪೇಗೌಡ ಆಪ್ಒಂದರ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ರವಿಕುಮಾರ್ಗೆ ನೀಡುತ್ತಿದ್ದ. ಆದರೆ ನಿಯಮ ಬಾಹಿರವಾಗಿ ದುರ್ಬಳಕೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಆರೋಪಿ ಕೆಂಪೇಗೌಡ ಈ ಬಗ್ಗೆ ಬಹಿರಂಗಪಡಿಸಿದ್ದಾನೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 15 ಜನರನ್ನು ವಿಚಾರಣೆ ಮಾಡಲಾಗಿದೆ" ಎಂದರು.
ಸಂಗ್ರಹಿಸಿದ ಮಾಹಿತಿ ದುರ್ಬಳಕೆ ಪತ್ತೆ; ಡಿಜಿಟಲ್ ಆಪ್ ಡೆವಲಪ್ ಮಾಡಿದವರ ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲ ವಿಧದ ಮಾಹಿತಿ, ಸಾಕ್ಷಾಧಾರಳನ್ನು ಸಂಗ್ರಹಿಸಲಾಗುತ್ತಿದೆ. ಇಂದಿನಿಂದ ಬಿಬಿಎಂಪಿ ಕೆಲ ಅಧಿಕಾರಿಳಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮಾಹಿತಿ ಹಂಚಿಕೊಳ್ಳಲಾಗುತ್ತಿದ್ದ ಆಪ್ನಲ್ಲಿ ಸರ್ವರ್ ಡೌನ್ ಮಾಡಲಾಗಿದೆ.
"ಆರೋಪಿ ಕೆಂಪೇಗೌಡ ದತ್ತಾಂಶಗಳ ಬಗ್ಗೆ ಕೆಲವು ವಿಚಾರಗಳನ್ನು ಹೇಳಿದ್ದಾರೆ. ಮತ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿದ್ದು ಗೊತ್ತಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಜಾತಿ, ಉಪಜಾತಿ, ಲಿಂಗ ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ" ಎಂದು ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದರು.