ವರ್ತೂರು ಕೆರೆಯಿಂದ ಹಾರಿ ಬಂತು ನೊರೆ ನೊರೆ
ಬೆಂಗಳೂರು, ಏ.29: "ಅಯ್ಯೋ ಇದು ಮಾಮೂಲಿ ಬಿಡಿ.. ಬೆಳ್ಳಂದೂರು ಕೆರೆ ಫೇಮಸ್ ಆಗಿತ್ತು ಈಗ ವರ್ತೂರು ಕೆರೆ ಬಗ್ಗೆ ನ್ಯೂಸ್ ನಲ್ಲಿದೆ. ಕೆಮಿಕಲ್ ನೊರೆ ರೋಡಿಗೆ ಬರುತ್ತೆ. ಆಮೇಲೆ ಸರಿ ಮಾಡುತ್ತಾರೆ, ಒಟ್ಟಾರೆ ಶಾಶ್ವತ ಪರಿಹಾರ ಸಿಗೋದಿಲ್ಲ' ಎಂದು ವೈಟ್ ಫೀಲ್ಡ್ ರೈಸಿಂಗ್ ಸಂಸ್ಥೆಯ ಎಳಂಗೋವನ್ ನೊಂದು ನುಡಿದರು.
ಬುಧವಾರ ವರ್ತೂರು ಕೆರೆ ಕೋಡಿ ಹರಿದಿದೆ. ಅದರೆ, ನೀರಿನ ಬದಲು ರಾಸಾಯನಿಕಗಳಿಂದ ತುಂಬಿರುವ ನೊರೆ ರಸ್ತೆಯಲ್ಲಿ ಹಾರಾಡುತ್ತಿದೆ. ಮೊದಲ ಬಾರಿಗೆ ಈ ವಿಸ್ಮಯವನ್ನು ನೋಡಿದ ಕೆಲವರು ಅಚ್ಚರಿಯಿಂದ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅದರೆ, ಸ್ಥಳೀಯರು ಮುಖ ಸಿಂಡರಿಸಿಕೊಂಡು ಬಿಡಿಎ ಹಾಗೂ ಬಿಬಿಎಂಪಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ವರ್ತೂರು ಹೋಬಳಿ ವಿಪ್ರೋ, ಸಿಸ್ಕೋದಂಥ ದೊಡ್ಡ ಐಟಿ ಕಂಪನಿಗಳನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದ ಶಾಲೆ, ಕಾಲೇಜುಗಳಿವೆ. ಪುರಾತನ ದೇಗುಲಗಳನ್ನು ಹೊಂದಿದೆ. ಇದಕ್ಕಿಂತ ಹೆಚ್ಚಾಗಿ ಇದು ಪಕ್ಕಾ ಜನವಸತಿ ಪ್ರದೇಶ. ಅದರೂ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆ ಉಸ್ತುವಾರಿ ಯಾರು ವಹಿಸಿಕೊಳ್ಳಬೇಕು? ಬಿಡಿಎ ಅಥವಾ ಬಿಬಿಎಂಪಿನಾ? ಬಿಡಬ್ಲ್ಯೂಎಸ್ಎಸ್ ಬಿ ಏನಾದರೂ ಮಾಡಬಹುದು ಎಂಬ ಚರ್ಚೆ ಮುಗಿಯುವಷ್ಟರಲ್ಲಿ ನೊರೆ ಹರಿದು ಮನೆ ಬಾಗಿಲಿಗೆ ಬಂದಿರುತ್ತದೆ. ಚಿತ್ರಗಳ ಕೃಪೆ: Bishwajit Banik.

ಇದಕ್ಕೆಲ್ಲ ಏನು ಕಾರಣ?
ಇದಕ್ಕೆಲ್ಲ ಮಾರತ್ ಹಳ್ಳಿ ಬಳಿ ಒಳಚರಂಡಿ ಘಟಕ ನಿರ್ಮಾಣ ಕಾರಣ ಎನ್ನುವವರಿದ್ದಾರೆ. ಇಲ್ಲ ಇದು ಪುರಾತನ ಸಮಸ್ಯೆ ಬೆಳ್ಳಂದೂರು ಕೆರೆಯಲ್ಲಿ ಕಲುಷಿತಗೊಂಡ ನೀರು ಇಲ್ಲಿಗೆ ಬಂದು ಸೇರುತ್ತಿದೆ ಅಷ್ಟೇ ಎಂಬ ಮಾತಿದೆ. ಒಟ್ಟಾರೆ ಸಮಸ್ಯೆಗೆ ಪರಿಹಾರ ಸದ್ಯಕ್ಕಂತೂ ಸಿಗುವ ಲಕ್ಷಣಗಳಿಲ್ಲ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ವಿಸ್ತ್ರೀರ್ಣ ದೊಡ್ಡದಿರುವುದರಿಂದ ಯಾವ ಇಲಾಖೆಯೂ ಹೊಣೆ ಹೊರುತ್ತಿಲ್ಲ.

