ವಾಹನ ಸವಾರನಿಗೆ ಹಲ್ಲೆ ಮಾಡಿ ಸಂಚಾರ ಪಿಎಸ್ಐ ಎಡವಟ್ಟು!
ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ಹಣೆ ಬರಹ ಕೆಟ್ಟಂತೆ ಕಾಣುತ್ತಿದೆ. ದಿವ್ಯಾಂಗ ಮಹಿಳೆಗೆ ಬೀದಿಯಲ್ಲಿ ಬೂಟು ಕಾಲಲ್ಲಿ ಒದ್ದು ಹಲಸೂರು ಗೇಟ್ ಸಂಚಾರ ವಿಭಾಗದ ಎಎಸ್ಐ ಮಾಡಿದ ಎಡವಟ್ಟಿಗೆ ಟೋಯಿಂಗ್ ವ್ಯವಸ್ಥೆಯೇ ನಿಂತು ಹೋಯಿತು. ಹಳೇ ದಂಡ ಕಟ್ಟುವಂತೆ ವಾಹನ ಸವಾರನಿಗೆ ಅವಾಜ್ ಬಿಟ್ಟು ಹಲ್ಲೆ ಮಾಡಿದ ವಿಜಯನಗರ ಠಾಣೆ ಪಿಎಸ್ಐ ಮಾಡಿದ ಎಡವಟ್ಟು ಮತ್ತೆ ಸಂಚಾರ ಪೊಲೀಸರ ಮಾನ ಹರಾಜಿಗೆ ಇಟ್ಟಿದ್ದಾರೆ.
ವಾಹನ ಸವಾರನನ್ನು ವಿಜಯನಗರ ಸಂಚಾರ ಠಾಣೆ ಪಿಎಸ್ಐ ಅಡ್ಡ ಗಟ್ಟಿ ನಿಲ್ಲಿಸಿದ್ದಾರೆ. ಹಳೇ ದಂಡ ಪಾವತಿ ಮಾಡುವಂತೆ ವಾಹನ ಸವಾರನಿಗೆ ಸೂಚಿಸಿದ್ದಾರೆ. ಬಾಕಿ ದಂಡ 2500 ರೂ. ಪಾವತಿ ಮಾಡುವಂತೆ ಪಿಎಸ್ಐ ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿದ ವಾಹನ ಸವಾರ ನನ್ನ ಬಳಿ ಹಣ ಇಲ್ಲ. ದಂಡವನ್ನು ಕೋರ್ಟ್ನಲ್ಲಿ ಕಟ್ಟುತ್ತೇನೆ ಎಂದು ಹೇಳಿದ್ದಾನೆ.
ಅಷ್ಟಕ್ಕೆ ಸಿಟ್ಟಾದ ಪಿಎಸ್ಐ, ನನಗೆ ಕಾನೂನು ಪಾಠ ಮಾಡ್ತೀನೇಯೋ ಎಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ಮಾಡುವುದನ್ನು ವಾಹನ ಸವಾರ ರೆಕಾರ್ಡ್ ಮಾಡಿಕೊಂಡಿದ್ದಾನೆ. ಪೋನ್ ಕೊಡುವಂತೆ ಹೆದರಿಸಿದ ಪಿಎಸ್ಐ ಹೆಲ್ಮೆಟ್ ಕಿತ್ತುಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವಿನ ಮಾತುಕತೆ ತಾರಕಕ್ಕೇರಿದೆ.

ನೀನು ಯಾವ ರೀತಿ ವಾಹನ ತೆಗೆದುಕೊಂಡು ಹೋಗ್ತೀಯಾ ನೋಡ್ತೀನಿ ಬಾ ಸ್ಟೇಷನ್ಗೆ ಎಂದು ಪಿಎಸ್ಐ ಅವಾಜ್ ಬಿಟ್ಟಿದ್ದಾರೆ. ನಾನು ದಂಡವನ್ನು ಕೋರ್ಟ್ ಗೆ ಕಟ್ಟುತ್ತೇನೆ. ಹೊಡೆಯೋಕೆ ನೀವು ಯಾರು ಎಂದು ವಾಹನ ಸವಾರ ಪ್ರತಿವಾದ ಮಾಡಿದ್ದಾನೆ. ಈ ಘಟನೆಯನ್ನು ವಾಹನ ಸವಾರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದಾನೆ. ಸಂಚಾರ ಪಿಎಸ್ಐ ವರ್ತನೆ ಕುರಿತ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಸಂಚಾರ ಪೊಲೀಸರು ಮತ್ತೆ ಮುಜುಗರಕ್ಕೀಡಾಗಿದ್ದಾರೆ.

ಎಎಸ್ಐ ಹೊಡೆತಕ್ಕೆ ಟೋಯಿಂಗ್ ಬಂದ್: ಹಲಸೂರು ಗೇಟ್ ಎಎಸ್ಐ ನಾರಾಯಣ್ ದಿವ್ಯಾಂಗ ಮಹಿಳೆ ಮೇಲೆ ದರ್ಪ ತೋರಿದ ಪೆಟ್ಟಿಗೆ ಇಡೀ ಸಂಚಾರ ಪೊಲೀಸರೇ ತಲೆ ಬಗ್ಗಿಸುವಂತಾಗಿತ್ತು. ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಬೇಸತ್ತ ಸಿಎಂ ಬಸವರಾಜ ಬೊಮ್ಮಾಯಿ ಟೋಯಿಂಗ್ ನಿಲ್ಲಿಸುವಂತೆ ಸೂಚಿಸಿದ್ದರು. ಘಟನೆ ಬೆಳಕಿಗೆ ಬಂದ ಬಳಿಕ ಬೆಂಗಳೂರಿನಲ್ಲಿ ಸಂಚರಿಸುತ್ತಿದ್ದ 100 ಟೋಯಿಂಗ್ ವಾಹನಗಳು ಮೂಲೆ ಸೇರಿವೆ. ಟೋಯಿಂಗ್ ದಂಡ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಹೊಸ ಪಾರದರ್ಶಕ ನಿಯಮಗಳೊಂದಿಗೆ ಟೋಯಿಂಗ್ ನಿಯಮ ಜಾರಿಗೊಳಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದರ ನಡುವೆ ಪಿಎಸ್ಐ ಮಾಡಿರುವ ಎಡವಟ್ಟಿನಿಂದ ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತೆ ತಲೆ ಕೆಡಿಸಿಕೊಳ್ಳುವಂತಾಗಿದೆ.












Click it and Unblock the Notifications