ಅರ್ಕಾವತಿ ಪುನಶ್ಚೇತನ ವಿರೋಧಿಸಿ ಬೀದಿಗಿಳಿದ ಗ್ರಾಮಸ್ಥರು

ಅರ್ಕಾವತಿ ನದಿ ಪುನಶ್ಚೇತನ ಯೋಜನೆ ಅಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ನದಿ ಕಣಿವೆ ಭಾಗದಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಬುಧವಾರ ಇದನ್ನು ವಿರೋಧಿಸಿ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಮತ್ತು ಸುತ್ತಮುತ್ತಲಿನ ಸುಮಾರು 25 ಗ್ರಾಮಗಳ ಜನರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪಕ್ಷಾತೀತವಾಗಿ ರಾಜಕೀಯ ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅರ್ಕಾವತಿ ನದಿ ಪುನಶ್ಚೇತನ ಯೋಜನೆ ಅಡಿ ಕಾಮಗಾರಿ ಆರಂಭಿಸುವ ಮೊದಲು ಬಿಡಿಎ ಅಕ್ರಮ ಕಟ್ಟಡಗಳ ನಿರ್ಮಾಣ ತೆರವುಗೊಳಿಸಲಿದೆ. ಇದರಿಂದ 24 ಗ್ರಾಮಗಳ ಸುಮಾರು 3000 ಕಟ್ಟಡ ನೆಲಸಮಗೊಳ್ಳಲಿವೆ. ಆದ್ದರಿಂದ ಸರ್ಕಾರ ಅರ್ಕಾವತಿ ಯೋಜನೆಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸರ್ಕಾರದ ಸೂಚನೆ ಅನ್ವಯ ಕಟ್ಟಡದ ತೆರವು ಕಾರ್ಯಕ್ಕೆ ವೇಗ ನೀಡಲು ಬಿಡಿಎ ಮುಂದಾಗಿದೆ. ಬಿಡಿಎ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಉತ್ತರ ತಾಲೂಕಿನ ಭಾಗದಲ್ಲಿ ತಲೆಯೆತ್ತಿರುವ ಅಕ್ರಮ ನಿರ್ಮಾಣಗಳ ತೆರವಿಗೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಆದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಬಿಡಿಎ ಸೇರಿದಂತೆ ನದಿ ಕಣಿವೆಯ ಎಲ್ಲ ಪ್ರಾಧಿಕಾರ, ನಗರಾಭಿವೃದ್ಧಿ ಸಂಸ್ಥೆ- ಮಂಡಳಿಗಳಿಗೂ ಅಕ್ರಮ ನಿರ್ಮಾಣ ತೆರವುಗೊಳಿಸಲು ಸರ್ಕಾರ ಆದೇಶ ನೀಡಿದೆ.












Click it and Unblock the Notifications