'ಪ್ರಧಾನಿ ಮೋದಿಗೆ ಪರ್ಯಾಯವಾಗಿ ಇಡೀ ಭಾರತದಲ್ಲೇ ನಾಯಕರಿಲ್ಲ'
ಬೆಂಗಳೂರು, ಏಪ್ರಿಲ್ 10: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಪ್ರಧಾನಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪರ್ಯಾಯ ಅಭ್ಯರ್ಥಿ ಯಾರೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಂದು ಕಡೆ ಚಂದ್ರಬಾಬು ನಾಯುಡು, ಕೆ. ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಶರದ್ ಪವಾರ್ ಪ್ರಧಾನಿಯಾಗಲು ಕನಸು ಕಾಣುತ್ತಿದ್ದಾರೆ. ಯಾರೊಬ್ಬರು ಮೋದಿಯವರಷ್ಟು ಸಮರ್ಥರಲ್ಲ. ಭಾರತದಲ್ಲಿ ಈಗ ಮೋದಿಯವರ ಪರ್ಯಾಯವಾಗಿ ನಿಲ್ಲುವವರು ಇಲ್ಲ ಎಂದು ಅಭಿಪ್ರಾಯ ಪಟ್ಟರು.
ಬೆಂಗಳೂರು ದಕ್ಷಿಣ ಲೋಕಾಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ರಾಮ್ ಮಾಧವ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಈ ಬಾರಿಯ ಚುನಾವಣೆಯ ಫಲಿತಾಂಶ ಆರು ವಾರಗಳ ಮೊದಲೇ ಹೊರಬಿದ್ದಿದ್ದು, ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗುತ್ತಾರೆ ಎಂದು ಜನರು ನಿರ್ಧರಿಸಿಬಿಟ್ಟಿದ್ದಾರೆ ಎಂದರು.

ತೇಜಸ್ವಿ ಸೂರ್ಯ ಗೆಲ್ಲಲು ದಟ್ಟ ವಾತಾವರಣ
ಅದೇ ರೀತಿಯಲ್ಲಿ ಬೆಂಗಳೂರು ದಕ್ಷಿಣದಲ್ಲೂ ಜನರ ಆಶೀರ್ವಾದದಿಂದ ತೇಜಸ್ವಿ ಸೂರ್ಯ ಗೆಲುವಿನ ದಟ್ಟ ವಾತಾವರಣ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅಲೆ ಎಬ್ಬಿಸುತ್ತವೆ. ಆದರೆ ಈ ಬಾರಿ ಮಾತ್ರ ಆಡಳಿತ ಪಕ್ಷವೇ ಈ ಅಲೆಯನ್ನು ಸೃಷ್ಟಿಸಿದೆ. ಶ್ರೀ ಸಾಮಾನ್ಯ ಜನರು ಮೋದಿಯನ್ನು ಮತ್ತೊಮ್ಮೆ ಬಯಸುತ್ತಿದ್ದಾರೆ ಎಂದರು.
ಈ ವೇಳೆ ಕಾಂಗ್ರೆಸ್ ನ ಕನಿಷ್ಠ ಆದಾಯ ಯೋಜನೆಯನ್ನು ಮೂದಲಿಸಿದ ಅವರು, ಜನರನ್ನು ಸೋಮಾರಿಗಳನ್ನಾಗಿಸಲು ಯೋಜಿಸಿರುವ ನೀತಿ ಇದು. ಬಿಜೆಪಿ ಅದರ ಬದಲು ದೇಶದಲ್ಲಿ ಉದ್ಯೋಗದ ಸೃಷ್ಟಿಗೆ ಯೋಜನೆಗಳನ್ನು ರೂಪಿಸಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಭ್ರಷ್ಟರಾಗಿರಲಿಲ್ಲ, ಆದರೆ ಅವರ ಸುತ್ತಲಿನ ವಾತಾವರಣ ಭ್ರಷ್ಟವಾಗಿತ್ತು ಎಂದರು.
ಭಾರತದಲ್ಲಿ ಈಗ ಕಾರ್ಯಾಂಗ, ಆಡಳಿತ ವರ್ಗ ಭ್ರಷ್ಟಾಚಾರ ರಹಿತ ಕಡೆಗೆ ಸಾಗುತ್ತಿದೆ. ಅದಕ್ಕೆ ಕಾರಣ ನೇರವಾಗಿ ಫಲಾನುಭವಿಗಳ ಖಾತೆಗೆ ನಗದು ನೇರ ಜಮೆ ಯೋಜನೆಗಳು ಎಂದು ಹೇಳಿದರು.

ಮೋದಿ ಮತ್ತೊಮ್ಮೆ ಎಂಬ ಮಾತು ಎಲ್ಲೆಲ್ಲೂ ಕೇಳಿಬರುತ್ತಿದೆ
ವಿ.ವಿ.ಪುರಂನಲ್ಲಿ ಏರ್ಪಡಿಸಲಾಗಿದ್ದ 'ಮೋದಿ ಮತ್ತೊಮ್ಮೆ' ಸಂವಾದದಲ್ಲಿ ಭಾಗಿಯಾಗಿದ್ದರು. ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ್ಯ ಸದಾಶಿವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಹತ್ತು ದಿನಗಳಿಂದ ನೋಡುತ್ತಿದ್ದೇನೆ, ಜಯನಗರದ ಶ್ರೀಮಂತರ ಬಡಾವಣೆ ನಿವಾಸಿಗಳಿಂದ ಹಿಡಿದು, ಎಚ್ ಎಸ್ ಆರ್ ಲೇಔಟ್ ಮಂಗಮ್ಮನ ಪಾಳ್ಯದ ಕಾರ್ಮಿಕರು, ಬೊಮ್ಮನಹಳ್ಳಿ ಗಾರ್ಮೆಂಟ್ಸ್ ನೌಕರರು, ಬಿಟಿಎಂನಲ್ಲಿ ಇಸ್ತ್ರೀ ಮಾಡುವ ಸಾಮಾನ್ಯನವರೆಗೂ ಎಲ್ಲರ ಬಾಯಲ್ಲೂ ಬರುವ ಒಂದೇ ಒಂದು ಮಾತು ಎಂದರೆ ನರೇಂದ್ರ ಮೋದಿ ಮತ್ತೊಮ್ಮೆ ಎಂದರು.
ಈ ಹಿಂದೆ ಎಂದೂ ಇಲ್ಲದ ಹಾಗೇ ಇಂದು ಮತದಾರರು ಕಾರ್ಯಕರ್ತರಾಗಿ ಬದಲಾಗಿದ್ದಾರೆ. ನವ ಭಾರತ, ನವ ಬೆಂಗಳೂರು ನಿರ್ಮಾಣಕ್ಕಾಗಿ ನಾನು ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ಯುವ ಪ್ರತಿನಿಧಿಯಾಗುತ್ತೇನೆ ಎಂದರು.












Click it and Unblock the Notifications