ಬೆಂಗಳೂರು ಪೊಲೀಸರ ಮಾನ 'ಪರಪ್ಪನ ಅಗ್ರಹಾರ'ದಲ್ಲಿ ಹರಾಜು!
ಶಶಿಕಲಾ ಅವರಿಂದ 2ಕೋಟಿ ಲಂಚ ಪಡೆದು ಜೈಲಿನ ಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆಂದು ಡಿಐಜಿ ರೂಪಾ ಆರೋಪಿಸಿದ್ದು, ಈ ವಿಚಾರದಲ್ಲಿನ ಇಬ್ಬರು ಅಧಿಕಾರಿಗಳ ಆರೋಪ/ಪ್ರತ್ಯಾರೋಪದಿಂದ ಬೆಂಗಳೂರು ಪೊಲೀಸರ ಮಾನ ಹರಾಜಾಗುತ
ಅಸಲಿಗೆ ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಉಳ್ಳವರಿಗೊಂದು ಆತಿಥ್ಯ, ಮಧ್ಯಮ ವರ್ಗೀಯರಿಗೆ ಮತ್ತೊಂದು ಬಗೆಯ ಆತಿಥ್ಯ ಮತ್ತು ಏನೂ ಇಲ್ಲದವರಿಗೆ ಕಟ್ಟುನಿಟ್ಟಿನ ಜೈಲು ಶಿಕ್ಷೆಯ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ಹೊಸದೇನಲ್ಲ.
ಅದು ಅಬ್ದುಲ್ ಕರೀಂ ತೆಲಗಿ, ಜಯಲಲಿತಾ, ಜನಾರ್ಧನ ರೆಡ್ಡಿ ಅವರಿಂದ ಹಿಡಿದು ಈಗಿನ ಶಶಿಕಲಾವರೆಗೆ, ಪರಪ್ಪನ ಅಗ್ರಹಾರ ಜೈಲಿನ ಮಹಾನಿರೀಕ್ಷಕರು ಮತ್ತು ಅಧಿಕಾರಿಗಳು ವಿಐಪಿಗಳಿಗೆ ನೀಡುತ್ತಿರುವ 'ರಾಜಾತಿಥ್ಯ'ದ ಬಗ್ಗೆ ಅನಧಿಕೃತ ಸುದ್ದಿಗಳಿಗೆ ಲೆಕ್ಕವೇ ಇಲ್ಲ.
ಆದರೆ, ಈಗ ಜೈಲಿನ ಡಿಜಿಪಿ ಸತ್ಯನಾರಾಯಣ ರಾವ್, ವಿ ಕೆ ಶಶಿಕಲಾ ಅವರಿಂದ ಎರಡು ಕೋಟಿ ಲಂಚ ಪಡೆದು ಅವರಿಗೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆಂದು ಡಿಐಜಿ ರೂಪಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದದ್ದು, ಜೈಲಿನ ಅಧಿಕಾರಿಗಳ ಮೇಲಿದ್ದ ಗುಮಾನಿಗೆ ರೆಕ್ಕೆಪುಕ್ಕ ಸಿಕ್ಕಂತಾಗಿದೆ.
ಪೊಲೀಸ್ ಅಧಿಕಾರಿಯ ಮೇಲೆ ಮತ್ತೋರ್ವ ಪೊಲೀಸ್ ಅಧಿಕಾರಿಯೇ ಆರೋಪ ಹೊರಿಸಿರುವುದು ಬೆಂಗಳೂರು ಪೊಲೀಸ್ ಇಲಾಖೆಗೆ ಆದ ಬಹುದೊಡ್ಡ ಹಿನ್ನಡೆ. ಜೊತೆಗೆ, ಇಬ್ಬರ ನಡುವಿನ ವಾಕ್ಸಮರ/ ಸಮರ್ಥನೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಪೊಲೀಸ್ ಇಲಾಖೆಯ ಮೇಲೆ ಬಿದ್ದಿರುವ ಕಳಂಕದ ಕೆಲವೊಂದು ಬೆಳವಣಿಗೆಗಳು, ಮುಂದೆ ಓದಿ

ತನಿಖೆಗೆ ಸಿಎಂ ಆದೇಶ
ಈಗಾಗಲೇ ತನಿಖೆಗೆ ಆದೇಶಿಸಿರುವ ಸಿಎಂ ಸಿದ್ದರಾಮಯ್ಯ, ನಿವೃತ್ತ ಮುಖ್ಯ ಕಾರ್ಯದರ್ಶಿಗಳೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ಹೊರಡಿಸುವ ಸಾಧ್ಯತೆಯಿದೆ. ಶುಕ್ರವಾರ (ಜು 14) ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ. ಮೂವರು ನಿವೃತ್ತ ಮುಖ್ಯ ಕಾರ್ಯದರ್ಶಿಗಳ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.

ಹಿಂಡಲಗಾ ಮತ್ತು ಕಲಬುರ್ಗಿ ಕಾರಾಗೃಹದ ಕೈದಿಗಳ ಧರಣಿ
ಡಿಜಿಪಿ ಬೆಂಬಲಿಸಿ ಬೆಳಗಾವಿ ಹಿಂಡಲಗಾ ಮತ್ತು ಕಲಬುರ್ಗಿ ಕಾರಾಗೃಹದ ಕೈದಿಗಳು ಧರಣಿ ನಡೆಸಿದ್ದಾರೆ. ಕೈದಿಗಳ ಮನ:ಪರಿವರ್ತನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಸತ್ಯನಾರಾಯಣ ರಾವ್ ಮೇಲಿನ ಆರೋಪ ಸತ್ಯಕ್ಕೆ ದೂರವಾದದು ಎನ್ನುವುದು ಕೈದಿಗಳ ಅಭಿಪ್ರಾಯ.

ಅಧಿಕಾರಿಗಳ ಬಹಿರಂಗ ಕಚ್ಚಾಟ
ಇಬ್ಬರು ಪೊಲೀಸ್ ಅಧಿಕಾರಿಗಳು ಬಹಿರಂಗ ಕಚ್ಚಾಟದಿಂದ ಬೇಸರಗೊಂಡಿರುವ ಸಿದ್ದರಾಮಯ್ಯ, ಪೊಲೀಸ್ ಮಹಾನಿರ್ದೇಶಕ ಆರ್ ಕೆ ದತ್ತಾ ಅವರನ್ನು ಕರೆಸಿಕೊಂಡು, ಜೊತೆಗೆ ಉನ್ನತಾಧಿಕಾರಿಗಳ ಸಭೆ ನಡೆಸಿ ವಿಸ್ಕೃತ ಮಾಹಿತಿ ಪಡೆದುಕೊಂಡಿದ್ದಾರೆ. ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ, ತ್ವರಿತವಾಗಿ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸತ್ಯನಾರಾಯಣ ರಾವ್ ಆಗ್ರಹ
ಐಪಿಎಸ್ ರೂಪಾಗೆ ಕಾರಾಗೃಹದ ಕಾನೂನಿನ ಬಗ್ಗೆ ಏನು ಗೊತ್ತು? ಎರಡು ಕೋಟಿ ಲಂಚ ಪಡೆದಿದ್ದೇನೆಂದು ಅವರು ಮಾಡಿರುವ ಆರೋಪದ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ದ. ಬಾಯಿಗೆ ಬಂದಂತೆ ಬರೆದು, ಇಲಾಖೆಯ ಕಾನೂನು ಉಲ್ಲಂಘಿಸಿರುವುದರಿಂದ ರೂಪಾ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಡಿಜಿಪಿ ಸತ್ಯನಾರಾಯಣ ರಾವ್ ಆಗ್ರಹಿಸಿದ್ದಾರೆ.

ರೂಪಾ ಸ್ಪಷ್ಟನೆ
ಹದಿನೇಳು ವರ್ಷದಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ, ಪರಪ್ಪನ ಅಗ್ರಹಾರದಲ್ಲಿ ಏನೇನು ನಡೆಯುತ್ತಿದೆ, ಕಾರಾಗೃಹದ ಕಾನೂನು ಏನು ಎನ್ನುವುದನ್ನು ಅರಿತೇ ವರದಿ ನೀಡಿರುವುದು. ನಾನು ನೀಡಿರುವ ವರದಿಯ ಪರಿಶೀಲನೆ ನಡೆಸಲಿ ಎಂದು ಡಿಐಜಿ ರೂಪಾ ಮೌದ್ಗಿಲ್ ಸ್ಪಷ್ಟ ನಿಲುವನ್ನು ತಾಳಿದ್ದಾರೆ.

ಇಲಾಖೆಯ ಮಾನ ಹರಾಜು
ಒಟ್ಟಿನಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಬಹಿರಂಗ ಕಚ್ಚಾಟದಿಂದ ಇಲಾಖೆಯ ಮಾನ ಮೂರಾಬಟ್ಟೆಯಾಗುತ್ತಿದೆ. ಈ ಹಿಂದೆಯೂ ಪರಪ್ಪನ ಅಗ್ರಹಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಕೇಳಿಬರುತ್ತಲೇ ಇದ್ದವು. ಈಗಾಲಾದರೂ ಅದರ ಸತ್ಯಾಸತ್ಯತೆ ಹೊರಬರುವಂತಾಗಲಿ.












Click it and Unblock the Notifications