ಬೆಂಗಳೂರಿನ ಸ್ಮಶಾನದಲ್ಲಿ ಗ್ಯಾಸ್ ಏಜೆನ್ಸಿ ನೌಕರರ ನಿಗೂಢ ಸಾವು
Recommended Video
ಬೆಂಗಳೂರು, ಸೆಪ್ಟೆಂಬರ್ 29: ಸ್ಮಶಾನವೊಂದರಲ್ಲಿ ಗ್ಯಾಸ್ ಏಜೆನ್ಸಿ ನೌಕರರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಹಲಸೂರು ಸಮೀಪದ ಲಕ್ಷ್ಮೀಪುರ ಸ್ಮಶಾನದಲ್ಲಿ ಇಬ್ಬರು ನೌಕರರು ಮೃತಪಟ್ಟಿದ್ದಾರೆ. ಮಾರತ್ತಹಳ್ಳಿಯ ಮುರುಗೇಶ್(42) ಮತ್ತು ರಾಜೇಶ್(32) ಮೃತರು.
ಹಲಸೂರಿನ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಸ್ಮಶಾನದಲ್ಲಿ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪ್ರಾಥಮಿಕ ಹಂತದ ತನಿಖೆಯಲ್ಲಿ ಮದ್ಯದಲ್ಲಿ ವಿಷ ಮಿಶ್ರಣ ಮಾಡಿ ಸೇವಿಸಿ ಗ್ಯಾಸ್ ಏಜೆನ್ಸಿ ಕೆಲಸಗಾರರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಹಲಸೂರಿನ ಗೋಪಾಲಪುರದ ಗಾಂಜಾ ವ್ಯಸನಿಗಳು ಮುರುಗೇಶ್ ಮತ್ತು ರಾಜೇಶ್ನನ್ನು ಅಪಹರಿಸಿ ಬಳಿಕ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ವಿಚಾರವಾಗಿ ಸ್ಥಳೀಯರ ಜತೆ ಮುರುಗೇಶ್ ಮತ್ತು ರಾಜೇಶ್ ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಮಾರತ್ತಹಳ್ಳಿಯ ಮುರುಗೇಶ್ ಹಾಗೂ ರಾಜೇಶ್ ಸಂಬಂಧಿಗಳಾಗಿದ್ದು, ಒಂದೇ ಕುಟುಂಬದ ಅಕ್ಕ-ತಂಗಿಯನ್ನು ಅವರು ವಿವಾಹವಾಗಿದ್ದರು. ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಪ್ರತ್ಯೇಕವಾಗಿ ನೆಲೆಸಿದ್ದ ಅವರು, ಹಲಸೂರು ಸಮೀಪ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು.
ಎಂದಿನಂತೆ ಶುಕ್ರವಾರ ಬೆಳಗ್ಗೆ ಇಬ್ಬರು ಕೆಲಸಕ್ಕೆ ಬಂದಿದ್ದಾರೆ. ಬಳಿಕ ಸಂಜೆ ಕೆಲಸ ಮುಗಿಸಿ ಮುರುಗೇಶ್ ಹಾಗೂ ರಾಜೇಶ್ ಸ್ಮಶಾನಕ್ಕೆ ತೆರಳಿ ಮದ್ಯ ಸೇವಿಸಿದ್ದಾರೆ. ಆ ವೇಳೆ ವಿಷ ಸೇವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications