ತ್ಯಾಗರಾಜನಗರ ಅಪಾರ್ಟ್ಮೆಂಟ್ ಕುಸಿತ, ಎಫ್ಐಆರ್ ದಾಖಲು
ಬೆಂಗಳೂರು, ನವೆಂಬರ್ 13 : ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಡೆದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದ.
ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಟ್ಟಡದ ಮಾಲೀಕ ಕುಮಾರ್ ಮತ್ತು ಪಕ್ಕದ ಖಾಲಿ ಜಾಗದಲ್ಲಿ ಪಾಯ ತೋಡಿಸಿದ್ದ ಕಾರ್ತಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ದಿನದಿಂದ ಕಾರ್ತಿಕ್ ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ.
ದುರಂತದಲ್ಲಿ ಮೃತಪಟ್ಟ ಕಾರ್ಮಿಕ ಸುಫೇಲ್ ಅವರ ಸ್ನೇಹಿತ ಶಬೀರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಸಾಯಿ ಗ್ರ್ಯಾಂಡ್ ಅಪಾರ್ಟ್ಮೆಂಟ್ ಕಟ್ಟಡ ಕುಸಿದಿದ್ದರಿಂದ ಸುಫೇಲ್ ಮೃತಪಟ್ಟಿದ್ದರು.

ಕುಸಿದು ಬಿದ್ದ ಕಟ್ಟಡದ ಶೇ 90ರಷ್ಟು ಭಾಗವನ್ನು ಒಡೆಯಲಾಗಿದೆ. ಕಟ್ಟಡದ ಅವಶೇಷಗಳನ್ನು ಡಂಪಿಂಗ್ ಯಾರ್ಡ್ಗೆ ಸಾಗಿಸುವ ಕಾರ್ಯ ಬಾಕಿ ಇದೆ. ಕಟ್ಟಡ ಕುಸಿದು ಬಿದ್ದಿದ್ದರಿಂದ ಪಕ್ಕದ ರುದ್ರಾಕ್ಷಿ ಅಪಾರ್ಟ್ಮೆಂಟ್ಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಸಾಯಿ ಗ್ರ್ಯಾಂಡ್ ಅಪಾರ್ಟ್ಮೆಂಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಎಲೆಕ್ಟ್ರಿಕ್ ಮತ್ತು ಸುಣ್ಣ-ಬಣ್ಣ ಬಳಿಯುವ ಕೆಲಸ ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ಅಪಾರ್ಟ್ಮೆಂಟ್ ಕಟ್ಟಡ ಕುಸಿದು ಬಿದ್ದಿದೆ.
ಕುಮಾರ್ ಎಂಬುವವರಿಗೆ ಸೇರಿದ 26*60 ಅಡಿ ಜಾಗದಲ್ಲಿ ನಾಲ್ಕು ಅಂತಸ್ತಿನ ಸಾಯಿ ಗ್ರ್ಯಾಂಡ್ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗುತ್ತಿತ್ತು. ಅಪಾರ್ಟ್ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ಪಾಯ ತೋಡಲಾಗಿತ್ತು. ಇದರಿಂದಾಗಿ ಅಪಾರ್ಟ್ಮೆಂಟ್ ಕಟ್ಟಡ ಕುಸಿದು ಬಿದ್ದಿತ್ತು.












Click it and Unblock the Notifications