ನ್ಯಾಯಬೆಲೆ ಅಂಗಡಿಗಳಲ್ಲಿ ಬಸ್,ರೈಲು,ವಿಮಾನ ಸಂಚಾರಕ್ಕೆ ಟಿಕೇಟು ಲಭ್ಯ!
ಬೆಂಗಳೂರು, ಜನವರಿ 03 : ರಾಜ್ಯಾದ್ಯಂತ ಹಂತ ಹಂತವಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳು ಸೇವಾ ಸಿಂಧು ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿದ್ದು ಜನರಿಗೆ ಅನುಕೂಲವಾಗುವಂತೆ ಬಸ್ಸು,ರೈಲು ಹಾಗೂ ವಿಮಾನದ ಟಿಕೆಟ್ ಗಳನ್ನು ಒದಗಿಸಲಿವೆ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಈ ಕುರಿತು ಸಂಬಂಧಪಟ್ಟವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ನ್ಯಾಯಬೆಲೆ ಅಂಗಡಿಗಳು ಹದಿನೈದು ದಿನಗಳಲ್ಲಿ ಗ್ರಾಹಕರಿಗೆ ಪಡಿತರ ಒದಗಿಸುವುದರ ಜತೆ ಸೇವಾ ಕೇಂದ್ರಗಳಾಗಿಯೂ ಕೆಲಸ ನಿರ್ವಹಿಸಬಹುದು. ಇದರಿಂದ ನ್ಯಾಯಬೆಲೆ ಅಂಗಡಿಯವರು ಪ್ರತಿ ತಿಂಗಳು ಹೆಚ್ಚುವರಿಯಾಗಿ ಹದಿನೈದರಿಂದ ಇಪ್ಪತ್ತು ಸಾವಿರ ರೂ ದುಡಿಯಲು ಸಾಧ್ಯವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

ರಾಜ್ಯದಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಪದ್ಧತಿಯನ್ನು ತೆಗೆದುಹಾಕಲಾಗಿದ್ದು ವಾರ್ಷಿಕ 1.20 ಲಕ್ಷ ರೂ ಆದಾಯ ಇರುವವರು ಆದ್ಯತಾ ವಲಯಕ್ಕೆ,ಇದಕ್ಕೂ ಹೆಚ್ಚಿನ ಆದಾಯ ಇರುವವರು ಆದ್ಯತಾ ವಲಯದ ಹೊರಗಿರುತ್ತಾರೆ. ಇದುವರೆಗೆ ಬಿಪಿಎಲ್ ಪದ್ದತಿಯಡಿ ಇರುವವರು ಇನ್ನು ಮುಂದೆ ವಾರ್ಷಿಕ ಒಂದು ಲಕ್ಷ ಇಪ್ಪತ್ತು ಸಾವಿರ ರೂ ಆದಾಯದ ಮಿತಿಯಲ್ಲಿರುತ್ತಾರೆ.ಹೆಚ್ಚುವರಿ ಆದಾಯವಿದ್ದವರು ಇದುವರೆಗೂ ಇದ್ದ ಎಪಿಎಲ್ ವಲಯಕ್ಕೆ ವಲಯಕ್ಕೆ ಬರುತ್ತಾರೆ ಎಂದರು.
ಪಡಿತರ ಚೀಟಿಗಳಿಗೆ ಶೇಕಡಾ ನೂರಕ್ಕೆ ನೂರು ಆಧಾರ್ ಕಾರ್ಡ್ ಲಿಂಕ್ ಮಾಡಿದ ದೇಶದ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದ ಅವರು, ಆ ಮೂಲಕ ಪಡಿತರ ಪದ್ಧತಿಯಡಿ ಯಾವುದೇ ಬಗೆಯ ಸೋರಿಕೆ ಇಲ್ಲದಂತೆ ಮಾಡಲಾಗಿದೆ ಎಂದರು.
ಹೀಗೆ ಸೋರಿಕೆ ತಡೆಗಟ್ಟಿದ್ದರಿಂದ ಮಾಸಿಕ ಐವತ್ತು ಕೋಟಿ ರೂಗಳಷ್ಟು ಹಣ ಉಳಿತಾಯವಾಗುತ್ತಿದೆ ಎಂದ ಅವರು, ಈಗ ನೀಡಿರುವ ಹೊಸ ಪಡಿತರ ಚೀಟಿಗಳು ಸೇರಿದಂತೆ ಆದ್ಯತಾ ವಲಯದೊಳಗೆ ಪಡಿತರ ಚೀಟಿ ಪಡೆದ ಕುಟುಂಬಗಳ ಸಂಖ್ಯೆ 1.10 ಕೋಟಿಗಳಷ್ಟಾಗಿದೆ ಎಂದು ಹೇಳಿದರು.












Click it and Unblock the Notifications