ಬೆಂಗಳೂರು ಉಪ ನಗರ ರೈಲು ಯೋಜನೆ; ಕೇಂದ್ರ ಸಂಪುಟದ ಒಪ್ಪಿಗೆ
ಬೆಂಗಳೂರು, ಅಕ್ಟೋಬರ್ 08: ಉದ್ಯಾನ ನಗರಿ ಬೆಂಗಳೂರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ರೂಪಿಸಿರುವ ಉಪ ನಗರ ರೈಲು ಯೋಜನೆಗೆ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪ ನಗರ ರೈಲು ಯೋಜನೆಗೆ 19,000 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಒಟ್ಟು 148.17 ಕಿ. ಮೀ. ಯೋಜನೆ ಇದಾಗಿದೆ.
ಕರ್ನಾಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, 4 ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ, ಕೇಂದ್ರ ಸರ್ಕಾರ ಉಪ ನಗರ ರೈಲು ಯೋಜನೆ ಬಗ್ಗೆ ಅಧಿಕೃತ ಘೋಷಣೆಯನ್ನು ಮುಂದೂಡಿದೆ.

ಕೇಂದ್ರ ಸರ್ಕಾರ ಬಜೆಟ್ನಲ್ಲಿ ಉಪ ನಗರ ರೈಲು ಯೋಜನೆಗೆ ಅಗತ್ಯ ಹಣಕಾಸಿನ ನೆರವು ನೀಡುವ ಭರವಸೆಯನ್ನು ನೀಡಿತ್ತು. ಯೋಜನೆಗೆ ಅಗತ್ಯವಿರುವ ಶೇ 20ರಷ್ಟು ಅನುದಾನವನ್ನು ಕೇಂದ್ರ ನೀಡಲಿದೆ. ಶೇ 60ರಷ್ಟು ಅನುದಾನ ಬ್ಯಾಂಕ್ಗಳಿಂದ ಸಾಲ ರೂಪದಲ್ಲಿ ಪಡೆಯಲಾಗುತ್ತದೆ. ರಾಜ್ಯ ಸರ್ಕಾರ ಶೇ 20ರಷ್ಟು ಅನುದಾನ ಭರಿಸಬೇಕಿದೆ.
2018ರಲ್ಲಿಯೇ ಕೇಂದ್ರ ಸರ್ಕಾರ ಉಪ ನಗರ ರೈಲು ಯೋಜನೆಗೆ ಒಪ್ಪಿಗೆ ನೀಡಿತ್ತು. ಆದರೆ, ನಗರದಲ್ಲಿ ನಿರ್ಮಾಣವಾಗುತ್ತಿರುವ ನಮ್ಮ ಮೆಟ್ರೋ ಯೋಜನೆಯ ಮಾರ್ಗದಿಂದಾಗಿ ಗೊಂದಲ ಉಂಟಾಗಿತ್ತು. 2019ರಲ್ಲಿ ರೈಲ್ವೆ ಬೋರ್ಡ್ ಸಬ್ ಅರ್ಬನ್ ರೈಲು ಯೋಜನೆಗೆ ಅಧಿಕೃತವಾಗಿ ಒಪ್ಪಿಗೆ ಕೊಟ್ಟಿತ್ತು.
ಉಪ ನಗರ ರೈಲು ಯೋಜನೆ ಅನುಷ್ಠಾನಕ್ಕಾಗಿ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ಪಿವಿ) ಸ್ಥಾಪನೆಯಾಗಲಿದೆ. ಬೆಂಗಳೂರು ನಗರದಲ್ಲಿನ 10 ಮೆಟ್ರೋ ನಿಲ್ದಾಣಗಳನ್ನು ಉಪ ನಗರ ರೈಲು ಯೋಜನೆ ಸಂಪರ್ಕಿಸಲಿದೆ.
ಎಲ್ಲಿಗೆ ಸಂಪರ್ಕ: ಉಪ ನಗರ ರೈಲು ಯೋಜನೆಯಡಿ ಬೆಂಗಳೂರು ನಗರ ನಿಲ್ದಾಣ-ರಾಜನಕುಂಟೆ, ಕೆಂಗೇರಿ-ವೈಟ್ಫೀಲ್ಡ್, ನೆಲಮಂಗಲ-ಬೈಯಪ್ಪನಹಳ್ಳಿ, ಬೊಮ್ಮಸಂದ್ರ-ದೇವನಹಳ್ಳಿ ನಡುವೆ ಸಂಪರ್ಕ ಸಾಧಿಸಲಾಗುತ್ತದೆ.
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಉಪ ನಗರ ರೈಲು ಯೋಜನೆ ಅನುಷ್ಠಾನ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ, ನಮ್ಮ ಮೆಟ್ರೋ ರೈಲು ಯೋಜನೆ ಜಾರಿಗೆ ಬಂದಿದ್ದರಿಂದ ಯಾವ ಮಾರ್ಗದಲ್ಲಿ ಸಬ್ ಅರ್ಬನ್ ರೈಲು ಓಡಿಸಬೇಕು ಎಂಬ ಬಗ್ಗೆ ವಿವರವಾದ ಚರ್ಚೆ ನಡೆದಿತ್ತು.












Click it and Unblock the Notifications