ಕುತೂಹಲ ಮೂಡಿಸಿದ ಪ್ರಲ್ಹಾದ್ ಜೋಶಿ-ಜಾರಕಿಹೊಳಿ ಭೇಟಿ!
ಬೆಂಗಳೂರು, ಜು. 24: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಅವರು ಭಾಗವಹಿಸಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದ ನೂತನ ಖಾಸಗಿ ನಿವಾಸದಲ್ಲಿ ಗೃಹಪ್ರವೇಶದ ಔತಣಕೂಟ ನಡೆಯಿತು ಎನ್ನಲಾಗಿದೆ. ಆದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಆಪ್ತರಷ್ಟೇ ಭೋಜನಕೂಟದಲ್ಲಿ ಭಾಗವಹಿಸಿರುವುದು ಕುತೂಹಲ ಮೂಡಿಸಿದೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್, ನೂತನ ಎಂಎಲ್ಸಿ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರದಲ್ಲಿ ಬಹಿರಂಗಗೊಂಡ ಹಳೇ ವಿಚಾರ
ಇತ್ತೀಚಿಗಷ್ಟೇ ಸಚಿವ ರಮೇಶ್ ಜಾರಕಿಹೊಳಿ ಅವರು ಹೊಸ ಮನೆಯನ್ನು ಖರೀದಿಸಿದ್ದಾರೆ. ಜೊತೆಗೆ ರಾಜ್ಯದ ಜಲವಿವಾದಗಳ ವಿಚಾರದಲ್ಲಿ ಆಗಾಗ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಾರೆ. ಎತ್ತಿನಹೊಳೆ, ಮೇಕೆದಾಟು ಜಲವಿವಾದಗಳ ವಿಚಾರದಲ್ಲಿ ಆಗಾಗ ದೆಹಲಿಗೆ ತೆರಳುತ್ತಾರೆ. ಇದೇ ಹಿನ್ನೆಲೆಯಲ್ಲಿ ಇವತ್ತು ಔತಣಕೂಟ ನಡೆದಿದೆ ಎನ್ನಲಾಗಿದೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೌಜನ್ಯದ ಭೇಟಿಗೂ ಮಹತ್ವ ಬಂದಿದೆ.