ಬೆಂಗಳೂರಿನ ಮನೆಯಲ್ಲಿ ನಿಗೂಢ ಸ್ಫೋಟದಿಂದ ವೃದ್ದ ದಂಪತಿಗೆ ಗಾಯ
ಬೆಂಗಳೂರು, ಆ. 16: ವಿಜಯನಗರದ ಮನೆಯೊಂದರಲ್ಲಿ ಸಂಭವಿಸಿದ ನಿಗೂಢ ಸ್ಫೋಟದಿಂದ ಇಬ್ಬರು ವೃದ್ಧ ದಂಪತಿ ಗಾಯಗೊಂಡಿದ್ದಾರೆ. ಎರಡು ಹಂತಸ್ತಿನ ಮನೆಯ ಮೊದಲನೇ ಮಹಡಿಯಲ್ಲಿ ಈ ಘಟನೆ ಮಧ್ಯರಾತ್ರಿ 12. 45 ರ ಸುಮಾರಿಗೆ ಸಂಭವಿಸಿದ್ದು ದಂಪತಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ವಿಜಯನಗರದ ಹಂಪಿನಗರ ನಿವಾಸಿ ಸೂರ್ಯ ನಾರಾಯಣಶೆಟ್ಟಿ (74) ಹಾಗೂ ಪುಷ್ಪಾವತಿ (70) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂರ್ಯ ನಾರಾಯಣ ಶೆಟ್ಟಿ ಅವರನ್ನು ವಿಜಯನಗರದ ಆಸ್ಪತ್ರೆಗೆ ದಾಖಲಿಸಿದ್ದು, ಪುಷ್ಪಾವತಿ ಅವರನ್ನು ವಿಕ್ಟೋರಿಯಾ ಸುಟ್ಟ ಗಾಯಗಳ ವಿಭಾಗಕ್ಕೆ ದಾಖಲಿಸಲಾಗಿದೆ.
ವಿಜಯನಗರದ ಹಂಪಿನಗರದ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿ ಇಬ್ಬರು ವೃದ್ಧ ದಂಪತಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.#Vijayanagara #kannadanews pic.twitter.com/JEXbgt3rA6
— oneindiakannada (@OneindiaKannada) August 16, 2021
ಸ್ಫೋಟದ ರಭಸಕ್ಕೆ ಮನೆಯ ಡೋರ್, ಗ್ರಿಲ್ ಛಿದ್ರ ಛಿದ್ರವಾಗಿದೆ. ಈ ವೇಳೆ ವಿದ್ಯುತ್ ತಂತಿ ಕಟ್ ಆಗಿ ತಕ್ಷಣ ಏರಿಯಾದಲ್ಲಿ ಕರೆಂಟ್ ಕಟ್ ಆಗಿ ಕತ್ತಲೇ ಆವರಿಸಿದೆ. ಘಟನೆ ಸಂಭವಿಸಿದ ಮೊದ ಮೊದಲು ಸಿಲಿಂಡರ್ ಸ್ಫೋಟ ಎಂದು ಹೇಳಲಾಗಿತ್ತು. ಆದರೆ ಮನೆಯಲ್ಲಿದ್ದ 2 ಸಿಲಿಂಡರ್ಗಳು ಸುರಕ್ಷಿತವಾಗಿದ್ದು, ಇತ್ತೀಚೆಗೆ ಸೂರ್ಯನಾರಾಯಣ ಶೆಟ್ಟಿ ದಂಪತಿ ಪುತ್ರ ದಿನೇಶ್ ಒಂದು ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದ. ಅದರ ಬ್ಯಾಟರಿ ಏನಾದ್ರು ಬ್ಲಾಸ್ಟ್ ಆಗಿರುವ ಬಗ್ಗೆ ಕೂಡ ಪರಿಶೀಲನೆ ನಡೆಸಿದರು. ಅದು ಕೂಡ ಸ್ಫೋಟಿಸಿಲ್ಲ. ಹೀಗಾಗಿ ಯಾವ ವಸ್ತುವಿನಿಂದ ಸ್ಫೋಟ ಸಂಭವಿಸಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಬೇಕಿದೆ.