ಬಿಡಬ್ಲ್ಯೂಎಸ್ ಎಸ್ ಬಿನವರು ಸರಿ ಮಾಡಿದ್ರು
ವರ್ತೂರು ಕೆರೆಯಿಂದ ಹರಿದ ಕಲುಷಿತ ನೀರು ಮತ್ತು ರಾಸಾಯನಿಕ ತ್ಯಾಜ್ಯದಿಂದ ಉಂಟಾದ ನೊರೆಯು ರಸ್ತೆ, ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ತರಾತುರಿಯಲ್ಲಿ ಬಂದ ಬಿಡಬ್ಲ್ಯೂಎಸ್ ಎಸ್ ಬಿ ನೀರು ಹರಿಸಿ ಕಲುಷಿತ ನೊರೆಯನ್ನು ರಸ್ತೆಯಿಂದ ಕ್ಲಿಯರ್ ಮಾಡಿದೆ. ವ್ಯವಸ್ಥಿತವಾದ ಒಳಚರಂಡಿ ಘಟಕ ನಿರ್ಮಾಣ ಮಾಡಿಲ್ಲದ ಕಾರಣ ಕಾರ್ಖಾನೆಗಳ ತ್ಯಾಜ್ಯದ ಜೊತೆಗೆ ರಾಜಾ ಕಾಲುವೆಯ ಕಲುಷಿತ ನೀರು ಸೇರುತ್ತಿದೆ. ಹೀಗಾಗಿ ಬಿಡಬ್ಲ್ಯೂಎಸ್ ಎಸ್ ಬಿ ತೇಪೆ ಹಾಕುವ ಕಾರ್ಯ ಮಾಡಿದೆ.

ಕೆರೆ ಅಭಿವೃದ್ಧಿ ಪ್ರಾಧಿಕಾರ ಇಲ್ಲವೇ?
ರಾಜ್ಯ ಸಣ್ಣ ಕೆರೆಗಳ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರಾಧಿಕಾರ ಮೇ 5ರೊಳಗೆ ಅಸ್ತಿತ್ವಕ್ಕೆ ಬರಲಿದೆ. ಶೇ.25ರಷ್ಟು ಕೆರೆಗಳ ಹೂಳು ತೆಗೆಯಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹೊಸ ಕೆರೆ ನಿರ್ಮಾಣ ಮಾಡಲಾಗುತ್ತದೆ. 189 ಕೆರೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಸಂಚಾರ ಅಸ್ತವ್ಯಸ್ತ, ಜನರಿಗೆ ಕಾಯಿಲೆ ಭೀತಿ
ಬೆಳ್ಳಂದೂರು ಕೆರೆಯಿಂದ ಕಲುಷಿತಗೊಂಡ ನೀರು, ಮಾರತ್ ಹಳ್ಳಿ ಬಳಿ ಒಳಚರಂಡಿ ನೀರು, ಕಾರ್ಖಾನೆ ತ್ಯಾಜ್ಯ ಸೇರಿ ವರ್ತೂರು ಕೆರೆಯಿಂದ ನೊರೆಯ ಕೋಡಿ ಹರಿಸಿವೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಗಬ್ಬು ವಾಸನೆ ಹರಡಿದೆ. ವಾತಾವರಣದ ವ್ಯತ್ಯಾಸದಿಂದ ಸಾಂಕ್ರಾಮಿಕ ಕಾಯಿಲೆ, ವಿಷಕಾರಕ ಅನಿಲ ಸೇವನೆಯಿಂದ ಶ್ವಾಸಕೋಶ ಸಂಬಂಧಿತ ರೋಗದ ಆತಂಕ ಮನೆ ಮಾಡಿದೆ. ಕೆರೆ ಸುತ್ತಾ ಮುತ್ತಾ ನೊರೆಯಿಂದ ಸಂಚಾದ ದಟ್ಟಣೆ ಅಧಿಕವಾಗಿ ಪೀಕ್ ಅವರ್ ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಸಿದ್ದರಾಮಯ್ಯ ಸರ್ಕಾರ ಹೊಣೆ ಹೊರಬೇಕಿದೆ
ಈ ಹಿಂದೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ.ಅಡಿ ಅವರು ವರ್ತೂರು, ಬೆಳ್ಳಂದೂರು ಕೆರೆ ಹಾಳಾಗಿರುವ ಬಗ್ಗೆ ಸ್ಥಳೀಯರು ನೀಡಿದ ವರದಿ ಆಧಾರಿಸಿ ಕೂಡಲೇ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ಇದು ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಹೀಗೆ ಅನೇಕ ಇಲಾಖೆಗಳ ಸುತ್ತ ಗಿರಕಿ ಹೊಡೆದ ಆದೇಶ ಈಗ ಮೂಲೆಗುಂಪಾಗಿದೆ. ಸಿದ್ದರಾಮಯ್ಯ ಸರ್ಕಾರ ಕೂಡಲೇ ಗಮನ ಹರಿಸದಿದ್ದರೆ ದೀರ್ಘಕಾಲಿಕ ಅನಾರೋಗ್ಯಕ್ಕೆ ಇಲ್ಲಿನ ಜನ ತುತ್ತಾಗುವುದರಲ್ಲಿ ಸಂಶಯವೇ ಇಲ್ಲ.
|
ಏನಿದು ಅಚ್ಚರಿ ಎಂದು ಜನರಿಂದ ಟ್ವೀಟ್
180.40 ಹೆಕ್ಟೇರ್ (445.8 ಎಕರೆ) ಇರುವ ವರ್ತೂರು ಕೆರೆ ಸದ್ಯಕ್ಕೆ ಬೆಂಗಳೂರಿನ ಅತಿದೊಡ್ಡ ಕೆರೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗಂಗ ಅರಸರ ಕಾಲದ ಈ ಕೆರೆ ಕೃಷಿಕರಿಗೆ ನೆರವಾಗಲು ಕಟ್ಟಲಾಗಿತ್ತು ಅದರೆ, ಶೇ 40ರಷ್ಟು ಅಧಿಕೃತವಾಗಿ ಕಲುಷಿತಗೊಂಡ ವರದಿ ಇದೆ.












Click it and Unblock the Notifications