Towing in Bengaluru : ಬೆಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆ ಪುನಃ ಜಾರಿ ಇಲ್ಲ- ಗೃಹ ಸಚಿವ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 17: ಬೆಂಗಳೂರು ನಗರದಲ್ಲಿ ಸ್ಥಗಿತ ಗೊಳಿಸಲಾಗಿರವ ಟೋಯಿಂಗ್ ವ್ಯವಸ್ಥೆಯನ್ನು ಪುನಃ ಜಾರಿ ಗೊಳಿಸುವ ಯಾವುದೇ ಪ್ರಸ್ತಾವನೆ, ಸದ್ಯಕ್ಕೆ, ಸರಕಾರದ ಮುಂದಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಚಿವರು, ನಗರದಲ್ಲಿ ಸಾರ್ವಜನಿಕ ಸ್ನೇಹಿ ಮತ್ತು ಸುಗಮ ವಾಹನ ಪಾರ್ಕಿಂಗ್ ವ್ಯವಸ್ಥೆ, ಜಾರಿಗೊಳಿಸುವ ಬಗ್ಗೆ, ವಿಸ್ತೃತವಾದ ಚರ್ಚೆ ಹಾಗೂ ತಜ್ಞರ ಸಲಹೆ ಪಡೆದು, ತೀರ್ಮಾನ ಕೈಗೊಳ್ಳಲಾಗುವುದು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಚರ್ಚೆ ನಡೆಸಿದ್ದು, ಟೋಯಿಂಗ್ ಬಗ್ಗೆ ಯಾವುದೇ ಅಂತಿಮ ತೀರ್ಮಾನ ವಾಗಿಲ್ಲ, ಸಾರ್ವಜನಿಕರಿಂದ, ಟೋಯಿಂಗ್ ವ್ಯವಸ್ಥೆ ಬಗ್ಗೆ ಇದ್ದ ಜನಾಕ್ರೋಶ ಹಾಗೂ ಕಿರುಕುಳಗಳ ಬಗ್ಗೆ ಬಂದ ದೂರುಗಳ ಇರುವ ಹಿನ್ನೆಲೆಯಲ್ಲಿ, ಸ್ಥಗಿತಗೊಳಿ ಸಲಾಗಿತ್ತು ಎಂದು ನೆನಪಿಸಿದ ಸಚಿವರು, ಹಳೆಯ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸಲಾಗುವುದಿಲ್ಲ ಎಂದು, ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದರು
ಹೈಕೋರ್ಟ್ ಟೋಯಿಂಗ್ ಬಗ್ಗೆ ಪರಿಶೀಲನೆ ಕಾಲಾವಕಾಶ ನೀಡಿದ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಟೋಯಿಂಗ್ ಕುರಿತು ಸೆ. 16ರಂದು ಪ್ರತಿಕ್ರಿಯಿಸಿದ್ದರು. ಅವರು "ಬೆಂಗಳೂರಿನಂಥ ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ. ರಸ್ತೆ ಸಂಚಾರಕ್ಕೆ ಅಡ್ಡಲಾಗಿ ನಿಲ್ಲಿಸುವ ವಾಹನಗಳನ್ನ ಟೋ ಮಾಡುವ ಅವಶ್ಯಕತೆ ಇದೆ. ಆದರೆ ಈ ನಿಯಮದಲ್ಲಿ ಕೆಲವು ಲೋಪದೋಷಗಳು ಹಾಗೂ ದೂರುಗಳು ಕೂಡ ಕೇಳಿ ಬಂದಿದೆ. ಸದ್ಯ ಟೋಯಿಂಗ್ ನ ಯಾವ ರೀತಿಯಲ್ಲಿ ಯಾವ ನಿಯಮಗಳ ಅಡಿಯಲ್ಲಿ ಮಾಡಬೇಕು ಅನ್ನೋದನ್ನ ಇಲಾಖೆ ನಿರ್ಧಾರ ಮಾಡುತ್ತದೆ. ಪೊಲೀಸ್ ಇಲಾಖೆಗೆ ಯಾವುದೇ ರೀತಿಯಾಗಿ ದೂರು ಬರದೆ ರೀತಿಯಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ" ಎಂದು ಪ್ರತಾಪ್ ರೆಡ್ಡಿ ಹೇಳಿದ್ದರು.

ಹೈಕೋರ್ಟ್ ಏನು ಹೇಳಿತ್ತು?
ನಗರದಲ್ಲಿ ವಾಹನ ಟೊಯಿಂಗ್ ಕಾರ್ಯಚರಣೆಯನ್ನು ಮುಂದುವರೆಸಲು ಅನುಮತಿ ಕೋರಿ ಕರ್ನಾಟಕ ಟೊಯಿಂಗ್ ವಾಹನ ಮಾಲೀಕರು ಮತ್ತು ಕಾರ್ಮಿಕ ಕ್ಷೇಮಾಭಿವೃದ್ದಿ ಸಂಘ ಸಲ್ಲಿಸಿರುವ ಮನವಿ ಪತ್ರವನ್ನು ಆರು ವಾರಗಳಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನವನ್ನು ನೀಡಿದೆ. ಟೊಯಿಂಗ್ ಕಾರ್ಯಾಚರಣೆಯನ್ನು ಮುಂದುವರೆಸಲು ಅನುಮತಿಯನ್ನು ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಸಂಘ ಸಲ್ಲಿಸಿದ್ದ ತಕರಾರು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಈ ಸೂಚನೆಯನ್ನು ನೀಡಿತ್ತು.












Click it and Unblock the Notifications