ಗಾಯಾಳು ಪುತ್ರನ ಹೇಳಿಕೆ :
ಮನೆಯಲ್ಲಿ ನನ್ನ ತಂದೆ ಮತ್ತು ತಾಯಿ ವಾಸವಾಗಿದ್ದರು. ನಿಗೂಢ ಸ್ಫೋಟದಿಂದ ಚರ್ಮಕ್ಕೆ ಗಾಯಗಳಾಗಿವೆ. ಸದ್ಯ ವಿಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದರಿಂದ ಸ್ಫೋಟ ಆಗಿದೆ ಎಂಬುದು ನಮಗೂ ತಿಳಿಯುತ್ತಿಲ್ಲ. ಮನೆಯಲ್ಲಿದ್ದ ಎರಡು ಸಿಲಿಂಡರ್ ಸುರಕ್ಷಿತವಾಗಿವೆ. ಎಲೆಕ್ಟ್ರಿಕ್ ಬೈಕ್ ಬ್ಯಾಟರಿ- ಚಾರ್ಜರ್ ಕೂಡ ಸುರಕ್ಷಿತವಾಗಿದ್ದು, ಯುಪಿಎಸ್ ಸಹ ಏನೂ ಆಗಿಲ್ಲ. ಮನೆಯಲ್ಲಿದ್ದ ಫ್ರಿಡ್ಜ್ ಮಾತ್ರ ಹಾರಿ ಬಿದ್ದಿದೆ. ಕಳೆದ ಹದಿನೈದು ದಿನಗಳ ಹಿಂದೆ ಆನ್ ಲೈನ್ ನಲ್ಲಿ ಖರೀದಿಸಿದ್ದೆವು. ಅದರಿಂದಲೇ ಸ್ಫೋಟ ಸಂಭಿಸಿರಬಹುದು ಎಂಬ ಅನುಮಾನ ವಿದೆ. ಸದ್ಯದ ವರೆಗೂ ಯಾವುದರಿಂದ ಸ್ಫೋಟ ಸಂಭವಿಸಿದೆ ಎಂಬುದು ನಮಗೆ ಗೊತ್ತಾಗಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ತನಿಖೆ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ ಎಂದು ಸೂರ್ಯ ನಾರಾಯಣ ಶೆಟ್ಟಿಯ ಪುತ್ರ ದಿನೇಶ್ ಹೇಳಿಕೆ ನೀಡಿದ್ದಾರೆ.

ಫ್ರಿಡ್ಜ್ ಸ್ಫೋಟ ಸಾಧ್ಯತೆ: ಬಾಗಿಲು ಹಿಂಬದಿ ಇಟ್ಟಿದ್ದ ಫ್ರಿಡ್ಜ್ ಸ್ಫೋಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾಮಾನ್ಯವಾಗಿ ಫ್ರಿಡ್ಜ್ ಗಳು ಸ್ಫೋಟಿಸುತ್ತವೆ. ಯಾಕೆಂದರೆ ಅಪರೂಪದ ಪ್ರಕರಣಗಳಲ್ಲಿ ಫ್ರಿಡ್ಜ್ ಗಳು ಬಿಸಿಯಾಗುತ್ತವೆ. ಆ ಬಿಸಿಯನ್ನು ತಂಪು ಮಾಡಲೆಂದೇ ಕಂಪ್ರೆಸರ್ ನಲ್ಲಿ ಗ್ಯಾಸ್ ತುಂಬಿಸಿಡಲಾಗುತ್ತದೆ. ಫ್ರಿಡ್ಜ್ ನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿದ ವೇಳೆ ಇಲ್ಲವೇ ತೀರಾ ಅಲುಗಾಡಿಸಿದ ಸಂದರ್ಭದಲ್ಲಿ ಏಕಾಏಕಿ ಆನ್ ಮಾಡಿದರೆ ಫ್ರಿಡ್ಜ್ ಕೂಲ್ ಆಗಿರಲು ಇರುವ ಕಂಪ್ರೆಸರ್ ನಲ್ಲಿ ಸಮಸ್ಯೆ ಉಂಟಾಗಿ ಒತ್ತಡ ನಿರ್ಮಾಣವಾಗಿ ಸ್ಪೋಟ ಸಂಭವಿಸುವ ಸಾಧ್ಯತೆಯಿದೆ. ಸೂರ್ಯ ನಾರಾಯಣಶೆಟ್ಟಿ ಅವರ ಮನೆಯಲ್ಲಿನ ನಿಗೂಢ ಸ್ಫೋಟ ಸಹ ರೆಫ್ರಿಜೇಟರ್ ನಿಂದ ಅಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾ ಇಲ್ಲವೇ ಮನೆಯಲ್ಲಿ ಏನಾದರೂ ಸ್ಪೋಟಕ ವಸ್ತು ಇತ್ತೇ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

Recommended Video
ಬೆಚ್ಚಿಬಿದ್ದ ಹಂಪಿನಗರ ಜನ: ಸೂರ್ಯನಾರಾಯನ ಶೆಟ್ಟಿ ಮನೆಯಲ್ಲಿ ಕೇಳಿ ಬಂದ ಸ್ಫೋಟದ ಸದ್ದು ಕೇಳಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ ಸ್ಫೋಟ ಸಂಭವಿಸಿದ ಕೂಡಲೇ ಕೆಲವರು ಹೊರ ಬಂದು ನೋಡಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ತಿಳಿಸಿದ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿಜಯನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications