ಬೆಂಗಳೂರ ರಸ್ತೆ ಗುಂಡಿ ಮುಚ್ಚಲು ನೀವು ಸಹಿ ಮಾಡಬಹುದು
ಬೆಂಗಳೂರು, ನವೆಂಬರ್. 21: ಬೆಂಗಳೂರಿನ ರಸ್ತೆಗಳ ಗುಂಡಿ ಸಾಮ್ರಾಜ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ನಿಮಗೆ ಈ ಗುಂಡಿ ನರಕದಿಂದ ಪಾರಾಗಬೇಕು ಎಂದು ಅನಿಸಿಯೇ ಇರುತ್ತದೆ. ನಿಮ್ಮಷ್ಟಕ್ಕೆ ನೀವು ಗೊಣಗಿಕೊಂಡು ಮುಂದೆ ಸಾಗಿಯೂ ಇರುತ್ತೀರಿ. ರಸ್ತೆಗಳ ಪರಿರಸ್ಥಿತಿ ಸುಧಾರಣೆ ಮಾಡಿ ಅಂತ ಮಾಧ್ಯಮಗಳು ಪ್ರತಿದಿನ ಬೊಬ್ಬೆ ಹೊಡೆದುಕೊಳ್ಳುತ್ತ ಇರುತ್ತವೆ. ಆದರೆ ಬಿಬಿಎಂಪಿ ಮತ್ತು ಸರ್ಕಾರ ಕಿವುಡಾಗಿ ಕೂತಿರುತ್ತವೆ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಇದೀಗ ನೀವು ಸಹಿ ಮಾಡಿ ಒತ್ತಾಯ ಹೇರಬಹುದು. ಪ್ರತಿದಿನದ ಜಂಜಾಟದಿಂದ ನೊಂದ ಗೃಹಿಣಿಯೊಬ್ಬರು ಸಹಿ ಸಂಗ್ರಹ ಅಭಿಯಾನ ಆರಂಭ ಮಾಡಿದ್ದಾರೆ. ನೀವು ಸಹಿ ಮಾಡ್ತೀರಿ ತಾನೆ?[ನೋಡಿದಲ್ಲಿ ಟ್ರಾಫಿಕ್ ಜಾಮ್, ಗಬ್ಬು ನೆತ್ತಿಗೇರಿಸುವ ಕಸ!]

ರಸ್ತೆಗಳ ದುರವಸ್ಥೆಯಿಂದ ನೊಂದ ವೈಟ್ ಫೀಲ್ಡ್ ನಿವಾಸಿ ದೀಪಾ ರವಿ ಅಭಿಯಾನ ಆರಂಭ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಸಿದ್ಧಮಾಡಿರುವ ಅರ್ಜಿಯಲ್ಲಿ ದೀಪಾ ಬೆಂಗಳೂರಿನ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಸಂಜೆ ಶಾಲೆ ಮುಗಿಸಿದ ಮಕ್ಕಳು ಮನೆಗೆ ಬರುವುದು ರಾತ್ರಿ 8 ಗಂಟೆಗೆ. ಘೋರ ಟ್ರಾಫಿಕ್ ಜೀವನವನ್ನೆಲ್ಲ ರಸ್ತೆಯಲ್ಲೆ ವ್ಯಯಿಸಿಬಿಡುತ್ತಿದೆ. ಈಗಾಗಲೇ ಅದೆಷ್ಟೋ ಜೀವಗಳು ರಸ್ತೆ ಅವ್ಯವಸ್ಥೆಗೆ ಬಲಿಯಾಗಿವೆ. ಮಕ್ಕಳನ್ನು ಕರೆದುಕೊಂಡು ಬರಲು ದ್ವಿಚಕ್ರ ವಾಹನದಲ್ಲಿ ತೆರಳಿದರೆ ಕತೆ ಮುಗಿದೆ ಹೋಯಿತು ಎಂದು ದೀಪಾ ತಮ್ಮ ಪತ್ರದಲ್ಲಿ ಆತಂಕ ತೋಡಿಕೊಂಡಿದ್ದಾರೆ.[ಸಚಿವರು ಬಂದರು, ಆಡಳಿತ ಬದಲಾತು: ಕಸ ಹಾಗೇ ಉಳಿತು]
ಸದ್ಯ 7 ಸಾವಿರ ಜನ ಅಭಿಯಾನಕ್ಕೆ ಸಹಿ ಮಾಡಿದ್ದಾರೆ. ನಾನು ಮುಖ್ಯಮಂತ್ರಿ, ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಲ್ಲಿ ನೇರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಒಳ್ಳೆಯ ಫುಟ್ ಪಾತ್ ಮತ್ತು ರಸ್ತೆ ನಿರ್ಮಿಸಿ ನಾಗರಿಕರ ಹಿತ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು ಗೀತಾ ಸ್ಪಷ್ಟವಾಗಿ ಹೇಳಿದ್ದಾರೆ.
ನೀವು ಸುರಕ್ಷಿತವಾಗಿ ವಾಹನ ಚಾಲನೆ ಮಾಡಿಕೊಂಡು ಮನೆ ಸೇರಬೇಕು ತಾನೆ? ನಿಮ್ಮ ಮಕ್ಕಳು ಸರಿಯಾದ ವೇಳೆಗೆ ಮನೆ ತಲುಪಬೇಕು ತಾನೆ? ಹಾಗಾದರೆ ಕೂಡಲೇ ಅಭಿಯಾನಕ್ಕೆ ಕೈ ಜೋಡಿಸಿ, ಸಹಿ ಮಾಡಲು ಮರಡೆಯಬೇಡಿ.












Click it and Unblock the Notifications