ಸಂಬಂಧಿಕರು ಬರುತ್ತಿಲ್ಲ: ಸರಕಾರದಿಂದಲೇ ಸಾಮೂಹಿಕ ಅಸ್ಥಿ ವಿಸರ್ಜನೆ
ಬೆಂಗಳೂರು, ಮೇ 22: ನಗರದ ವಿವಿಧ ಚಿತಾಗಾರಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿಯನ್ನು ಸಂಬಂಧಿಕರು ತೆಗೆದುಕೊಂಡು ಹೋಗದ ಹಿನ್ನಲೆಯಲ್ಲಿ ಸರಕಾರವೇ ಇದರ ವಿಸರ್ಜನೆಗೆ ಮುಂದಾಗಿದೆ.
ಈ ಬಗ್ಗೆ ಮಾತನಾಡುತ್ತಿದ್ದ ಕಂದಾಯ ಸಚಿವ ಆರ್.ಅಶೋಕ್, "ವಿವಿಧ ಶ್ಮಶಾನಗಳಲ್ಲಿ 1,200ಕ್ಕೂ ಹೆಚ್ಚು ಮಂದಿಯ ಅಸ್ಥಿಗಳನ್ನು ಸಂಬಂಧಿಕರು ತೆಗೆದುಕೊಂಡು ಹೋಗಿಲ್ಲ. ಬಿಎಂಪಿಯವರು ಸಂಬಂಧಪಟ್ಟವರಿಗೆ ಕರೆ ಮಾಡಿದರೆ ಅವರ ಫೋನ್ ಸ್ವಿಚ್ ಆಫ್ ಆಗಿರುತ್ತದೆ".
"ಹೀಗಾಗಿ ಗೌರವಯುತವಾಗಿ ಅಸ್ಥಿಗಳ ವಿಸರ್ಜನೆಯನ್ನು ಸರಕಾರದ ವತಿಯಿಂದಲೇ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ"ಎಂದು ಆರ್.ಅಶೋಕ್ ಹೇಳಿದ್ದಾರೆ.

ಕೊರೊನಾ ಎರಡನೇ ಅಲೆಯ ಮರಣಮೃದಂಗದಿಂದಾಗಿ, ಶ್ಮಶಾನದಲ್ಲಿ ಭಾರೀ ದಟ್ಟಣಿ ಉಂಟಾಗಿತ್ತು. ಆಗ ಸರಕಾರ, ಬೆಂಗಳೂರು ಹೊರವಲಯದ ಕೆಲವು ಪ್ರದೇಶಗಳಲ್ಲಿ ಶವಸಂಸ್ಕಾರಕ್ಕೆ ವ್ಯವಸ್ಥೆಯನ್ನು ಮಾಡಿತ್ತು.
ಜೊತೆಗೆ, ಮೃತಪಟ್ಟವರ ಸ್ವಂತ ಜಮೀನಿನಲ್ಲೂ ಅಂತಿಮ ಸಂಸ್ಕಾರ ಮಾಡಲು ಅವಕಾಶವನ್ನು ನೀಡಿತ್ತು. ಇದರಿಂದ, ನಗರದ ಚಿತಾಗಾರಗಳಲ್ಲಿ ಸಾಲುದ್ದದ ಕ್ಯೂ ದಿನೇ ದಿನೇ ಕಮ್ಮಿಯಾಗುತ್ತಾ ಬರುತ್ತಿದೆ.
ಬೆಂಗಳೂರಿನಲ್ಲಿ ಹೊಸ ಸೋಂಕಿತರ ಪ್ರಮಾಣ ಕಮ್ಮಿಯಾಗುತ್ತಾ ಬರುತ್ತಿದೆ. ಇನ್ನೊಂದೆಡೆ, ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಸಾವಿನ ಪ್ರಮಾಣ ಏರಿಳಿಕೆಯಾಗುತ್ತಿದೆ.












Click it and Unblock the Notifications