ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮತ್ತೆ ಜೀವಕಳೆ?
ಬೆಂಗಳೂರು, ಅಕ್ಟೋಬರ್ 26 : ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಪುನರಾರಂಭಗೊಳ್ಳಲಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆ ತಪ್ಪಿಸಲು ನಿರ್ಮಿಸಿದ್ದ ನಿಲ್ದಾಣ ಒಂದೇ ವರ್ಷದಲ್ಲಿ ಜನರಿಂದ ದೂರವಾಗಿತ್ತು.
ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು, 'ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಪುನರಾರಂಭ ಮಾಡಲಾಗುತ್ತದೆ' ಎಂದು ಹೇಳಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಎಲ್ಲಾ ಬಸ್ಸುಗಳನ್ನು ಪೀಣ್ಯಕ್ಕೆ ಸ್ಥಳಾಂತರ ಮಾಡುವ ಉದ್ದೇಶದಿಂದ ನಿಲ್ದಾಣ ನಿರ್ಮಿಸಲಾಗಿತ್ತು.
ನಷ್ಟದ ನೆಪ ಹೇಳಿದ ಸಾರಿಗೆ ಸಂಸ್ಥೆಗಳು ಪೀಣ್ಯದ ಬಸ್ ನಿಲ್ದಾಣವನ್ನು ಭೂತ ಬಂಗಲೆಯಾಗುವಂತೆ ಮಾಡಿದ್ದವು. ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ಬಸ್ ನಿಲ್ದಾಣವನ್ನು ಮೊದಲಿನಂತೆ ಮೆಜೆಸ್ಟಿಕ್ಗೆ ಸ್ಥಳಾಂತರ ಮಾಡಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದವು. ಮನವಿಯ ಅನ್ವಯ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಲಾಗಿತ್ತು.
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ 2014ರ ಸೆಪ್ಟೆಂಬರ್ 10 ರಂದು ಕಾರ್ಯರಂಭ ಮಾಡಿತ್ತು. ಆದರೆ, ನಷ್ಟದ ನೆಪ ಹೇಳಿದ ಕಾರಣ 2015ರ ಫೆ.28ಕ್ಕೆ ನಿಲ್ದಾಣವನ್ನು ಪುನಃ ಮೆಜೆಸ್ಟಿಕ್ಗೆ ಸ್ಥಳಾಂತಗೊಳಿಸಲಾಗಿತ್ತು. ಅಂದಿನಿಂದ ಬಸ್ಸುಗಳ ನಿಲುಗಡೆ, ಹಬ್ಬದ ಸಂದರ್ಭದಲ್ಲಿ ಬಸ್ಸುಗಳನ್ನು ಓಡಿಸಲು ಮಾತ್ರ ನಿಲ್ದಾಣವನ್ನು ಬಳಸಲಾಗುತ್ತಿದೆ...

ಸಾರಿಗೆ ಸಚಿವರು ಹೇಳಿದ್ದೇನು?
'ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸುವಂತೆ ಮಾತುಕತೆ ನಡೆಯುತ್ತಿದೆ. ರಾಜ್ಯದ 17 ಜಿಲ್ಲೆಗಳ ಬಸ್ಸುಗಳು ನಿಲ್ದಾಣದಿಂದ ಹೊರಡುವಂತೆ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ವರವಾದ ನಮ್ಮ ಮೆಟ್ರೋ ರೈಲು ಮಾರ್ಗ
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಸಮೀಪಕ್ಕೆ ಈಗ ನಮ್ಮ ಮೆಟ್ರೋ ಸಂಚಾರ ನಡೆಸುತ್ತದೆ. ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದ ರೈಲು ಬಸ್ ನಿಲ್ದಾಣದ ತನಕ ತಲುಪುತ್ತದೆ. ಬಿಎಂಟಿಸಿಯ ಫೀಡರ್ ಬಸ್ ಸೇವೆಯನ್ನು ಆರಂಭಿಸಿ ನಿಲ್ದಾಣಕ್ಕೆ ಮರುಜೀವ ತುಂಬುವುದು ಸಾರಿಗೆ ಇಲಾಖೆಯ ಚಿಂತನೆ.

ದೂರ ಎಂಬುದೇ ದೊಡ್ಡ ಆರೋಪ
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ನಗರದಿಂದ ದೂರವಿದೆ ಎಂಬುದು ಜನರ ಬಹುದೊಡ್ಡ ಆರೋಪವಾಗಿದೆ. ಈಗ ನಮ್ಮ ಮೆಟ್ರೋ ಸೇವೆ ಆರಂಭವಾಗಿರುವುದರಿಂದ ನಿಲ್ದಾಣ ತಲುಪುವುದು ಸುಲಭವಾಗಲಿದೆ. ಆದ್ದರಿಂದ, ಬಸ್ ನಿಲ್ದಾಣವನ್ನು ಪುನರಾರಂಭಿಸಲು ಇಲಾಖೆ ಮುಂದಾಗಿದೆ.

ಸಂಪರ್ಕ ಸಾರಿಗೆ ವ್ಯವಸ್ಥೆ
ಕೆಎಸ್ಆರ್ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ನಿಂದ ಸಂಪರ್ಕ ಸಾರಿಗೆ ಬಸ್ಸುಗಳನ್ನು ಓಡಿಸುತ್ತಿತ್ತು. ನಿಲ್ದಾಣದ ಸ್ಥಳಾಂತರವಾದ ತಕ್ಷಣ ಅದನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಬಸ್ ನಿಲ್ದಾಣ ಜನರಿಂದ ದೂರವಾಗುತ್ತಲೇ ಹೋಯಿತು.

ವಾಣಿಜ್ಯೋದ್ಯಮಕ್ಕೆ ಮರುಜೀವ?
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಆರಂಭವಾದ ತಕ್ಷಣ ಬಸ್ ನಿಲ್ದಾಣದ ಆವರಣ ಸುತ್ತಮುತ್ತಲು ವಾಣಿಜ್ಯ ಚಟುವಟಿಕೆ ಚುರುಕುಗೊಂಡಿದ್ದವು. ನಿಲ್ದಾಣದ ಆವರಣದಲ್ಲಿ ಮಾಲ್ ನಿರ್ಮಾಣಕ್ಕೂ ಸಿದ್ಧತೆ ನಡೆದಿತ್ತು. ಆದರೆ, ನಿಲ್ದಾಣ ಸ್ಥಳಾಂತರಗೊಂಡ ಬಳಿಕ ವಾಣಿಜ್ಯ ಚಟುವಟಿಕೆ ನೆಲ ಕಚ್ಚಿದೆ.












Click it and Unblock the Notifications