ತುರ್ತು ಪರಿಸ್ಥಿತಿ ನಂತರದ ಕೆಟ್ಟ ಕಾಲಘಟ್ಟವಿದು: ಸಿದ್ಧಾರ್ಥ ವರದರಾಜನ್
ಬೆಂಗಳೂರು, ಡಿಸೆಂಬರ್ 4: ತುರ್ತು ಪರಿಸ್ಥಿತಿಯ ನಂತರದಲ್ಲಿ ನಾವು ನೋಡುತ್ತಿರುವ ಕೆಟ್ಟ ಕಾಲಘಟ್ಟ ಇದು. ತಮ್ಮ ನಂಬಿಕೆಗಳಿಗೆ ವಿರುದ್ಧವಾದ ಧ್ವನಿ ಕೇಳಲೇಬಾರದು ಎಂಬಂಥ ವಾತಾವರಣ ದೇಶದಲ್ಲಿದೆ ಎಂದು 'ದ ವೈರ್' ವೆಬ್ ಸೈಟ್ ನ ಸಂಪಾದಕ ಸಿದ್ಧಾರ್ಥ ವರದರಾಜನ್ ಅಭಿಪ್ರಾಯಪಟ್ಟರು.
ನಗರದಲ್ಲಿ ಸೋಮವಾರ ಗೌರಿ ಸ್ಮಾರಕ ಟ್ರಸ್ಟ್ ನೋಂದಣಿ ನಂತರ ಆಯೋಜಿಸಿದ್ದ 'ದಿಟವ ನುಡಿಯುವ ದಿಟ್ಟತನ' ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ, ಪದ್ಮಾವತಿ ಸಿನಿಮಾದ ನಟಿ, ನಿರ್ದೇಶಕರ ಬಗ್ಗೆ ಅಸಭ್ಯ ಭಾಷೆಯನ್ನು ಬಳಸಿ ಬಯ್ಯಲಾಗುತ್ತಿದೆ. ಮೂಗು ಕತ್ತರಿಸುವ, ತಲೆ ಕಡಿಯುವ ಮಾತುಗಳು ಕೇಳಿಬರುತ್ತಿದೆ. ಆ ರೀತಿ ಮಾತನಾಡುವವರ ವಿರುದ್ಧ ಕೂಡ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಅಂದರೆ ಏನರ್ಥ ಎಂದರು.
ಗೌರಿ ಹತ್ಯೆ ತನಿಖೆ ಬಗ್ಗೆ ಕವಿತಾ ಲಂಕೇಶ್ ಅಸಮಾಧಾನ
ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಏನಾದರೂ ಹೇಳಬೇಕು ಅಂದರೆ ಅದು ವ್ಯವಸ್ಥೆಗೆ ಪ್ರಿಯವಾದ ಭಾಷೆ ಹಾಗೂ ವಿಷಯವೇ ಆಗಿರಬೇಕು. ಇಲ್ಲದಿದ್ದಲ್ಲಿ ಅಂಥವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಕೋರ್ಟ್ ನಲ್ಲಿ ನಡೆಯುವ ವಿಚಾರಣೆಯೊಂದನ್ನು ವರದಿ ಮಾಡಲು ಸಹ ಮಾಧ್ಯಮಗಳಿಗೆ ಅವಕಾಶ ನೀಡುವುದಿಲ್ಲ ಅಂದರೆ ಇದೆಂಥ ಸ್ಥಿತಿ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುತ್ತಿರುವ ಅರ್ಜಿಗಳನ್ನು ಗಮನಿಸಿ
ಅಷ್ಟೇ ಏಕೆ, ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಮುಂದೆ ವಿಚಾರಣೆಗೆ ಬರುತ್ತಿರುವ ವಿಚಾರಗಳನ್ನೇ ಗಮನಿಸಿ. ಯಾರು ಏನು ತಿನ್ನಬೇಕು, ಹೇಗೆ ಬದುಕಬೇಕು, ಹೇಗೆ ಇರಬೇಕು ಇಂಥ ವಿಚಾರಗಳಿಗೆ ಸಂಬಂಧಿಸಿದ ಅರ್ಜಿಗಳೇ ಬರುತ್ತಿವೆ. ಮಾನನಷ್ಟ ಮೊಕದ್ದಮೆ ಎಂಬುದನ್ನು ಪ್ರಭಾವಿಗಳು ಹಾಗೂ ಪ್ರಭಾವಿ ಕಂಪೆನಿಗಳು ಅಸ್ತ್ರಗಳಂತೆ ಮಾಡಿಕೊಂಡು ಪತ್ರಕರ್ತರನ್ನು- ಮಾಧ್ಯಮಗಳನ್ನು ಹಣಿಯಲಾಗುತ್ತಿದೆ ಎಂದರು.
ಮೋದಿ, ಅಮಿತಾ ಶಾ ವಿರುದ್ಧದ ಸುದ್ದಿ ಪ್ರಕಟಿಸಲು ಭಯ
ಪ್ರಧಾನಿ ಮೋದಿ, ಅಮಿತ್ ಶಾ ಅಥವಾ ಅರುಣ್ ಜೇಟ್ಲಿ ವಿರುದ್ಧದ ಸುದ್ದಿ ಅಂದರೆ ಮಾಧ್ಯಮ ಸಂಸ್ಥೆಗಳು ಅವುಗಳನ್ನು ಪ್ರಕಟಿಸಲು ನೂರು ಸಲ ಯೋಚಿಸುತ್ತಿವೆ. ತಮ್ಮ ಸಂಸ್ಥೆ ಅಥವಾ ಕಂಪನಿಯ ಯಾವುದಾದರೂ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಬೇಕು ಅಥವಾ ಸರಕಾರದ ಸಹಾಯ ಪಡೆಯಬೇಕು ಎಂದಾದಲ್ಲಿ ಅವರಿಗೆ ಮುಜುಗರ ಆಗುವಂಥ ಸುದ್ದಿ ಪ್ರಕಟವಾಗದಿರುವಂತೆ ನೋಡಿಕೊಳ್ಳಿ ಎಂಬ ಆದೇಶ ಮಾಡಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಸಂದೇಶಗಳ ಮೇಲೂ ದೂರು
ಖಾಸಗಿ ವಾಟ್ಸಾಪ್ ಸಂದೇಶ ಅಥವಾ ಫೇಸ್ ಬುಕ್ ಪೋಸ್ಟ್ ಗಳ ಆಧಾರದಲ್ಲಿ ಕೇಸುಗಳನ್ನು ದಾಖಲಿಸಲಾಗುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು. "ಕ್ರಿಮಿನಲ್ ಗಳು ಉತ್ತರಪ್ರದೇಶವನ್ನು ಬಿಟ್ಟು ಹೊರಡಿ" ಎಂಬ ಎಚ್ಚರಿಕೆ ನೀಡಿದ್ದರು. ಅಲ್ಲಿನ ವ್ಯಕ್ತಿಯೊಬ್ಬರು, ನಿಮ್ಮ ವಿರುದ್ಧದ ಕ್ರಿಮಿನಲ್ ಕೇಸ್ ಏನಾಯಿತು ಆದಿತ್ಯನಾಥ್ ರನ್ನು ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಕ್ಕೆ ಆ ವ್ಯಕ್ತಿ ವಿರುದ್ಧ ದೇಶ ದ್ರೋಹದ ಕೇಸ್ ಹಾಕಿದ್ದಾರೆ ಎಂದರು.
ಇಂಟರ್ ನೆಟ್ ಮೂಲಕ ಜಾಗೃತಿ ಮೂಡಿಸಿ
ತುರ್ತು ಪರಿಸ್ಥಿತಿಯಲ್ಲಿ ಇಲ್ಲದ ಅನುಕೂಲ ಈಗ ಇದೆ. ಸಾಮಾಜಿಕ ಜಾಲ ತಾಣಗಳ ಮೂಲಕ ನಾವು ಎಚ್ಚರ ಮೂಡಿಸಬಹುದು. ಆದರೆ ಸುಳ್ಳು ಸುದ್ದಿ ವಿರುದ್ಧ ಎಚ್ಚರವಾಗಿರಿ. ಇಮೇಲ್, ಇಂಟರ್ ನೆಟ್, ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದು ಅವರು ಹೇಳಿದರು.