ಬೆಂಗಳೂರು:ರಸ್ತೆ ಜಲಾವೃತ, ಬಿಟಿಪಿ ಕೆಲಸಕ್ಕೆ ಮೆಚ್ಚುಗೆ ಬಿಬಿಎಂಪಿ ವಿರುದ್ಧ ಆಕ್ರೋಶ
ಬೆಂಗಳೂರು ಸೆಪ್ಟಂಬರ್ 02: ತೀವ್ರ ಮಳೆಯಿಂದಾಗಿ ಕೆಲವು ದಿನಗಳಿಂದ ಬೆಂಗಳೂರಿನ ಬಡಾವಣೆ, ರಸ್ತೆಗಳು ಜಲಾವೃತಗೊಂಡಿವೆ. ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ತಲುಪಿವೆ. ಸಂಚಾರ ದಟ್ಟಣೆ ನಿರ್ವಹಿಸುವ ಸಂಬಂಧ ನಗರ ಸಂಚಾರ ಪೊಲೀಸರೇ ರಸ್ತೆಯಲ್ಲಿ ವಾಟರ್ ಲಾಂಗಿಂಗ್ (ಬ್ಲಾಕ್ ಆಗಿದ್ದ ಒಳಚರಂಡಿ) ಸ್ವಚ್ಚಗೊಳಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬಿಬಿಎಂಪಿ ಮಾಡಬೇಕಿದ್ದ ಕೆಲಸವನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಮಾಡುವ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕುರಿತ ವಿಡಿಯೋವನ್ನು ಎಚ್ಎಎಲ್ ಏರ್ಪೋರ್ಟ್ ಟ್ರಾಫಿಕ್ ಪೊಲೀಸ್ ಠಾಣೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ನಗರದ ಎಕೋ ವರ್ಲ್ಡ್ ಪ್ರದೇಶದ ಬಳಿ ರಸ್ತೆ ಮೇಲೆ ಬಿದ್ದ ನೀರು ಒಳಚರಂಡಿ ಮೂಲಕ ಹರಿದು ಹೋಗದೇ ರಸ್ತೆ ತುಂಬ ನಿಂತುಕೊಂಡಿತ್ತು. ಅದನ್ನು ನೋಡಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕಸ, ತ್ಯಾಜ್ಯ ತುಂಬಿಕೊಂಡಿದ್ದ ರಸ್ತೆಯಲ್ಲಿನ ಒಂಚರಂಡಿ ರಂಧ್ರವನ್ನು ಶುಚಿಗೊಳಿಸಿದರು. ಇದರಿಂದ ರಸ್ತೆ ಮೇಲಿನ ನೀರು ಕಡಿಮೆಯಾಗಿ ಹಂತ ಹಂತವಾಗಿ ಸಂಚಾರ ದಟ್ಟಣೆ ಹಿಡಿತಕ್ಕೆ ಬಂದಿರುವುದು 41 ಸೆಕೆಂಡ್ ಈ ವಿಡಿಯೋ ಮೂಲಕ ಗೊತ್ತಾಗುತ್ತದೆ.
ಇದಕ್ಕೆ ಸಂಚಾರ ಪೊಲೀಸ್ ವಿಭಾಗಕ್ಕೆ ಮೆಚ್ಚುಗೆ ಮಾತನಾಡಿರುವ ಸಾರ್ವಜನಿಕರು ಬಿಬಿಎಂಪಿಯನ್ನು ದೂರಿದ್ದಾರೆ. ಬಿಬಿಎಂಪಿ ವಿರುದ್ಧ ಟೀಕಾಪ್ರಹಾರ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇದು ಪೊಲೀಸರು ಮಾಡುವ ಕೆಲಸವನ್ನು ಬಿಬಿಎಂಪಿಯ ಜವಾಬ್ದಾರಿ. ಮಳೆಗಾಲದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ, ವಾಟರ್ಲಾಗಿಂಗ್ ಆದಗದಂತೆ ನೋಡಿಕೊಳ್ಳಬೇಕು. ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲವಾದಾಗ ಇಂತಹ ಸನ್ನಿವೇಶಗಳು ಜರುಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.
|
ಬರಿ ಕೈಯಿಂದ ಸಂಚಾರಿ ಪೊಲೀಸರು ಒಳಚರಂಡಿ ಸ್ವಚ್ಛ
ಸಂಚಾರ ನಿರ್ವಹಿಸುವ ಪೊಲೀಸರು ಬರಿ ಕೈಯಿಂದ ವಾಟರ್ಲಾಗಿಂಗ್ ಸ್ವಚ್ಚಗೊಳಿಸುತ್ತಾರೆ ಎಂದರೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಾಚಿಕೆ ಆಗಬೇಕು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ. ಸೂಕ್ತ ಸಲಕರಣೆಗಳ ಮೂಲಕ ಒಂಚರಂಡಿ, ತ್ಯಾಜ್ಯವನ್ನು ಶುಚಿಗೊಳಿಸಬೇಕು. ಆದರೆ ಅನಿವಾರ್ಯ ಕಾರಣದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೊಲೀಸರೆ ಬಿಬಿಎಂಪಿಯ ಜವಾಬ್ದಾರಿ ನಿಭಾಯಿಸಿದ್ದಾರೆ. ಕೆಲವರು ಈ ಭಾಗದ ಬಿಬಿಎಂಪಿ ಅಧಿಕಾರಿ ನಂಬರ್ ಕೊಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಎಕೋ ವರ್ಲ್ಡ್ ರಸ್ತೆಯಲ್ಲಿ ಟ್ರಾಫಿಕ್
ಎಕೋ ವರ್ಲ್ಡ್ ಪ್ರದೇಶದಲ್ಲಿ ಮುಖ್ಯ ರಸ್ತೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ನೀರು ನಿಂತುಕೊಂಡಿತ್ತು. ಇದರಿಂದ ಗಂಟೆಗಟ್ಟಲೇ ಸಂಚಾರ ಸಮಸ್ಯೆ ಉದ್ಬವವಾಗಿತ್ತು. ಇದನ್ನು ಕಂಡು ನಮ್ಮ ಅಧಿಕಾರಿ ನಾಗಮಣಿ ಮತ್ತು ಸಿಬ್ಬಂದಿ ಭೀಮಶಿ ಎಕೋ ವರ್ಲ್ಡ್ ಬಳಿಯ ನೀರಿನ ಲಾಗಿಂಗ್ ಅನ್ನು ತೆರವುಗೊಳಿಸುತ್ತಿದ್ದಾರೆ ಎಂದು ಎಚ್ಎಎಲ್ ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣೆ ಟ್ವಿಟ್ಟರ್ನಲ್ಲಿ ಬರೆದುಕೊಳ್ಳಲಾಗಿದೆ.

ಬೆಂಗಳೂರಿನ ಹಲವೆಡೆ ರಸ್ತೆ ಜಲಾವೃತ
ಈ ಸಮಸ್ಯೆ ಕೇವಲ ಎಕೋ ವರ್ಲ್ಡ್ ಪ್ರದೇಶದಲ್ಲಿ ಮಾತ್ರವಲ್ಲದೇ ಮಳೆಗಾದಲ್ಲಿ ಬೆಂಗಳೂರಿನ ಅನೇಕ ಕಡೆ ಹೀಗೆ ಆಗುತ್ತದೆ. ಈ ಹಿಂದೆ ಹೆಬ್ಬಾಳ ಠಾಣೆಯ ಕೋಬ್ರಾ ಸಿಬ್ಬಂದಿ ಮುಖ್ಯ ರಸ್ತೆ ಹಾಗೂ ಹೆಬ್ಬಾಳ ಮೇಲ್ಸೇತುವೆ ಮೇಲಿನ ವಾಟರ್ಲಾಗಿಂಗ್ ಅನ್ನು ತೆರವುಗೊಳಿಸಿದ್ದರು. ಇನ್ನು ಅದೇ ರೀತಿ ಚಿಕ್ಕಜಾಲ, ಯಲಹಂಕ, ದೇವನಹಳ್ಳಿ ಸಂಚಾರ ವಿಭಾಗದ ಪೊಲೀಸರು ಮಳೆ ಬಂದಾಗ ಮಳೆ ನೀರು ರಸ್ತೆಗಳ ಮೇಲೆ ನಿಲ್ಲದಂತೆ ವಾಟರ್ಲಾಗಿಂಗ್ ಸ್ವಚ್ಛಗೊಳಿಸಿದ್ದಾರೆ. ಆ ಬಗೆಗಿನ ವಿಡಿಯೋಗಳು ಆಯಾ ಸಂಚಾರ ವಿಭಾಗದ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಲಭ್ಯವಿದೆ.

ಬೇರೆ ಇಲಾಖೆ ಕೆಲಸ ನಿರ್ವಹಿಸಿದ ಬಿಟಿಪಿ
ಈ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಕೆಲವರು ಬೆಂಗಳೂರು ನಗರ ಸಂಚಾರ ಪೊಲೀಸರು (ಬಿಟಿಪಿ) ಬೇರೆಯ ಇಲಾಖೆ/ವಿಭಾಗದವರ ಕೆಲಸ ಮಾಡುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. ಬಿಬಿಎಂಪಿಯನ್ನು ವಿಸರ್ಜಿಸಿ ಎಲ್ಲ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಭಾರಿ ಮಳೆಯಿಂದಾಗಿ ನಗರದಲ್ಲಿ ಸಮಸ್ಯೆ ಉಂಟಾಗುತ್ತಿರುವುದಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಮಳೆ ನೀರಿನ ಹರಿವು ತಡೆಗಟ್ಟುವ ಕಟ್ಟಡ, ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಈ ರೀತಿಯ ಹತ್ತು ಅಡಚಣೆಗಳನ್ನು ಗುರುತಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಮಳೆ ಹಾನಿ ಪ್ರದೇಶಗಳು, ರಸ್ತೆ ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಸ್ಥಳಿಯರ ಅಹವಾಲು ಸ್ವೀಕರಿಸಿ, ಸ್ಥಳಿಯ ಜನಪ್ರತಿನಿಧಿಗಳ ಜತೆ ಸಭೆ ಮಾಡಿದ್ದಾರೆ. ನಂತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಕೆರೆ ಒತ್ತುವರಿ, ರಸ್ತೆ ಮೇಲಿನ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಅಲ್ಲದೇ ಚರಂಡಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ 1,500 ಕೋಟಿ ರೂ.ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿಯನ್ನು ತಕ್ಷಣವೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications