4ನೇ ದಿನ: ತೀವ್ರಗೊಂಡ ಟೋಲ್ ಗಲಾಟೆ
ಬೆಂಗಳೂರು, ಮೇ 7 : ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ದೇವನಹಳ್ಳಿ ಟೋಲ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿದ್ದನ್ನು ವಿರೋಧಿಸಿ ನವಯುಗ ಟೋಲ್ ಕಂಪನಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ದಿನೇದಿನೇ ತೀವ್ರಗೊಳ್ಳುತ್ತಿದ್ದು, ವಿರೋಧ ಪಕ್ಷಗಳು, ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಧುಮುಕಿವೆ. ಇಷ್ಟಾದರೂ ಸರಕಾರ ದರ ಇಳಿಸುವ ಮಾತಾಡುತ್ತಿಲ್ಲ.
ಕಳೆದ ಮೂರು ದಿನಗಳಿಂದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಮೇ.7 ಬುಧವಾರದಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನಕಾರರು ಟೋಲ್ ಪ್ಲಾಜಾದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.[ಟೋಲ್ ಹೆಚ್ಚಳ ಯಾರು ಏನಂತಾರೆ? ]
ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಟೋಲ್ ಏರಿಕೆ ಖಂಡಿಸಿ ಪ್ರತಿಭಟನೆಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ ಅವರು ಸರ್ಕಾರ ಶೀಘ್ರವೇ ಮಧ್ಯಸ್ಥಿಕೆ ವಹಿಸಿ ಟೋಲ್ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಟೋಲ್ ದರ ಇಳಿಕೆಯಾಗುವವರೆಗೂ ಜೆಡಿಎಸ್ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದೆ ಎಂದರು.
ವಿಮಾನ ನಿಲ್ದಾಣ ರಸ್ತೆಯ ದೇವನಹಳ್ಳಿ ಸುತ್ತ ಮುತ್ತಲಿನ ಪ್ರದೇಶಗಳಿಗೆ ತೆರಳಲು ಸರ್ವಿಸ್ ರಸ್ತೆಯೇ ಇಲ್ಲ. ನವಯುಗ ಕಂಪೆನಿಯೊಂದಿಗೆ ಸ್ಥಳೀಯ ಆಡಳಿತ ಶಾಮೀಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ವಿಮಾನ ನಿಲ್ದಾಣ ರಸ್ತೆಯ ಟೋಲ್ ದರ ಹೆಚ್ಚಳ]
ಪೊಲೀಸರ ಸರ್ಪಗಾವಲಿನಲ್ಲಿ ಟೋಲ್ ಸಂಗ್ರಹ ಮುಂದುವರೆದಿದೆ. ಇಂದು ಸಹ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಏರ್ ಪೋರ್ಟ್ ಟ್ಯಾಕ್ಸಿ, ಟೂರಿಸ್ಟ್ ವಾಹನಗಳು, ಖಾಸಗಿ ಬಸ್ ಮಾಲೀಕರು, ತರಕಾರಿ ಸಾಗಣೆ ವಾಹನಗಳು, ಲಾರಿ ಮಾಲೀಕ ಸಂಘಟನೆಗಳು ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ಮುಂದುವರೆಸಿವೆ.