ವಕೀಲರ ಕಚೇರಿಯಲ್ಲಿ ಅಗ್ನಿ ಆಕಸ್ಮಿಕ, ಇಬ್ಬರು ಸಾವು
ಬೆಂಗಳೂರು, ಮೇ 26 : ವಕೀಲರ ಕಚೇರಿಯಲ್ಲಿ ಉಂಟಾದ ಅಗ್ನಿ ಆಕಸ್ಮಿಕದಿಂದಾಗಿ ಕಕ್ಷಿದಾರ ಮತ್ತು ಟೈಪಿಸ್ಟ್ ಸಾವನ್ನಪ್ಪಿರುವ ಘಟನೆ ಗಾಂಧಿನಗರದಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ವೇಳೆಗೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದರು.
ಗಾಂಧಿನಗರ 3ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆಯಲ್ಲಿರುವ ಆನಂದ ನಿವಾಸ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಹಿರಿಯ ವಕೀಲ ಬಾಲಕೃಷ್ಣ ಅವರ ಕಚೇರಿಗೆ ಭಾನುವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಜೀವ ಉಳಿಸಿಕೊಳ್ಳಲು ಅಂತಿಮ ಕ್ಷಣದವರೆಗೂ ನಡೆಸಿದ ಇಬ್ಬರ ಹೋರಾಟ ವಿಫಲವಾಗಿದ್ದು, ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಮಳಿಗೆಯೊಂದರ ಅಗ್ರಿಮೆಂಟ್ ಮಾಡಿಸಿಕೊಳ್ಳಲು ಬಂದಿದ್ದ ವಿಜಯ ನಗರ ನಿವಾಸಿ ಸುಂದರ್(67) ಹಾಗೂ ವಕೀಲರ ಕಚೇರಿಯ ಟೈಪಿಸ್ಟ್ ನಯಾಜ್ (61) ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕೀಟ್ನಿಂದಾಗಿ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಬ್ಬರಿಗೂ ಸ್ವಲ್ಪವೂ ಸುಟ್ಟ ಗಾಯಗಳಾಗಿಲ್ಲ. ಆದರೆ, ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಕಿ ಹೊತ್ತಿದ್ದು ತಿಳಿದಿತ್ತು : ಗಾಂಧಿನಗರದ ಆನಂದ ನಿವಾಸದ ಮೊದಲನೇ ಮಹಡಿಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿತು. ಇದನ್ನು ತಿಳಿದ ಇಬ್ಬರು ಕೆಳಗೆ ಇಳಿಯಲು ಹೋಗಿದ್ದಾರೆ. ಆದರೆ, ಓಡಾಡಲು ಸಣ್ಣ ದಾರಿ ಮಾತ್ರ ಇತ್ತು, ಅದರಲ್ಲಿ ಹೊಗೆ ಮತ್ತು ಬೆಂಕಿಯ ಶಾಖ ಇದ್ದ ಕಾರಣ ಕೆಳಗಿಳಿಯಲು ಸಾಧ್ಯವಾಗಿಲ್ಲ.
ಕಡತಗಳು, ಪುಸ್ತಕಗಳು, ಕಂಪ್ಯೂಟರ್, ಫೈಬರ್ ವಸ್ತುಗಳು ಇದ್ದ ಕಾರಣ ಬೆಂಕಿ ವೇಗವಾಗಿ ಕಟ್ಟಡಕ್ಕೆ ಹಬ್ಬಿದೆ. ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟಿದ್ದರಿಂದ ಕೆಟ್ಟ ಹೊಗೆ ಬಂದು ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗಿದೆ. ಆದ್ದರಿಂದ ಇಬ್ಬರು ಕಚೇರಿಯಲ್ಲಿಯೇ ಮೃತಪಟ್ಟಿದ್ದಾರೆ.
ಚಾಕೋಲೇಟ್ ತರಲು ಹೋಗಿ ಪಾರಾದರು : ವಕೀಲ ಬಾಲಕೃಷ್ಣ ಅವರ ತಂಗಿಯ ಮೂವರು ಮಕ್ಕಳು ಕಚೇರಿಗೆ ಆಗಮಿಸಿದ್ದರು. ಚಾಕೋಲೇಟ್ ಹಾಗೂ ತಿಂಡಿ ಕೊಡಿಸಲು ಕಚೇರಿ ಸಹಾಯಕ ಅವರನ್ನು ಹೊರಗೆ ಕರೆದುಕೊಂಡು ಹೋಗಿದ್ದರು. ಬಾಲಕೃಷ್ಣ ಅವರು ಕಿರಿಯ ವಕೀಲರೊಂದಿಗೆ ಕಾಫಿ ಸೇವಿಸಲು ಹೊರಗೆ ಹೋಗಿದ್ದರು. ಆದ್ದರಿಂದ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ವರ್ಷ ಸಹ ಈ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಆದರೆ, ಯಾವುದೇ ಸಾವು ನೋವು ಸಂಭವಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಮೃತ ನಯಾಜ್ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿದ್ದರು. ನಿವೃತ್ತಿಯಾದ ಬಳಿಕ ಬಾಲಕೃಷ್ಣ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.












Click it and Unblock the Notifications