ಜೆಡಿಎಸ್ ವಿರುದ್ಧ ಅಪಪ್ರಚಾರ: ಇಬ್ಬರು ಶಿಕ್ಷಕರು ಅಮಾನತು
ಬೆಂಗಳೂರು, ಡಿಸೆಂಬರ್ 12: ಸಚಿವ ಎಚ್ಡಿ ರೇವಣ್ಣ ವಿರುದ್ಧ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.ಸಹೋದ್ಯೋಗಿಯೊಬ್ಬರ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಪಿಡಬ್ಲ್ಯೂಡಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ನಿಂದಿಸಿ ಮಾತನಾಡಿದ್ದರು. ಶಿಕ್ಷಕ ಮಾತನಾಡಿದ್ದ ಆಡಿಯೋ ಕ್ಲಿಪ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಸಂಬಂಧ ಜೆಡಿಎಸ್ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸಿದಾಗ ಧ್ವನಿ ಶಿಕ್ಷಕನದ್ದೇ ಎಂಬುದು ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ಶಿಕ್ಷಕನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷ ಇಲಾಖೆ, ಸಚಿವರ ವರ್ಚಸ್ಸು ಹಾಳು ಮಾಡಿದ ಕಾರಣಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮ. 1966 ಅಡಿಯಲ್ಲಿ ಶಿಕ್ಷಕನನ್ನು ಅಮಾನತು ಮಾಡಿದೆ.
ಮತ್ತೊಂದು ಪ್ರಕರಣದಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ಮಾಡಿದ ಹಿನ್ನಲೆಯಲ್ಲಿ ಅರಕಲಗೂಡು ತಾಲೂಕಿನ ಬಿದನೂರಿನ ಸರ್ಕಾರಿ ಶಾಲೆ ಸಹ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಯಾಚನೆ ಮಾಡಿದ ವಿಡಿಯೋ ತುಣುಕನ್ನು ಶಿಕ್ಷಕ ವಾಟ್ಸಪ್ ಮೂಲಕ ಹರಿಬಿಟ್ಟಿದ್ದರು. ಅಲ್ಲದೆ, ಶಿಕ್ಷಕರಿಗೆ ಅಂಜೆ ಮತಪತ್ರ ನೀಡುವಂತೆ ಹಾಗೂ ಮಂಜುಗೆ ಮತ ನೀಡುವಂತೆ ಒತ್ತಡ ಹೇರಿದ್ದು ಈ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 4ರಂದು ಅಮಾನತು ಆದೇಶ ನೀಡಲಾಗಿದೆ. ಶಿಕ್ಷಕರ ಪರ ವಕೀಲರು ಹೇಳುವ ಪ್ರಕಾರ ಉನ್ನತ ಅಧಿಕಾರಿಗಳು ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಘಟನೆ ನಡೆದು ಆರು ತಿಂಗಳ ಬಳಿಕ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ತನಿಖೆ ಮಾಡದೆ ಅಮಾನತು ಆದೇಶವನ್ನು ನೀಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications