ಕೊರೊನಾ ಬಿಕ್ಕಟ್ಟಿನಲ್ಲಿ ಆಶಾಕಿರಣ; ನೆರವಿನ ಹಸ್ತ ಚಾಚಿವೆ ಬೆಂಗಳೂರಿನ ಈ ಸಂಸ್ಥೆಗಳು...
ಬೆಂಗಳೂರು, ಮೇ 25: ಕೊರೊನಾ ಎಂಬ ಸಾಂಕ್ರಾಮಿಕ ಇಡೀ ದೇಶವನ್ನೇ ನಲುಗಿಸುತ್ತಿರುವ ಈ ಸಮಯದಲ್ಲಿ ಮಾನವೀಯತೆಯೊಂದೇ ಜನರಲ್ಲಿ ಭರವಸೆ ಮೂಡಿಸುವ ದಾರಿಯಾಗಿದೆ. ಇದೇ ಉದ್ದೇಶದೊಂದಿಗೆ ಕೆಲವು ಸಂಘ ಸಂಸ್ಥೆಗಳು ಹಲವು ರೀತಿ ಜನರಿಗೆ ನೆರವಾಗುತ್ತಿರುವ ಉದಾಹರಣೆಗಳು ಸಿಗುತ್ತಿವೆ.
ಬೆಂಗಳೂರಿನಲ್ಲಿಯೂ ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಆಮ್ಲಜನಕ, ಆಂಬುಲೆನ್ಸ್, ಕೊರೊನಾ ಕಿಟ್, ಲಸಿಕೆ, ದಿನಸಿ ಸಾಮಗ್ರಿ, ಯಾವುದೇ ಇರಲಿ, ಅಗತ್ಯವಿದ್ದವರಿಗೆ ನೆರವಾಗುವಲ್ಲಿ ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿವೆ ಎರಡು ಸ್ವಯಂ ಸೇವಾ ಸಂಸ್ಥೆಗಳು. ಕೊರೊನಾ ಎರಡನೇ ಅಲೆ ಭೀಕರತೆ ನಡುವೆ ಬಡಜನರು ಹಾಗೂ ಅಗತ್ಯವಿದ್ದವರಿಗೆ ನೆರವಾಗಲು ಸದಾ ಸಿದ್ಧ ಎನ್ನುತ್ತಿವೆ. ಮುಂದೆ ಓದಿ...
ಜನರ ನೆರವಿಗೆ ಮುಂದಾದ ಸ್ವಯಂಸೇವಾ ಸಂಸ್ಥೆಗಳು
ಮಂತ್ರಫಾರ್ ಚೇಂಜ್ (mantra4change) ಮತ್ತು ಸುರ್ಯ ಫೌಂಡೇಷನ್ ಎಂಬ ಎರಡು ಸ್ವಯಂ ಸೇವಾ ಸಂಸ್ಥೆಗಳು ಜನರ ನೆರವಿಗೆ ಮುಂದೆ ಬಂದಿದ್ದು, ಒಟ್ಟಾಗಿ ಹಲವು ಕಾರ್ಯಗಳನ್ನು ಹಮ್ಮಿಕೊಂಡಿವೆ. ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಈ ಸಂಸ್ಥೆಗಳು ಕೊರೊನಾ ಪಾಸಿಟಿವ್ ಬಂದ ರೋಗಿಗಳಿಗೆ ವೈದ್ಯಕೀಯ ನೆರವು ನೀಡುವಲ್ಲಿ ಆದ್ಯತೆ ನೀಡಿ ಕೆಲಸ ಆರಂಭಿಸಿವೆ. ರಾಜ್ಯ ಸರ್ಕಾರ ಹಾಗೂ ಬೆಂಗಳೂರಿನ ಸಿವಿಲ್ ಸೊಸೈಟಿ ಸಂಸ್ಥೆಗಳ ಸಹಯೋಗದಲ್ಲಿ ಕೊರೊನಾ ರೋಗಿಗಳಿಗೆ ಬೆಂಬಲ ನೀಡುತ್ತಿವೆ. ಇದೇ ಏಪ್ರಿಲ್ ನಿಂದ ಕರ್ನಾಟಕದಲ್ಲಿ ಎರಡನೇ ಅಲೆ ಗೋಚರಿಸುತ್ತಿದ್ದಂತೆ ಈ ಸಂಸ್ಥೆಗಳು ಕೆಲಸ ಆರಂಭಿಸಿದ್ದು, ಇದುವರೆಗೂ ಸಾವಿರಕ್ಕೂ ಹೆಚ್ಚು ಜನರ ಜೀವ ಉಳಿಸಿವೆ ಎಂದರೆ ತಪ್ಪಾಗದು.
ಲಾಕ್ಡೌನ್; ಜನರ ಕಷ್ಟಕ್ಕೆ ಮಿಡಿದ ಅಜೀಂ ಪ್ರೇಮ್ ಜಿ ಫೌಂಡೇಷನ್
ಸಂಸ್ಥೆಗೂ ನೆರವು ಒದಗಿಬಂತು
ಆಮ್ಲಜನಕ ಬೆಂಬಲಿತ ಆಂಬುಲೆನ್ಸ್ ಒದಗಿಸುವುದು, ಕೊರೊನಾ ಕಿಟ್ ನೀಡುವುದು, ಲಸಿಕೆ ತೆಗೆದುಕೊಳ್ಳಲು ಸಹಾಯ ಮಾಡುವುದು, ದಿನಸಿ ಸಾಮಗ್ರಿ ವಿತರಣೆ ಹೀಗೆ ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಸಂಸ್ಥೆಯ ಕಾರ್ಯವೈಖರಿಯಿಂದ ಪ್ರೇರೇಪಿತರಾಗಿ ಝೆರೋದ, ವೆಲ್ಸ್ ಫಾರ್ಗೊ, ದಿ ಕಂಬಲ್ ಫೌಂಡೇಷನ್, ಶಿಬುಲಾಲ್ ಫ್ಯಾಮಿಲಿ ಫಿಲಾಂಟ್ರೋಫಿಕ್ ಇನಿಷಿಯೇಟಿವ್, ತಾಮರ ರೆಸಾರ್ಟ್ ಹಾಗೂ ಟೆಕ್ ಮಹೀಂದ್ರಾ ಫೌಂಡೇಷನ್ಗಳು ಈ ಸ್ವಯಂಸೇವಾ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿವೆ.
ಬೆಂಗಳೂರಿನಲ್ಲಿ 30 ಆಕ್ಸಿಜನ್ ಬೆಂಬಲಿತ ಆಂಬುಲೆನ್ಸ್ಗಳು
"ಕೊರೊನಾ ರೋಗಿಗಳಿಗೆ ನೆರವಾಗಲು ಬೆಂಗಳೂರಿನಲ್ಲಿ ಆಮ್ಲಜನಕ ಬೆಂಬಲಿತ 30 ಆಂಬುಲೆನ್ಸ್ಗಳನ್ನು ಒದಗಿಸಲಾಗಿದೆ. ಐದು ಆಕ್ಸಿಜನ್ ಆನ್ ವೀಲ್ ವಾಹನಗಳೂ ಇವೆ. ಕೆಲವೊಮ್ಮೆ ಆಸ್ಪತ್ರೆಗೆ ಸೇರಿಸುವುದು ತಡವಾದರೂ ರೋಗಿ ಪ್ರಾಣಕ್ಕೆ ಅಪಾಯಕಾರಿ. ಹೀಗಾಗಿ ಆಮ್ಲಜನಕ ಬೆಂಬಲಿತ ಆಂಬುಲೆನ್ಸ್ ಗೆ ಮೊದಲು ಆದ್ಯತೆ ನೀಡಿದೆವು" ಎಂದು ಹೇಳಿದರು ಮಂತ್ರ ಫಾರ್ ಚೇಂಜ್ನ ಸಹಸಂಸ್ಥಾಪಕ ಸಂತೋಷ್ ಮೋರೆ. ಬಿಬಿಎಂಪಿ ವಲಯಾಧಿಕಾರಿಯವರ ಸಹಭಾಗಿತ್ವದಲ್ಲಿ ಈ ಸೇವೆ ಆರಂಭಿಸಲಾಗಿದೆ ಎಂದರು. ಇದುವರೆಗೂ ಎರಡು ಸಾವಿರ ಕೊರೊನಾ ರೋಗಿಗಳಿಗೆ ಕೊರೊನಾ ಕಿಟ್ ನೀಡಲಾಗಿದೆ. ಇದರಲ್ಲಿ ಔಷಧಿಗಳು, ಮಾಸ್ಕ್, ಸ್ಯಾನಿಟೈಜರ್, ಆಕ್ಸಿಮೀಟರ್, ಥರ್ಮಾಮೀಟರ್ ನೀಡಲಾಗಿದೆ. ಬಡ ರೋಗಿಗಳಿಗೆ ಇದು ಎಷ್ಟೋ ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ಸಂಕಷ್ಟದಲ್ಲಿದ್ದ ಹಂಪಿ ಗೈಡ್ಗಳಿಗೆ ಸಹಾಯ ಮಾಡಿದ ಸುಧಾಮೂರ್ತಿ
Recommended Video
ಗ್ರಾಮಗಳಲ್ಲಿಯೂ ಸೇವೆ ನೀಡಲು ಆಲೋಚನೆ
ಆಮ್ಲಜನಕ, ಹಾಸಿಗೆ, ಆಂಬುಲೆನ್ಸ್ ಸೇವೆಯಿಲ್ಲದೇ ಪರಿತಪಿಸುತ್ತಿರುವ ರೋಗಿಗಳಿಗೆ ನೆರವು ನೀಡಲು ನಾವು ಸದಾ ಸಿದ್ಧ. ಇದೀಗ ಗ್ರಾಮಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡುಬರುತ್ತಿದ್ದು, ಅಲ್ಲಿಗೂ ನಮ್ಮ ಸೇವೆಗಳನ್ನು ಮುಂದುವರೆಸುವ ಯೋಜನೆಯಲ್ಲಿದ್ದೇವೆ ಎಂದು ಸುರ್ಯ ಫೌಂಡೇಷನ್ನ ಸದಸ್ಯ ಪುನೀತ್ ಹೇಳುತ್ತಾರೆ. ಬೆಂಗಳೂರಿನಲ್ಲಿ ಸುಮಾರು 20 ಸಾವಿರ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸಲಾಗಿದೆ. ಲಾಕ್ಡೌನ್ನಿಂದಾಗಿ ಬಡಜನರು ತತ್ತರಿಸುತ್ತಿದ್ದು, ಅವರಿಗೆ ನಮ್ಮ ಕೈಲಾದ ಮಟ್ಟದಲ್ಲಿ ನೆರವು ನೀಡುತ್ತಿದ್ದೇವೆ. ಕಳೆದ ವರ್ಷ ಲಾಕ್ಡೌನ್ನಿಂದಾದ ಅನುಭವಗಳಿಂದ ಈ ಬಾರಿ ಮುನ್ನವೇ ತಯಾರಿ ನಡೆಸಿ ನಗರದ ಹಲವು ಭಾಗಗಳಿಗೆ ದಿನಸಿ ಕಿಟ್ಗಳನ್ನು ಒದಗಿಸಿದ್ದೇವೆ ಎಂದು ಹೇಳಿದರು. ರೋಗಿಗಳಲ್ಲಿ ಆಮ್ಲಜನಕ ಮಟ್ಟದ ಕುರಿತು ನಿರಂತರ ನಿಗಾ ವಹಿಸಲು ಪೇಷಂಟ್ ಕೇರ್ ಕೇಂದ್ರ ಸ್ಥಾಪಿಸಿದ್ದು, 40 ಹಾಸಿಗೆ ಸಾಮರ್ಥ್ಯದ ಕೇಂದ್ರ ಮೇ ತಿಂಗಳಿನಿಂದ ತೆರೆದಿದೆ. ಈ ಸಂಸ್ಥೆಗಳ ಕಡೆಯಿಂದ ಬೆಂಗಳೂರಿನಲ್ಲಿ ಇದುವರೆಗೂ 1500 ಮಂದಿಗೆ ಲಸಿಕೆ ನೀಡಲಾಗಿದೆ.
ಅವಶ್ಯಕ ನೆರವು ಬಯಸುವ ಜನರು 080-47181616ಗೆ ಸಂಪರ್ಕಿಸಲು ಕೋರಲಾಗಿದೆ.