ಟೂರ್ ಆಫ್ ನೀಲಗಿರೀಸ್ : ಡಿ.9ರಿಂದ ಆರಂಭ, 110 ಸೈಕ್ಲಿಸ್ಟ್ ಸ್ಪರ್ಧೆ
ಬೆಂಗಳೂರು, ನವೆಂಬರ್ 02, 2018: ರೈಡ್ ಎ ಸೈಕಲ್ ಪ್ರತಿಷ್ಠಾನದ(ಆರ್ಎಸಿ-ಎಫ್) ವತಿಯಿಂದ ನಡೆಯುವ ವರ್ಷದ ಪ್ರಮುಖ ಕಾರ್ಯಕ್ರಮ 11ನೇ ಆವೃತ್ತಿಯ ಟೂರ್ ಆಫ್ ನೀಲಗಿರೀಸ್ನಲ್ಲಿ (ಟಿಎಫ್ಎನ್), ಈ ಬಾರಿ ಸೈಕ್ಲಿಸ್ಟ್ ಗಳು 950ಕಿಲೋ ಮೀಟರ್ ಗೂ ಅಧಿಕ ದೂರವನ್ನು ಪೆಡಲ್ ಮಾಡಲಿದ್ದಾರೆ.
ಮೂರು ರಾಜ್ಯಗಳಾದ ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್ನಲ್ಲಿ ಈ ಪ್ರಯಾಣ ಸಾಗಲಿದೆ.
ವಿಶ್ವದ 110 ಸೈಕ್ಲಿಸ್ಟ್ ಗಳು 2018ರ ಟೂರ್ ಆಫ್ ನಿಲಗಿರೀಸ್ನ ಭವ್ಯ ಪ್ರಯಾಣದಲ್ಲಿ ಇರಲಿದ್ದಾರೆ. ಇದರಲ್ಲಿ 13 ದೇಶಗಳ 29 ಅಂತಾರಾಷ್ಟ್ರೀಯ ರೈಡರ್ ಗಳು (23 ಪುರುಷ ಹಾಗೂ 6 ಮಹಿಳೆಯರು) ಹಾಗೂ 17 ಮಹಿಳಾ ರೈಡರ್ ಗಳು ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿ ಆರಂಭವಾಗಲಿರುವ ರೇಸ್ನಲ್ಲಿ ಸೈಕ್ಲಿಸ್ಟ್ ಗಳು ಹಾಸನ, ಕುಶಾಲನಗರ, ಸುಲ್ತಾನ್ ಬತೇರಿ, ಉದಕಮಂಡಲ (ಊಟಿ), ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುವುದರೊಂದಿಗೆ ಭವ್ಯ ಪ್ರಯಾಣ ಕೊನೆಗೊಳ್ಳಲಿದೆ.
ಟಿಎಫ್ಎನ್ನ ನಾಲ್ಕನೇ ದಿನದಂದು ಸುಲ್ತಾನ್ ಬತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್ಗಳು, ಕಠಿಣವಾದ ಕಲ್ಹಟ್ಟಿ ಘಾಟ್ ಏರಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್ ಆರೋಹಣಗಳಲ್ಲಿ ಒಂದಾಗಿದೆ.
ಎಂಟು ದಿನಗಳ ಸೈಕ್ಲಿಂಗ್ ಪ್ರಯಾಣ
ಎಂಟು ದಿನಗಳ ಸೈಕ್ಲಿಂಗ್ ಪ್ರಯಾಣದಲ್ಲಿ (ಡಿಸೆಂಬರ್ 9 ರಿಂದ 16, 2018) ಸೈಕ್ಲಿಸ್ಟ್ ಗಳು ಹಲವಾರು ನೈಸರ್ಗಿಕ ವಿಸ್ಮಯಗಳನ್ನು ನೋಡಲಿದ್ದಾರೆ. ಕಡಿದಾದ ಕಣಿವೆಗಳು, ಕಾಫಿ-ಟೀ ಸಸ್ಯರಾಶಿಗಳು, ಮೂರು ವನ್ಯಜೀವಿ ಅಭಯಾರಣ್ಯಗಳು ಹಾಗೂ ಪರ್ವತಗಳನ್ನು ದಾಟಿಕೊಂಡು ಹೋಗಲಿದ್ದಾರೆ. ಅದರೊಂದಿಗೆ ಪ್ರತಿ ವಲಯದ ಸ್ಥಳೀಯ ಆಹಾರಗಳ ರುಚಿನೋಡುವ ಅವಕಾಶವೂ ಸಿಗಲಿದೆ. ಸೈಕ್ಲಿಸ್ಟ್ ಗಳು ತಾವು ಸಾಗುವ ಕಡಿದಾದ ಹಾದಿಗಳಲ್ಲಿ, ನಿಲಗೀರೀಸ್ ಬಯೋಸ್ಪೇರ್ ನ ಸೌಂದರ್ಯವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಅವಕಾಶವೂ ಇರಲಿದೆ.
ಸೈಕಲ್ ನ ಮೂಲಕ ಪ್ರಕೃತಿಯ ಅನುಭವ ಪಡೆಯುವ ಅಪೂರ್ವ ಅವಕಾಶವೇ ಟೂರ್ ಆಫ್ ನಿಲಗಿರೀಸ್, 2018ರ ಟಿಎಫ್ ಎನ್ ಕೂಡ ಇದರಿಂದ ಭಿನ್ನವಾಗಿಲ್ಲ ಎಂದು ಹೇಳಿದ ಆರ್ಎಸಿ-ಎಫ್ ನ ಸಹ ಸಂಸ್ಥಾಪಕ ದೀಪಕ್ ಮಾಜಿಪಾಟೀಲ್, ಪ್ರತಿ ಆವೃತ್ತಿಯ ಟಿಎಫ್ ಎನ್ ಕೂಡ ರೈಡರ್ಗಳ ನೆನಪಿನಲ್ಲಿ ಉಳಿಯುತ್ತದೆ. ಮತ್ತೊಮ್ಮೆ ನಿಸರ್ಗದ ಅನುಭವ ಪಡೆಯುವ ಸಲುವಾಗಿ ಮರಳಿ ಬರುತ್ತಾರೆ ಎಂದು ಹೇಳಿದರು. ಭಾರತೀಯ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ, ಹೆಚ್ಚೆಚ್ಚು ವಿದೇಶಿ ಸೈಕ್ಲಿಸ್ಟ್ ಈ ಭವ್ಯ ಪ್ರಯಾಣದ ಭಾಗವಾಗುವ ಸಲುವಾಗಿಯೇ ಭಾರತಕ್ಕೆ ಆಗಮಿಸಲು ಇಚ್ಛಿಸುತ್ತಾರೆ.
17 ಮಹಿಳಾ ಸೈಕ್ಲಿಸ್ಟ್ ಗಳು ಸ್ಪರ್ಧೆ
ಡೆನ್ಮಾರ್ಕ್ ನಿಂದ 7 ಸೈಕ್ಲಿಸ್ಟ್ ಗಳು, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಂಗ್ಲೆಂಡ್ನಿಂದ ತಲಾ ಮೂರು, ಬೆಲ್ಜಿಯಂ ಮತ್ತು ಕೆನಡಾದಿಂದ ತಲಾ 2, ಆಸ್ಟ್ರಿಯಾ, ಗ್ರೀಸ್, ಮಲೇಷ್ಯಾ, ಫಿಲಿಫೈನ್ಸ್ ಮತ್ತು ಪೊಲೇಂಡ್ ನಿಂದ ತಲಾ ಒಬ್ಬ ಸೈಕ್ಲಿಸ್ಟ್ಗಳು ಈ ಬಾರಿ ಕಣದಲ್ಲಿದ್ದಾರೆ. ಹಾಲಿ ವರ್ಷ ದಾಖಲೆಯ ಅಂತಾರಾಷ್ಟ್ರೀಯ ರೈಡರ್ ಗಳನ್ನು ಟಿಎಫ್ ಎನ್ ಆಕರ್ಷಿಸುವುದರೊಂದಿಗೆ, ದೇಶ ಹಾಗೂ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್ ಗಳು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಮಾನ್ಯ ರೀತಿಯಲ್ಲಿ ಆರಂಭ ಪಡೆದುಕೊಂಡಿದ್ದ ಟಿಎಫ್ ಎನ್, ಇಂದು ದೀರ್ಘ ಹಾದಿ ಕ್ರಮಿಸಿದ್ದು ಭಾರತದ ಅತಿದೊಡ್ಡ ಹಾಗೂ ಪ್ರೀತಿಪಾತ್ರ ಬೈಕ್ ಟೂರ್ ಎನಿಸಿಕೊಂಡಿದೆ. ಆ ಮೂಲಕ ಸೈಕಿಂಗ್ ಭೂಪಟದಲ್ಲಿ ಭಾರತದ ಹೆಸರೂ ಕಾಣಿಸಿಕೊಳ್ಳುವಂತೆ ಮಾಡಿದ ಶ್ರೇಯ ಪಡೆದುಕೊಂಡಿದೆ. ಸಾಹಸದ ಅನುಭವ ನೀಡುವ ಸೈಕ್ಲಿಂಗ್ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉತ್ಸಾಹಿಗಳ ಪಾಲಿಗೆ ಟಿಎಫ್ಎನ್ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಆಯ್ಕೆ ಎನಿಸಿಕೊಂಡಿದೆ.
ಒಲಿಂಪಿಕ್ ಸೈಕ್ಲಿಂಗ್ ನಲ್ಲಿ ಚಿನ್ನದ ಪದಕ ವಿಜೇತ
ಪ್ರವಾಸದಲ್ಲಿ ಕಿರಣ್ ಕುಮಾರ್ ರಾಜು, ಪ್ರಸಕ್ತ ಇಂಡಿಯಾ ಎಚಿಟಿಬಿ ಚಾಂಪಿಯನ್ ಮತ್ತು ನವೀನ್ ಜಾನ್, ಪ್ರಸಕ್ತ ಇಂಡಿಯಾ ರೋಡ್ ಚಾಂಪಿಯನ್ ಸೇರಿದಂತೆ ಪ್ರಸಿದ್ಧ ಸೈಕ್ಲಿಸ್ಟ್ಗಳು ಟಿಎಫ್ಎನ್ 2018ರಲ್ಲಿ ಪೆಡಲ್ ಮಾಡಲಿದ್ದಾರೆ. ಅಲೆಕ್ಸಿಗ್ರೇವಲ್ - 1984ರ ಒಲಿಂಪಿಕ್ ಸೈಕ್ಲಿಂಗ್ನಲ್ಲಿ ಚಿನ್ನದ ಪದಕ ವಿಜೇತ, ಟಿಎಫ್ಎನ್ 2017ರಲ್ಲಿ ಪೆಡಲ್ ಮಾಡಿದ್ದ ಅಲೆಕ್ಸಿಗ್ರೇವಲ್ ಈ ಆವೃತ್ತಿಯಲ್ಲಿ ಸ್ವಯಂ ಸೇವಕರಾಗಿದ್ದು! ದೊಡ್ಡ ಗುರಿಯೊಂದಿಗೆ ಭಾಗವಹಿಸುತ್ತಿರುವ ಯುವ ಪ್ರತಿಭಾನ್ವಿತ ಸವಾರರಿಗೆ ಸಲಹೆಗಾರರಾಗಲಿದ್ದಾರೆ.
ಟಿಎಫ್ಎನ್ ನ ಇನ್ನೊಂದು ಅಂಶವೇನೆಂದರೆ, ಕೆಲ ರೈಡರ್ಗಳು ಸಮಾಜಕ್ಕೆ ಈ ಮೂಲಕ ಏನಾದರೂ ಕೊಡುಗೆ ನೀಡುವ ಸಲುವಾಗಿ ದತ್ತಿ ರೈಡರ್ಗಳಾಗಿ ಭಾಗವಹಿಸಲಿದ್ದಾರೆ. ಹಾಲಿ ವರ್ಷದ ದತ್ತಿ ರೈಡರ್ಗಳು, ಕೆನೆತ್ ಆಂಡರ್ಸನ್ ನೇಚರ್ ಸೊಸೈಟಿ, ಸಿತಾ ಭತೆಜಾ ಸ್ಪೆಷಾಲಿಟಿ ಆಸ್ಪತ್ರೆ, ಇಕ್ಶಾ ಫೌಂಡೇಷನ್ ಮತ್ತು ವಿದ್ಯೋದಯ ಸ್ಕೂಲ್ ಪರವಾಗಿ ಪೆಡಲ್ ಮಾಡಲಿದ್ದಾರೆ. ಉಳಿದಂತೆ ಕೆಲವು ಆಯಾ ಸಾಮಾಜಿಕ ಕಾರಣಗಳಿಗಾಗಿ ಭಾಗವಹಿಸಲಿದ್ದಾರೆ.
ಆರ್ಎಸಿ-ಎಫ್ ಒಂದು ಆದಾಯ ರಹಿತ ಸಂಸ್ಥೆ
ಆರ್ಸಿಎ-ಎಫ್ : ಆರ್ಎಸಿ-ಎಫ್ ಒಂದು ಆದಾಯ ರಹಿತ ಸಂಸ್ಥೆಯಾಗಿದ್ದು, ಪ್ರಯಾಣಕ್ಕೆ ಸೈಕ್ಲಿಂಗ್ ಮಾಡುವುದನ್ನು ಪ್ರಚಾರ ಮಾಡುವ ಕಾರ್ಯದಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಪ್ರತಿದಿನದ ಪ್ರಯಾಣಕ್ಕೆ ಜನರು ಬೈಸಿಕಲ್ಅನ್ನು ಬಳಸಬೇಕು ಎನ್ನುವ ಬೈಸಿಕಲ್ ಫ್ರೀಡಮ್ ರೆವಲ್ಯೂಷನ್ನೊಂದಿಗೆ ಸಾಮಾಜಿಕ ಬದಲಾವಣೆಯ ಏಜೆಂಟ್ ಆಗುವ ಅಭಿಲಾಷೆ ಸಂಸ್ಥೆಯದ್ದು. ಸೈಕ್ಲಿಂಗ್ ಸಂಸ್ಕೃತಿಯನ್ನು ಮರಳಿ ತರುವುದು ಹಾಗೂ ಸೈಕಲ್ ಮತ್ತು ಅದರ ಉಪಯೋಗದ ಕುರಿತಾಗಿ ಜಾಗೃತಿ ಮೂಡಿಸುವುದು ಆರ್ಎಸಿ-ಎಫ್ನ ಪ್ರಮುಖ ಕಾರ್ಯ.
ಸೈಕ್ಲಿಂಗ್ ಸಂಸ್ಕೃತಿಯನ್ನು ಮರಳಿ ತರಬೇಕು ಎನ್ನುವ ಏಕೈಕ ಕಾರಣಕ್ಕಾಗಿ ಆರ್ಎಸಿ-ಎಫ್, ಸೈಕಲ್ ಉತ್ಪಾದಕರು, ಸೈಕ್ಲಿಂಗ್ ಸಮುದಾಯ ಹಾಗೂ ಸರ್ಕಾರದ ಸಂಸ್ಥೆಗಳ ಜತೆ ಪಾಲುದಾರಿಕೆಯನ್ನು ಹೊಂದಿದೆ. ಫೌಂಡೇಷನ್ ಹಲವು ವರ್ಷಗಳಿಂದ ಈ ಕುರಿತಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಟೂರ್ ಆಫ್ ನೀಲಗಿರೀಸ್(ಟಿಎಫ್ಎನ್), ನಮ್ಮ ಸೈಕಲ್, ಸೈಕಲ್ರೀಸೈಕಲ್ನಂಥ ಕಾರ್ಯಕ್ರಮಗಳು ಹಾಗೂ ಅದರೊಂದಿಗೆ ಯಶಸ್ಸಿಗಾಗಿ ದತ್ತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.