ವಿಜಯಕ್ಕೆ ಐದು ಮೆಟ್ಟಿಲು : ಮುನಿರತ್ನ ಗೆಲುವು ಅಂದೇ ನಿರ್ಧಾರವಾಗಿತ್ತು
ಬೆಂಗಳೂರು, ಮೇ 31: 'ರಾಜರಾಜೇಶ್ವರಿ ನಗರದಲ್ಲಿ ಎನ್ ಮುನಿರತ್ನ ನಾಯ್ಡು ಅವರ ಗೆಲುವು ಅಂದೇ ನಿರ್ಧಾರವಾಗಿತ್ತು. ಇಂದು ಅಧಿಕೃತ ಘೋಷಣೆಯಾಗಿದೆಯಷ್ಟೇ' ಇದು ಆ ಕ್ಷೇತ್ರ ಕಾರ್ಯಕರ್ತರೊಬ್ಬರ ಪಿಸು ಮಾತು. ಭಾರಿ ಕುತೂಹಲ ಕೆರಳಿಸಿದ್ದ ಆರ್ ಆರ್ ನಗರದ ಚುನಾವಣೆ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟವಾಗಿದೆ.
ಹಾಲಿ ಶಾಸಕ ಮುನಿರತ್ನ ಅವರು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ತುಳಸಿ ಮುನಿರಾಜು ಗೌಡ ಅವರನ್ನು ಸೋಲಿಸಿದ್ದಾರೆ. ಜೆಡಿಎಸ್ ನ ಎನ್ ರಾಮಚಂದ್ರ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!
ಮೇ 6ರಂದು ಆರ್.ಆರ್.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 95 ಲಕ್ಷ ರೂ. ಹಣ ಟ್ರಕ್ನಲ್ಲಿ ಪತ್ತೆಯಾಗಿತ್ತು. ಜಾಲಹಳ್ಳಿ ಸಮೀಪದ ಎಸ್ಎಲ್ವಿ ಅಪಾರ್ಟ್ಮೆಂಟ್ನಲ್ಲಿ 9,746 ವೋಟರ್ ಐಡಿಗಳು ಪತ್ತೆಯಾಗಿದ್ದವು ಇದರಿಂದಾಗಿ ಚುನಾವಣೆಯನ್ನು ಮೇ 28ಕ್ಕೆ ಆಯೋಗ ಮುಂದೂಡಿತ್ತು. ಇದಾದ ಬಳಿಕ ಮುನಿರತ್ನ ಅವರು ಗೆಲ್ಲುವುದು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದರು.
'ಇದು ಮುನಿರತ್ನ ಗೆಲುವಲ್ಲ, ಸಿದ್ದರಾಮಯ್ಯ ಸರ್ಕಾರದ ಗೆಲುವು'
ಬಿಜೆಪಿ ಅಧಿಕಾರಕ್ಕೆ ಸರ್ಕಾರ ಪತನವಾಗಿ ಹೈಡ್ರಾಮದ ಬಳಿಕ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಸ್ಥಾಪನೆಯಾಗಿದ್ದು, ಬಹುಮತ ಸಾಬೀತುಪಡಿಸಿದ್ದು ಆಗಿದೆ. ಆದರೆ, ಚುನಾವಣೆ ಕಣದಲ್ಲಿ ಮೈತ್ರಿ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಹೇಳಿದರು, ಇನ್ನೊಂದೆಡೆ, ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಮುನಿರತ್ನ ಅವರು ಪಟ್ಟು ಹಿಡಿದು ನಿಂತರು, ಮುಂದಾಗಿದ್ದು ಇತಿಹಾಸ.
ಡಿಕೆ ಸೋದರ ತಂತ್ರ ಫಲಿಸಿದೆ
2013ರ ಚುನಾವಣೆಯಲ್ಲಿಯೂ ಮುನಿರತ್ನ ಅವರು 71,064 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತರಾದ ಅವರು ಕ್ಷೇತ್ರಕ್ಕೆ ಅನುದಾನ ತಂದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದರಿಂದಾಗಿ ಈ ಬಾರಿ ಚುನಾವಣೆಯಲ್ಲಿಯೂ ಅವರು ಗೆದ್ದಿದ್ದಾರೆ.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರು ಚುನಾವಣೆಯ ಹೊಣೆ ಹೊತ್ತುಕೊಂಡಿದ್ದರು. ಅವರು ರೂಪಿಸಿದ ತಂತ್ರಗಳು ಸಹ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿವೆ. ಆರೋಪಗಳು ಕೇಳಿ ಬಂದಾಗ, ಮೈತ್ರಿ ಸರ್ಕಾರವಾದಾಗ ಗೊಂದಲದಲ್ಲಿದ್ದ ಕಾರ್ಯಕರ್ತರಿಗೆ ಡಿಕೆ ಸೋದರರು ಬಲ ತುಂಬಿದರು. ಇದರಿಂದಾಗಿ ಕಳೆದ ಒಂದು ವಾರದಲ್ಲಿ ನಡೆದ ಪ್ರಚಾರ, ಮತದಾರರಿಗೆ ಸಿಕ್ಕ ಆಶ್ವಾಸನೆ ವರ್ಕ್ ಔಟ್ ಆಗಿದೆ.
ಕಾಂಗ್ರೆಸ್ ಪ್ರಭುತ್ವ ಕ್ಷೇತ್ರ -2013ರ ಫಲಿತಾಂಶ
2013ರಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ 24 ಮಂದಿ ನಾಮಪತ್ರ ಸಲ್ಲಿಸಿದ್ದರು, ಈ ಪೈಕಿ 2 ನಾಮಪತ್ರ ತಿರಸ್ಕೃತಗೊಂಡಿತ್ತು. 3 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದರು. 19 ಮಂದಿ ಸ್ಪರ್ಧಿಗಳ ಪೈಕಿ 16 ಮಂದಿ ಠೇವಣಿ ಕಳೆದುಕೊಂಡಿದ್ದರು.
ಶೇ 56.82ರಷ್ಟು ಮತದಾನವಾಗಿದ್ದು, ಮುನಿರತ್ನ ಅವರು 71064 ಮತಗಳನ್ನು ಗಳಿಸಿದ್ದರು, ಜೆಡಿಎಸ್ ನ ಕೆಎಲ್ ಆರ್ ತಿಮ್ಮನಂಜಯ್ಯ ಅವರು 52251 ಮತಗಳನ್ನು ಗಳಿಸಿ 18813 ಮತಗಳ (ಶೇ9.9) ಅಂತರದಿಂದ ಸೋಲು ಕಂಡಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.
2008ರಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಬೇರ್ಪಟ್ಟ ಆರ್ ಆರ್ ನಗರದಲ್ಲಿ ಕಾಂಗ್ರೆಸ್ಸಿನ ಪಿಎನ್ ಕೃಷ್ಣಮೂರ್ತಿ(40595 ಮತಗಳು) ಅವರು ಬಿಜೆಪಿಯ ಎಂ ಶ್ರೀನಿವಾಸ (60187), ಜಯಭೇರಿ ಬಾರಿಸಿದ್ದರು.
ಅಭಿವೃದ್ಧಿ ಕಂಡಿರುವ ಕ್ಷೇತ್ರ, ಸಿದ್ದು ಸರ್ಕಾರ ಅನುದಾನ
ಕ್ಷೇತ್ರದಲ್ಲಿ ಒಮ್ಮೆ ಸುತ್ತಾಡಿದರೆ ಉತ್ತಮ ರಸ್ತೆ, ಉದ್ಯಾನವನ ಕಣ್ಣಿಗೆ ಕಾಣಿಸುತ್ತದೆ. ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಹೇಳುವಂತಿಲ್ಲ. ಕೊಳಗೇರಿಗಳೂ ಕ್ಷೇತ್ರದಲ್ಲಿವೆ. ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು ಇನ್ನೂ ಸುಧಾರಿಸಬೇಕಿದೆ. ಆದರೆ, ಅಭಿವೃದ್ಧಿ ಕಾಮಗಾರಿ ಜಾರಿಯಲ್ಲಿರುವುದು ಮತದಾರರ ಕಣ್ಣಿಗೆ ಬಿದ್ದಿದೆ.
ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತನಕ ಹರಡಿಕೊಂಡಿರುವ ಕ್ಷೇತ್ರದಲ್ಲಿ ನೈಸ್ ರಸ್ತೆ, ವಿಶ್ವದರ್ಜೆ ಆಸ್ಪತ್ರೆ, ಮಾಲ್ಗಳಿವೆ. ರಿಯಲ್ ಎಸ್ಟೇಟ್ ಪ್ರಭಾವದಿಂದ ಇಲ್ಲಿ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಮತದಾರರ ಪಟ್ಟಿಗೆ ಸೇರಿರುವ ಗೊಂದಲ ಇದ್ದೇ ಇದೆ.
ಟಾರ್ಗೆಟ್ ಕಾರ್ಪೊರೇಟರ್ಸ್
9 ವಾರ್ಡ್ಗಳನ್ನು ಹೊಂದಿರುವ ವಿಧಾನಭಾ ಕ್ಷೇತ್ರ ರಾಜರಾಜೇಶ್ವರಿ ನಗರ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ಸಿನ ಮುನಿರತ್ನ. ಚಿತ್ರ ನಿರ್ಮಾಪಕರೂ ಆಗಿರುವ ಇವರು 2013ರ ಚುನಾವಣೆಯಲ್ಲಿ 71,064 ಮತಗಳನ್ನು ಪಡೆದು ಜಯಗಳಿಸಿದ್ದರು. ಕ್ಷೇತ್ರದಲ್ಲಿ ಜನಪ್ರಿಯತೆ ಜತೆಗೆ ವಿವಾದವನ್ನು ಮೈಮೇಲೆ ಎಳೆದುಕೊಂಡವರು.
ಮುಖ್ಯವಾಗಿ ಮಹಿಳಾ ಕಾರ್ಪೊರೇಟರ್ ಗಳ ವಿರೋಧ ಕಟ್ಟಿ ಕೊಂಡರು. ಆದರೆ, ಗುತ್ತಿಗೆದಾರರಿಗೆ ಬಲ ನೀಡಿದ್ದರಿಂದ ಮತದಾರರನ್ನು ಸೆಳೆಯುವುದು ಸುಲಭವಾಯಿತು.
ಕ್ಷೇತ್ರದ ವ್ಯಾಪ್ತಿಯ ವಾರ್ಡ್ : ಲಕ್ಷ್ಮೀದೇವಿ ನಗರ, ಜಾಲಹಳ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಎಚ್.ಎಂ.ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ.
ಕಾಂಗ್ರೆಸ್- ಜೆಡಿಎಸ್ ಎದುರಾಳಿಯಾದರೂ ಬಿಜೆಪಿಗೆ ಲಾಭವಿಲ್ಲ
ರಾಜರಾಜೇಶ್ವರಿ ನಗರದ ಕ್ಷೇತ್ರದ ಟಿಕೆಟ್ಗೆ ಭಾರೀ ಪೈಪೋಟಿ ನಡೆದಿತ್ತು. ಆರ್.ಅಶೋಕ್ ಅವರ ಕಟ್ಟಾ ಬೆಂಬಲಿಗರಾದ ಬಿಬಿಎಂಪಿ ಮಾಜಿ ಸದಸ್ಯ ಸ್ಥಳೀಯರಾದ ರಾಮಚಂದ್ರಪ್ಪ ಅವರು ಆಕಾಂಕ್ಷಿಯಾಗಿದ್ದರು. ತುಳಸಿ ಮುನಿರಾಜು ಗೌಡ, ಶಿಲ್ಪಾ ಗಣೇಶ್ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಮುನಿರಾಜು ಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಪಿ.ಎಂ.ಮುನಿರಾಜು ಗೌಡ ಅವರು ಬಿಜೆಪಿಯ ರಾಜ್ಯ ಕಾರ್ಯದರ್ಶಿ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ ಅವರ ಆಪ್ತರು. ಇಲ್ಲಿ ಒಂದೆರಡು ದಿನ ಮಾತ್ರ ಬಿಎಸ್ ಯಡಿಯೂರಪ್ಪ ಅವರು ಪ್ರಚಾರಕ್ಕೆ ಆಗಮಿಸಿದ್ದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸಾಧಿಸಿದರೂ ಚುನಾವಣಾ ಕಣದಲ್ಲಿ ಎದುರಾಳಿಗಳಾದಾಗ ಅತ ವಿಭಜನೆ ಮಾಡಿ, ಲಾಭ ಪಡೆಯುವ ಯಾವ ತಂತ್ರವನ್ನು ಬಿಜೆಪಿ ಮಾಡಲಿಲ್ಲ.