ಜಸ್ಟ್ ಡಯಲ್ ಮಾಡಿ ಕಾರಿನೊಂದಿಗೆ ಪರಾರಿಯಾದ ವಂಚಕ
ಬೆಂಗಳೂರು, ಜನವರಿ 4: ಜಸ್ಟ್ ಡಯಲ್ ಮೂಲಕ ಕಾರು ಬುಕ್ ಮಾಡಿ ಕೊನೆಗೆ ಕಾರಿನ ಜೊತೆಯೇ ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ದಾಸನಪುರ ಹನುಮಂತೇಗೌಡಪಾಳ್ಯದ ನಿವಾಸಿ ಅರುಣ್ ಕುಮಾರ್ ಕಾರು ಕಳೆದುಕೊಂಡಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.
ಅರುಣ್ ಕುಮಾರ್ ಟ್ರಾವೆಲ್ಸ್ವೊಂದಕ್ಕೆ ತಮ್ಮ ವಾಹನ ಓಡಿಸಿಕೊಂಡಿದ್ದರು. ಜನವರಿ 1ರಂದು ಬೆಳಗ್ಗೆ 8.45ಕ್ಕೆ ಜಸ್ಟ್ ಡಯಲ್ ಮೂಲಕ ಆರೋಪಿ ಕಡಬಗೆರೆಯಲ್ಲಿರುವ ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಪರ್ಕಿಸಿ ಮೈಸೂರಿಗೆ ಪ್ರವಾಸಕ್ಕೆ ತೆರಳಬೇಕಿದ್ದು, ವಾಹನದ ಅಗತ್ಯವಿದೆ ಎಂದು ಹೇಳಿದ್ದ. ಅದರಂತೆ ಟ್ರಾವೆಲ್ಸ್ನವರು ಅರುಣ್ ಅವರಿಗೆ ಮಾಹಿತಿ ನೀಡಿದ್ದರು. ಅರುಣ್ ಪ್ರಯಾಣಿಕರನ್ನು ಕರೆದೊಯ್ಯಲು ಕಾನಿಷ್ಕ ಹೋಟೆಲ್ ಬಳಿ ತೆರಳಿದ್ದರು.

ಕಾನಿಷ್ಕ ಹೋಟೆಲ್ ಬಳಿ ಕಾರು ಹತ್ತಿದ ಪ್ರಯಾಣಿಕ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ನಡೀರಿ, ಅಲ್ಲಿ ಹೋಟೆಲ್ನಲ್ಲಿ ಪೇಮೆಂಟ್ ಒಂದು ಕಲೆಕ್ಷನ್ ಮಾಡಿಕೊಳ್ಳಬೇಕಿದೆ. ಅಲ್ಲಿಂದ ಮೈಸೂರಿಗೆ ಹೋಗೋಣ ಎಂದು ಚಾಲಕ ಅರುಣ್ಗೆ ಹೇಳಿದ್ದ.
ಮೆಟ್ರೋ ಸ್ಟೇಷನ್ಗೆ ಸಮೀಪದ ಮಿಸ್ ಚಿಫ್ ಹೋಟೆಲ್ ಬಳಿ ಬಂದಾಗ ಪ್ರಯಾಣಿಕ ಕೊಠಡಿ ಸಂಖ್ಯೆ 105ರಲ್ಲಿ ನನ್ನ ಸ್ನೇಹಿತ ಇದ್ದಾನೆ ಆತ 10 ಸಾವಿರ ಹಣ ಕೊಡುತ್ತಾನೆ.
ಅದನ್ನು ತೆಗೆದುಕೊಂಡು ಬಾ ಎಂದು ಚಾಲಕನಿಗೆ ಸೂಚಿಸಿದ್ದ. ಅದರಂತೆ ಅರುಣ್ ಕಾರು ಇಳಿದು ಹೋಗಲು ಮುಂದಾಗಿದ್ದು, ಈ ವೇಳೆ ಪ್ರಯಾಣಿಕ ಚಾಲಕನಿಗೆ ಎಸಿ ಹಾಕಿ ಹೋಗಿ ಎಂದು ಹೇಳಿದ್ದ, ಚಾಲಕ ಕೀ ಹಾಕಿ ಎಸಿ ಆನ್ ಮಾಡಿ ಹೋಟೆಲ್ ಗೆ ಹೋಗಿ ತಪಾಸಣೆ ನಡೆಸಿದಾಗ ವ್ಯಕ್ತಿ ಕೊಠಡಿ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂಬ ವಿಷಯ ತಿಳಿದಿದೆ.
ಬಳಿಕ ಪ್ರಯಾಣಿಕನಿಗೆ ಕರೆ ಮಾಡಿದಾಗ ಇಲ್ಲ ಅಲ್ಲೇ ಕಾಯಿರಿ ಆತ ಬರುತ್ತಾನೆ ಎಂದು ಹೇಳಿದ್ದಾನೆ, ಚಾಲಕ ಹೋಟೆಲ್ ಬಳಿಯೇ ಹದಿನೈದು ನಿಮಿಷ ಕಾದಿದ್ದಾನೆ, ಬಳಿಕ ಚಾಲಕ ಮತ್ತೆ ಪ್ರಯಾಣಿಕನಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದೆ ಹೋಟೆಲ್ ಹೊರಗಡೆ ಬಂದು ನೋಡಿದಾಗ ಕಾರು ಕೂಡ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.











Click it and Unblock the Notifications