'ಎ' ಖಾತಾ ಪರಿವರ್ತನೆ ಮೂಲಕ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಹಣ ಸಂಗ್ರಹ: ಎಎಪಿ
ಬೆಂಗಳೂರು, ಏಪ್ರಿಲ್ 28: ಅನಧಿಕೃತ ನಿವೇಶನಗಳ ಮಾಲೀಕರಿಂದ ಲಂಚ ಪಡೆದು 'ಎ' ಖಾತಾ ನೀಡುವ ಮೂಲಕ ಆಡಳಿತಾರೂಢ ಬಿಜೆಪಿಯು ಮುಂಬರುವ ಚುನಾವಣೆಗೆ ನೂರಾರು ಕೋಟಿ ಹಣ ಸಂಗ್ರಹಿಸುತ್ತಿದೆ ಎಂದು ಆಪ್ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ
ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ "ಬಿ ಖಾತಾ ಆಸ್ತಿ ಮಾಲೀಕರಿಂದ ಸುಧಾರಣಾ ಶುಲ್ಕ ಪಾವತಿಸಿಕೊಂಡು ಎ ಖಾತಾ ನೀಡಲು ಬಿಬಿಎಂಪಿ ಕೇಂದ್ರ ಭಾಗದಲ್ಲಿ ಪ್ರತಿ ಚ.ಮೀ. ವಿಸ್ತೀರ್ಣದ ನಿವೇಶನಕ್ಕೆ 200 ರೂ. ಹಾಗೂ ಹೊರವಲಯದಲ್ಲಿ 250 ರೂ. ಸುಧಾರಣಾ ಶುಲ್ಕ ನಿಗದಿಪಡಿಸಲಾಗಿದೆ.
30/40 ನಿವೇಶನಕ್ಕೆ ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 22 ಸಾವಿರ ರೂ.ಹಾಗೂ ಹೊರವಲಯದಲ್ಲಿ 27 ಸಾವಿರ ರೂ. ಸುಧಾರಣಾ ಶುಲ್ಕ ಕಟ್ಟಬೇಕಾಗುತ್ತದೆ. ಅದೇ ರೀತಿ 60/40ಕ್ಕೆ ಕೇಂದ್ರ ಭಾಗದಲ್ಲಿ 44 ಸಾವಿರ ರೂ. ಹಾಗೂ ಹೊರವಲಯದಲ್ಲಿ 55 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಇದರ ಜೊತೆಗೆ, 30/40 ನಿವೇಶನಕ್ಕೆ 25 ಸಾವಿರ ಹಾಗೂ 40/60 ನಿವೇಶನಕ್ಕೆ 50 ಸಾವಿರ ದಷ್ಟು ಲಂಚವನ್ನೂ ಏಜೆಂಟರುಗಳ ಮೂಲಕ ಅಧಿಕಾರಿಗಳು ಪಡೆಯುತ್ತಿದ್ದು, ಅದು ಮೂರೂ ಪಕ್ಷಗಳ ಶಾಸಕರ ಪಾಲಾಗುತ್ತಿದೆ" ಎಂದು ಆರೋಪಿಸಿದರು.
ಪ್ರತಿಯೊಂದು ವಾರ್ಡ್ ಆಫೀಸ್ಗಳಲ್ಲಿ ಖಾತಾ ಮಾಡಿಕೊಡಲು ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಲಂಚ ಪಡೆಯುತ್ತಿದ್ದಾರೆ. ದಾಸರಹಳ್ಳಿ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಯಶವಂತಪುರ ವಲಯಗಳಲ್ಲಿ ಈ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ ಇದರ ವಿರುದ್ಧ ಎಸಿಬಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ 8.ಲಕ್ಷಕ್ಕೂ ಹೆಚ್ಚು ಇದ್ದ ಬಿ ಖಾತಾ ಆಸ್ತಿಗಳ ಸಂಖ್ಯೆಯು 6.18 ಲಕ್ಷಕ್ಕೆ ಇಳಿಕೆಯಾಗಿದೆ. ಹತ್ತು ವರ್ಷಗಳಲ್ಲಿ ಸುಮಾರು 2 ಲಕ್ಷ ಬಿ ಖಾತಾಗಳನ್ನು ಅಕ್ರಮವಾಗಿ ಎ ಖಾತಾ ಮಾಡಲಾಗಿದೆ. ಭ್ರಷ್ಟ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅವಧಿಯಲ್ಲಿ ನಡೆದ ಈ ದಂಧೆಯನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ಮಾಡಬೇಕು. ತಪ್ಪಿತಸ್ಥ ಪ್ರಭಾವಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಪ್ ಪಕ್ಷದ ನಾಯಕ ಅಶೋಕ್ ಮೃತ್ಯುಂಜಯ ಆಗ್ರಹಿಸಿದರು.
ಈ ಅಕ್ರಮ ದಂಧೆ ಕೂಡಲೇ ನಿಲ್ಲದಿದ್ದಲ್ಲಿ ಬಿಬಿಎಂಪಿ ಕಚೇರಿಯ ಮುಂದೆ ಬೃಹತ್ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
Recommended Video
ಪತ್ರಿಕಾ ಗೋಷ್ಠಿಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ನಾಯಕಿ ಪಲ್ಲವಿ ಚಿದಂಬರಂ ಮತ್ತಿತರರು ಭಾಗವಹಿಸಿದ್ದರು.