ಪ್ರಾಣಿಪಾಲಕ ಬಲಿ ಹಿನ್ನಲೆ, ಬನ್ನೇರುಘಟ್ಟ ಉದ್ಯಾನವನ ಸಂಪೂರ್ಣ ಬಂದ್
ಬೆಂಗಳೂರು, ಅಕ್ಟೋಬರ್ 8: ಶನಿವಾರ ಪ್ರಾಣಿ ಪಾಲಕ ಆಂಜಿ ಬಿಳಿ ಹುಲಿಗಳ ದಾಳಿಗೆ ಮೃತ ಪಟ್ಟ ಹಿನ್ನಲೆಯಲ್ಲಿ ಪರಿಹಾರಕ್ಕೆ ಒತ್ತಾಯಿಸಿ ಕುಟುಂಬಸ್ಥರು ಬನ್ನೇರುಘಟ್ಟ ಜೈವಿಕ ಉದ್ಯಾನದ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಉದ್ಯಾನ ಸಂಪೂರ್ಣ ಬಂದ್ ಆಗಿದೆ.
ಉದ್ಯಾನ ಮುಚ್ಚಿರುವ ಹಿನ್ನಲೆಯಲ್ಲಿ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು ಪೆಚ್ಚು ಮೋರೆಯಿಂದ ವಾಪಾಸಾಗುತ್ತಿದ್ದಾರೆ. ಇನ್ನೊಂದೆಡೆ ಪರಿಹಾರ ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಆಂಜಿ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಈ ಹಿಂದೆ ಪ್ರಕಟಗೊಂಡ ಸುದ್ದಿ:
ಹುಲಿಗಳ ಪಾಲನೆಯಲ್ಲಿ ನಿರತರಾಗಿದ್ದ ಸಿಬ್ಬಂದಿಯನ್ನೇ ಹುಲಿಗಳು ತಿಂದು ತೇಗಿದ ಘಟನೆ ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.
ಶನಿವಾರ ಸಂಜೆ ಆಹಾರ ನೀಡಲು ಬೋನಿನೊಳಗೆ ಬಂದ 40 ವರ್ಷದ ಹುಲಿಗಳ ಪಾಲಕ ಆಂಜಿಯವರನ್ನು ಎರಡು ಬಿಳಿ ಹುಲಿಗಳು ಎಳೆದು ಗಂಭೀರ ಗಾಯಗೊಳಿಸಿದ್ದವು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಸಿಬ್ಬಂದಿ ಆಂಜಿ ಗಾಯದಿಂದ ಅಸುನೀಗಿದ್ದಾರೆ.
ಶನಿವಾರ ಸಂಜೆ 5 ಗಂಟೆ 45 ನಿಮಿಷಕ್ಕೆ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪ್ರಧಾನ ಅರಣ್ಯ ಪಾಲಕ ಸಿ ಜಯರಾಂ ಹೇಳಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.