ಇನ್ನೂ ಬಗೆಹರಿದಿಲ್ಲ ಭೂ ವ್ಯಾಜ್ಯ, ವೆಲ್ಲಾರ ಜಂಕ್ಷನ್ ಮೆಟ್ರೋ ಮಾರ್ಗ ನಿಧಾನ
ಬೆಂಗಳೂರು, ಜೂನ್ 28: ವೆಲ್ಲಾರ ಜಂಕ್ಷನ್ನಲ್ಲಿ ಹಾದುಹೋಗುವ ಮೆಟ್ರೋ ಸುರಂಗ ಮಾರ್ಗ ನಿರ್ಮಾಣ ಕುರಿತ ಗೊಂದಲಗಳು ಇನ್ನೂ ಕೂಡ ಬಗೆಹರಿದಿಲ್ಲ.
ರಕ್ಷಣಾ ಇಲಾಖೆಗೆ ಸೇರಿದ ಭೂಮಿಯಾಗಿದ್ದು, ಇದು ತಮಗೆ ಸೇರಿದ್ದು ಎಂದು ಹೊಸ ಖ್ಯಾತೆ ತೆಗೆದಿದೆ. ಹಾಗಾಗಿ ವೆಲ್ಲಾರ ಜಂಕ್ಷನ್ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಇನ್ನಷ್ಟು ಕಗ್ಗಂಟಾಗಿದೆ.
ವೆಲ್ಲಾರ ಜಂಕ್ಷನ್ ನಲ್ಲಿ ಮೆಟ್ರೋ ಕಾಮಗಾರಿ ಆರಂಭ, ಟ್ರಾಫಿಕ್ ವಿಪರೀತ
ಶೋಲೆ ವೃತ್ತದಿಂದ ಫಾತಿಮಾ ಬೇಕರಿ ದಾಟುತ್ತಿದ್ದಂತೆ ಎರಡಕ್ಕೆ ತರಿವು ಪಡೆದ ತಕ್ಷಣ ರಸ್ತೆಯೊಂದು ಸಿಗುತ್ತದೆ. ಈ ಎರಡೂ ರಸ್ತೆಗಳ ನಡುವೆ ಬರುವ ಜಾಗವು ರಕ್ಷಣಾ ಇಲಾಖೆಗೆ ಸೇರಿದ್ದು ಎಂದು ಇಲಾಖೆಯ ವಾದವಾಗಿದೆ.
ಅಷ್ಟೇ ಅಲ್ಲ, ಈ ಜಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮೊದಲು ರಕ್ಷಣಾ ಇಲಾಖೆ ಸಚಿವಾಲಯದ ಅನುಮತಿ ಪಡೆಯಬೇಕು. ಹಾಗೂ ಇದಕ್ಕೆ ಪ್ರತಿಯಾಗಿ ಪರಿಹಾರ ನೀಡಬೇಕು ಎಂದು ಹೇಳಿದೆ.
ವೆಲ್ಲಾರ ಜಂಕ್ಷನ್ ಬಳಿಯ ಭೂಮಿ ತಮಗೂ ಸೇರಿದ್ದು, ಉದ್ದೇಶಿತ ಮಾರ್ಗದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ರಕ್ಷಣಾ ಇಲಾಖೆ ಸಚಿವಾಲಯದ ಅನುಮತಿ ಪಡೆಯಲೇಬೇಕು ಎಂದು ಹೇಳಿದೆ.
ಡೈರಿ ವೃತ್ತ-ನಾಗವಾರ ನಡುವಿನ ಮೆಟ್ರೋ ಸುರಂಗ ಮಾರ್ಗವು ವೆಲ್ಲಾರ ಜಂಕ್ಷನ್ ಮೂಲಕ ಹಾದುಹೋಗಲಿದ್ದು, ಜಂಕ್ಷನ್ ಬಳಿ ಒಂದು ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಚರ್ಚ್ಗೆ ಸೇರಿದ್ದ ಒಟ್ಟಾರೆ 1800 ಚದರ ಮೀಟರ್ ಜಾಗದಲ್ಲಿ ಒಂದು ಭಾಗವನ್ನು ಮೆಟ್ರೋ ನಿಲ್ದಾಣಕ್ಕಾಗಿ ಸುಮಾರು 3600 ಚದರ ಮೀಟರ್ ಜಾಗವನ್ನು ಈಗಾಗಲೇ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂದಾಜು 100 ಕೋಟಿ ಪರಿಹಾರವನ್ನೂ ಕೂಡ ನೀಡಲಾಗಿದೆ.
ವೆಲ್ಲಾರ ಜಂಕ್ಷನ್-ಟ್ಯಾನರಿ ರಸ್ತೆವರೆಗಿನ ಸುರಂಗ ಮಾರ್ಗ ನಿರ್ಮಾಣ ಗುತ್ತಿಗೆಯನ್ನು ಎಲ್ ಆಂಡ್ ಟಿ ಕಂಪನಿ ಪಡೆದಿದೆ. ಬ್ರಿಗೇಡ್ ರಸ್ತೆಯ ವೆಲ್ಲಾರ ಜಂಕ್ಷನ್ನಿಂದ ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್ ಮೂಲಕ ಟ್ಯಾನರಿ ರಸ್ತೆವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ.
ಅಂದಾಜು 11,014 ಕೋಟಿ ರ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ ಅಂದಾಜು 13 ಕಿ.ಮೀ ಸುರಂಗ ಮಾರ್ಗ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಎಲ್ ಆಂಡ್ ಟಿ ಸುರಂಗ ಮಾರ್ಗದ 2 ಪ್ಯಾಕೇಜ್ ಪಡೆದಿದೆ. ಇದರಿಂದ ವಿವಾದ ಮತ್ತಷ್ಟು ಗೊಂದಲಮಯವಾಗಿದ್ದು ಕಾಮಗಾರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.