Darshan Thoogudeepa: ದರ್ಶನ್ಗೆ ಮಧ್ಯಂತರ ಜಾಮೀನು; ಡಿಕೆ ಶಿವಕುಮಾರ್ ಹೇಳಿದ್ದೇನು?
ನಟ ದರ್ಶನ್ಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ 131 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಬಳಿಕ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬುಧವಾರ ಸಂಜೆಯೇ ಬಿಡುಗಡೆಯಾಗುವ ಸಾಧ್ಯತೆ ಇದೆ. ದರ್ಶನ್ಗೆ ಜಾಮೀನು ಸಿಗುತ್ತಿದ್ದಂತೆ ಸಿನಿಮಾ ರಂಗದ ದರ್ಶನ್ ಸ್ನೇಹಿತರು ಖುಷಿಯಾಗಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ದರ್ಶನ್ಗೆ ಜಾಮೀನು ಸಿಕ್ಕ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ ಸಂದರ್ಭದಲ್ಲಿ ಪತ್ರಕರ್ತರು, ದರ್ಶನ್ಗೆ ಜಾಮೀನು ಸಿಕ್ಕ ವಿಚಾರವನ್ನು ಪ್ರಸ್ತಾಪಿಸಿ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದರು. ಇದಕ್ಕೆ ಉತ್ತರ ನೀಡಿದ ಡಿ.ಕೆ ಶಿವಕುಮಾರ್, ನ್ಯಾಯಾಲಯ ಕೊಡುವ ತೀರ್ಪನ್ನು ನಾವು ಪ್ರಶ್ನೆ ಮಾಡುವುದಿಲ್ಲ, ನ್ಯಾಯಾಲಯ ಕೊಡುವ ತೀರ್ಪನ್ನು ನಮ್ಮ ಸರ್ಕಾರ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ದರ್ಶನ್ಗೆ ಷರತ್ತುಬದ್ಧ ಜಾಮೀನು
ನಟ ದರ್ಶನ್ಗೆ ಬೆನ್ನುಹುರಿ ಸಮಸ್ಯೆ ತೀವ್ರವಾಗಿರುವ ಕಾರಣ ಚಿಕಿತ್ಸೆ ಪಡೆಯುವ ಸಲುವಾಗಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಈ ಅವಧಿಯಲ್ಲಿ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಬೇರೆ ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆ ಸೂಚನೆ ಕೊಟ್ಟಿದೆ.
ಚಿಕಿತ್ಸೆಗಾಗಿ ಮಾತ್ರ ಮುಂದಿನ ಆರು ವಾರಗಳ ಸಮಯವನ್ನು ಬಳಸಿಕೊಳ್ಳಬೇಕಿದ್ದು, ಒಂದು ವಾರದಲ್ಲಿ ದರ್ಶನ್ರ ಆರೋಗ್ಯ ವರದಿಯನ್ನು ಕೊಡುವಂತೆ ಸೂಚನೆ ಕೊಟ್ಟಿದೆ. ಇಂತಹ ಪ್ರಕರಣಗಳಲ್ಲಿ ಕೆಲವು ಆರೋಪಿಗಳು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇರುತ್ತದೆ, ಒಮ್ಮೆ ದೇಶ ತೊರೆದು ಹೋದ ಬಳಿಕ ಅವರನ್ನು ವಾಪಸ್ ಕರೆತರುವುದು ಕಷ್ಟವಾಗಿರುವ ಕಾರಣ, ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚನೆ ಕೊಟ್ಟಿದೆ.
ದರ್ಶನ್ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದರು. ಆದರೆ ನ್ಯಾಯಾಲಯ ಇದೀಗ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಲ್ಲಿ ಮಾತ್ರ ದರ್ಶನ್ ಚಿಕಿತ್ಸೆ ಪಡೆಯಬಹುದಹು ಎಂದು ಹೇಳಿದೆ. ಇದರಿಂದ ದರ್ಶನ್ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವುದು ಅನುಮಾನ ಎನ್ನಲಾಗಿದೆ. ಕೋರ್ಟ್ ಸೂಚನೆ ಪ್ರಕಾರ ಅವರು ಈಗ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಬೇಕಾಗಬಹುದು.
ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಶನ್ ಪರ ವಕೀಲರಾದ ಸುನಿಲ್, ದರ್ಶನ್ಗೆ ಸದ್ಯ ಮಧ್ಯಂತರ ಜಾಮೀನು ಮಾತ್ರ ಸಿಕ್ಕಿದ್ದು, ಸಾಮಾನ್ಯ ಜಾಮೀನು ಸಿಗುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.












Click it and Unblock the Notifications