ವಾಟ್ಸಪ್ ನಲ್ಲಿ ಪಿಯು ನಕಲಿ ಪ್ರಶ್ನೆ ಪತ್ರಿಕೆ ಹರಿಬಿಟ್ಟವರ ಬಂಧನ
ಬೆಂಗಳೂರು, ಏ.11: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಎಂದು ವಾಟ್ಸಪ್ ನಲ್ಲಿ 2017ರ ಪ್ರಶ್ನೆಪತ್ರಿಕೆ ಹರಿಬಿಟ್ಟವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
2017ನೇ ಸಾಲಿನ ದ್ವಿತೀಯ ವರ್ಷದ ಪಿ.ಯು.ಸಿ ಕನ್ನಡ ಪ್ರಶ್ನೆಪತ್ರಿಕೆಯನ್ನು 2019 ರ ದ್ವಿತೀಯ ವರ್ಷದ ಪಿ.ಯು.ಸಿ. ಪ್ರಶ್ನೆ ಪ್ರತ್ರಿಕೆ ಎಂದು ವಾಟ್ಸಪ್ ನಲ್ಲಿ ಕಳುಹಿಸಿದ ಆರೋಪಿಗಳನ್ನು ಬೆಂಗಳೂರು ನಗರ ಸೈಬರ್ ಅಪರಾಧ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿಯ ಮಂಜುನಾಥ ಬಿನ್ ಮರೆಪ್ಪ, ಕಾನೂನು ಸಂಘರ್ಷಕ್ಕೊಳಗಾದ ಬಾಲಕ. ಮಾರ್ಚ್ 16ರಂದು ರಂದು ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸ್ಅಪ್ಗಳಲ್ಲಿ2019ನೇ ಸಾಲಿನ ದ್ವಿತೀಯ ವರ್ಷದ ಪಿ.ಯು.ಸಿ. ಪ್ರಶ್ನೆಪತ್ರಿಕೆಯು ಪರೀಕ್ಷೆ ನಡೆಯುವ ಮುನ್ನವೇ ಹರಿದಾಡುತ್ತಿತ್ತು.

ಈ ಪ್ರಶ್ನೆಪತ್ರಿಕೆಯು ನಕಲಿ ಎಂದು ತಿಳಿದ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ಈ ಸಂಬಂಧ ಬೆಂಗಳೂರು ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮೇರೆಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ತನಿಖಾ ಕಾಲದಲ್ಲಿ ಸುಮಾರು 30 ಜನರನ್ನು ವಿಚಾರಣೆಗೊಳಪಡಿಸಲಾಯಿತು. ನಂತರ ಕೃತ್ಯವನ್ನು ಯಾದಗಿರಿ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿದ್ದಂತಹ ವಿದ್ಯಾರ್ಥಿಗಳು ಮಾಡಿರಬಹುದಾಗಿ ಬಂದ ಮಾಹಿತಿಯ ಮೇರೆಗೆ ಮಂಜುನಾಥ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿದೆ.
ಇವರಿಬ್ಬರು ದ್ವಿತೀಯ ವರ್ಷದ ಪಿ.ಯು.ಸಿ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆತಂಕವನ್ನು ಸೃಷ್ಟಿ ಮಾಡುವ ಉದ್ದೇಶದಿಂದ 2017ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಕನ್ನಡ ಪತ್ರಿಕೆಯನ್ನು ಸ್ಕ್ಯಾನ್ ಮಾಡಿಕೊಂಡು 2019ನೇ ಸಾಲಿನ ದ್ವಿತೀಯ ಪಿ.ಯು.ಸಿ.ಯ ಅರ್ಥಶಾಸ್ತ್ರ ಪತ್ರಿಕೆಯ ಮೇಲಿದ್ದಂತಹ ಕೋಡ್ಗಳನ್ನು ಕಟ್ ಮಾಡಿ ಮೊಬೈಲ್ ಆಪ್ ಅನ್ನು ಬಳಸಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅದನ್ನು ಅಂಟಿಸಿದ್ದರು.
ನಂತರ ಇಬ್ಬರೂ ಅವರಿಗೆ ಪರಿಚಯವಿರುವಂತಹ ವಿದ್ಯಾರ್ಥಿಗಳಿಗೆ ವಾಟ್ಸಪ್ನಲ್ಲಿ ಹಂಚಿಕೆ ಮಾಡಿ ಸದರಿ ಪ್ರಶ್ನೆ ಪತ್ರಿಕೆಯು ನೈಜ ಪ್ರಶ್ನೆಪತ್ರಿಕೆಯೆಂದು ನಂಬಿಸಿ ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಮಾಡಿರುವ ವಿಚಾರವು ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ಮಂಜುನಾಥನನ್ನು ನ್ಯಾಯಾಂಗ ಬಂಧನಕ್ಕೆ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಸರ್ಕಾರಿ ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಆಲೋಕ್ ಕುಮಾರ್ ಐಪಿಎಸ್, ಅಪರ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ಹಾಗೂ ಗಿರೀಶ್.ಎಸ್. ಐಪಿಎಸ್, ಉಪ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ.ಐ, ಚಂದ್ರಪ್ಪ ಎಸ್.ಎಂ., ಪಿ.ಎಸ್.ಐ ಸಂತೋಷ್ ರಾಮ್, ಎ.ಎಸ್.ಐ ಕುಮಾರಸ್ವಾಮಿ ಹಾಗೂ ಸಿಬ್ಬಂದಿಗಳಾದ ಸತೀಶ್.ಆರ್, ಸದಾಶಿವ.ಸಿ, ವಿಜಯಕುಮಾರ್.ವೈ.ಎಸ್. ಮತ್ತು ಗುಣಶೀಲ ಕೈಗೊಂಡಿದ್ದರು.












Click it and Unblock the Notifications