ರಾಜ್ಯದಲ್ಲಿ ಶಾಂತ ವಾತಾವರಣ ಮರಳಿದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 22: ರಾಜ್ಯದಲ್ಲಿ ಶಾಂತ ವಾತಾವರಣ ಮರಳಿದೆ , ಮಂಗಳೂರಿನಲ್ಲೂ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.ಗೋಲಿಬಾರ್ ಹಾಗೂ ಗಲಭೆ ವಿಷಯದಲ್ಲಿ ಯಾವ ರೀತಿಯಲ್ಲಿ ತನಿಖೆ ನಡೆಸಬೇಕು ಎಂಬುದನ್ನು ಸಿಎಂ ನಿರ್ಧರಿಸುತ್ತಾರೆ. ಈ ಸಂಬಂಧ ಸಂಜೆ ಸಭೆ ಕರೆದಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ ಯು.ಟಿ.ಖಾದರ್ ಮೇಲೂ ಸಹ ಕೇಸ್ ದಾಖಲಿಸಲಾಗಿದೆ.ತನಿಖೆ ನಡೆಯುತ್ತದೆ.
ಜನವರಿಯಲ್ಲಿ ಸಿಎಎ ಜಾರಿ ಅನ್ನೋದು ಕೇವಲ ಊಹಾಪೋಹ.ಇನ್ನೂ ಕೇಂದ್ರ ಸರ್ಕಾರವೇ ಕಾಯ್ದೆ ಜಾರಿಗೆ ದಿನಾಂಕ ನಿಗದಿ ಮಾಡಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲೂ ದಿನಾಂಕ ನಿಗದಿ ಪಡಿಸಲಾಗುತ್ತದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ.ಈಗ ಯಾವುದೇ ರಾಜಕೀಯ ಪಕ್ಷದ ಮುಖಂಡರು ಮಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶೆ ಮಾಡಲು ಯಾವುದೇ ಅಡ್ಡಿ ಇಲ್ಲ.ಪ್ರಚೋದನೆ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಯು.ಟಿ.ಖಾದರ್ ಮೇಲೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತದೆ.ಗಲಭೆಯಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ.
ಅವರಿಗೆ ತಲಾ ಹತ್ತು ಲಕ್ಷ ರೂ.ಪರಿಹಾರ ಘೋಷಿಸಿದ್ದೇವೆ.ಮಂಗಳೂರು ಗಲಭೆಗೆ ಯಾರು ಕಾರಣರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ.ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ಮಾಡುತ್ತಿದ್ದವರೆಲ್ಲಾ ಹೊರರಾಜ್ಯಗಳಿಂದ ಕರೆಸಲ್ಪಟ್ಟವರು ಎಂಬುದು ಗೊತ್ತಾಗಿದೆ.
ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಕಾಂಗ್ರೆಸ್ ನಾಯಕರೇ ಮಾಡಿರುವ ಷಡ್ಯಂತ್ರ ಇದು ಎಂಬುದು ನಿರ್ವಾದಿತ.ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ದೆಹಲಿಯಲ್ಲಿ ಮಾತನಾಡಿದ್ದು ಇದಕ್ಕೆ ಸಾಕ್ಷಿ.ಚುನಾವಣೆಗಳಲ್ಲಿ ಜನ ಪಾಠ ಕಲಿಸಿದ್ದರೂ ಅವರು ಪಾಠ ಕಲಿತಿಲ್ಲ ಎಂದರು.
ಮಹಾದಾಯಿ ವಿಷಯದಲ್ಲಿ ಗೊಂದಲವಾಗಿತ್ತು.ಈಗಷ್ಟೇ ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದೇನೆ.ಅಮಿತ್ ಷಾ ಅವರೊಂದಿಗೂ ಚರ್ಚಿಸುತ್ತೇವೆ.ನಾವು ಕೇಳುತ್ತಿರುವುದು ಕುಡಿಯುವ ನೀರಿಗಾಗಿ.
ಕುಡಿಯುವ ನೀರಿಗೆ ಅಡ್ಡಿ ಮಾಡುವುದು ಸರಿಯಲ್ಲ.ಈ ಸಂಬಂಧ ಗೋವಾ ಮುಖ್ಯಮಂತ್ರಿಯವರೊಂದಿಗೂ ಮಾತುಕತೆಯಾಡುತ್ತೇವೆ.ಸೌಹಾರ್ದಯುತವಾಗಿ ವಿವಾದ ಬಗೆ ಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.












Click it and Unblock the Notifications