Voter Data Theft: ಅಧಿಕಾರಿಗಳೇ ಚಿಲುಮೆ ಸದಸ್ಯರಿಗೆ ಐಡಿ ನೀಡಿದ್ದರು
ಬೆಂಗಳೂರು, ನವೆಂಬರ್ 25: ಮತದಾರರ ದತ್ತಾಂಶ ಕಳ್ಳತನ ಪ್ರಕರಣದಲ್ಲಿ 'ಚಿಲುಮೆ' ಸಂಸ್ಥೆಯ ಪ್ರತಿನಿಧಿಗಳಿಗೆ ಬಿಬಿಎಂಪಿಯ ಕೆಲವು ಅಧಿಕಾರಿಗಳೇ ಮತಗಟ್ಟೆ ಹಂತದ ಅಧಿಕಾರಿ ಗುರುತಿನ ಚೀಟಿ ಮಾಡಿಕೊಟ್ಟಿದ್ದಾರೆ ಎಂಬ ಸತ್ಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಬಿಬಿಎಂಪಿ ನೀಡಿದ್ದ ಷರತ್ತು ಉಲ್ಲಂಘಿಸಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿದ್ದ 'ಚಿಲುಮೆ' ಸಂಸ್ಥೆ ಮುಖ್ಯಸ್ಥ ರವಿಕುಮಾರ್ ನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ ವಿಚಾರಣೆ ನಡೆಸುತ್ತಿದ್ದಾರೆ. ದೊರೆತ ಮಾಹಿತಿ ಮೇರೆಗೆ ಹಲವೆಡೆ ದಾಳಿ ನಡೆಸಿದ್ದಾರೆ.
ವಿಚಾರಣೆಯಲ್ಲಿ ತಿಳಿದು ಬಂದ ಮಾಹಿತಿ ಪ್ರಕಾರ, ರವಿಕುಮಾರ್ 2013ರಲ್ಲಿ ಚಿಲುಮೆ ಸಂಸ್ಥೆ ಸ್ಥಾಪಿಸಿದ್ದ. ಸಹೋದರ ಕೆಂಪೇಗೌಡ, ಪತ್ನಿ ಐಶ್ವರ್ಯ, ಸಂಬಂಧಿಕರೇ ಆದ ಪ್ರಜ್ವಲ್ ಹಾಗೂ ಇತರರ ಜೊತೆ ಸೇರಿ ಸಂಸ್ಥೆ ಮುಖೇನ ಹಲವು ಕೆಲಸಗಳನ್ನು ಮಾಡುತ್ತಿದ್ದ. ಇದರಿಂದಾಗಿ ಆರೋಪಿ ನೂರಾರು ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದ ಎಂಬುದು ತಿಳಿದು ಬಂದಿದೆ.
ಈ ಮತದಾರರ ದತ್ತಾಂಶ ಸಂಗ್ರಹಿಸುತ್ತಿದ್ದ ಸಂಸ್ಥೆ ಸದಸ್ಯರಿಗೆ ಬಿಬಿಎಂಪಿ ಕೆಲವು ಅಧಿಕಾರಿಗಳೇ ಮತಗಟ್ಟೆ ಹಂತದ ಅಧಿಕಾರಿ ಮಟ್ಟದ ಗುರುತಿನ ಚೀಟಿ ನೀಡಿದ್ದರು ಎಂದು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಸತ್ಯ ಗೊತ್ತಾಗಿದೆ. ಈ ಸಂಬಂಧ ಶಾಮಿಲಾಗಿದ್ದ ಮೂವರು ಪಾಲಿಕೆ ಅಧಿಕಾರಿಗಳು ಅಮಾನತುಗೊಂಡಿದ್ದಾರೆ.

ಗುರುತಿನ ಚೀಟಿಯಲ್ಲಿ ಅಸಲಿ ಸಹಿ
ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಚಿಲುಮೆ ಸಂಸ್ಥೆಯ ಕಚೇರಿಗಳು ಹಾಗೂ ಆರೋಪಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಈವೇಳೆ ಒಟ್ಟು 50 ಗುರುತಿನ ಚೀಟಿಗಳನ್ನು ಹಾಗೂ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, ಹಾರ್ಡ್ಡಿಸ್ಕ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳು ಮಾಡಿಕೊಟ್ಟಿದ್ದ ಗುರುತಿನ ಚೀಟಿಗಳನ್ನೂ ವಶಕ್ಕೆ ಪಡೆದ ಅಧಿಕಾರಿಗಳಿಗೆ ಅದರಲ್ಲಿರುವ ಸಹಿ, ಮೊಹರು ಅಸಲಿ ಎಂದು ಗೊತ್ತಾಗಿದೆ. ಇನ್ನು ಕೆಲವು ಗುರುತಿನ ಚೀಟಿಗಳನ್ನು ಆರೋಪಿಗಳೇ ತಯಾರಿಸಿಕೊಂಡಿದ್ದಾರೆ. ಅವುಗಳಿಂದಲೇ ಮಾಹಿತಿ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ.
ಏಕೆ ಸಂಸ್ಥೆ ಮೇಲೆ ದಾಳಿ ನಡೆದಿಲ್ಲ: ಸಿದ್ದು
ಈ ದತ್ತಾಂಶ ಕಳ್ಳತನ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಏಕೆಂದರೆ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ತನಿಖೆ ಮಾಡಿದರೆ ಅದು ಪಕ್ಷಪಾತದಿಂದ ಕೂಡಿರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿರುವವರ ಮೇಲೆ ಕೈಗೊಂಡ ಕ್ರಮ ಏನು?. ಇಷ್ಟು ದಿನ ಈ ಸಂಸ್ಥೆಯ ಅಕ್ರಮ ಹಣಕಾಸಿನ ವಹಿವಾಟಿನ ಮೇಲೆ ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಏಕೆ ದಾಳಿ ಮಾಡಿಲ್ಲ ಎಂಬುದು ಜನತೆಗೆ ಗೊತ್ತಾಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications