24 ಗಂಟೆಯಲ್ಲಿ 21 ಟ್ರಸ್ಟ್ಗಳ ಅಧ್ಯಕ್ಷರ ನೇಮಕ ಆದೇಶ ಹಿಂಪಡೆದ ಸರ್ಕಾರ!
ಬೆಂಗಳೂರು ಆಗಸ್ಟ್ 25: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಒಂದೇ ದಿನಕ್ಕೆ ರಾಜ್ಯ ಸರ್ಕಾರ ಹಿಂಪಡೆದಿದೆ.
ಬುಧವಾರದಂದು ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 21 ಟ್ರಸ್ಟ್ಗಳಿಗೆ ಅಧ್ಯಕ್ಷರನ್ನು ಸದಸ್ಯರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶಕ್ಕೆ ವ್ಯಾಪ್ತಕವಾಗಿ ಜನರಿಂದ ಆಕ್ರೋಶ ವ್ಯಕ್ತವಾಯಿತು. ಹೀಗಾಗಿ ಆದೇಶಿಸಿದ ಮರುದಿನವೇ 24 ಗಂಟೆಗಳಲ್ಲಿ ಹಿಂಪಡೆದಿದೆ. ಇದು ಸರ್ಕಾರದ ಕಾರ್ಯವೈಖರಿಯನ್ನು ತೋರಿಸುತ್ತದೆ. ಈ ಹಿಂದೆ ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ರದ್ದು ಮಾಡಿ ತರಾತುರಿಯಲ್ಲಿ ಇದೇ ರೀತಿ ಆದೇಶ ಹೊರಡಿಸಿತ್ತು. ನಂತರ ಆದೇಶವನ್ನು ರದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೈಸೂರು-ಬೆಂಗಳೂರು ದಶಪಥ ರಸ್ತೆ: ಬಿಡದಿ ಬಳಿ ಒಂದು ಕ್ಯಾರೇಜ್ ಸಂಚಾರಕ್ಕೆ ಮುಕ್ತ
ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೆ ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನ ಹಾವೇರಿಗೆ ಅಧ್ಯಕ್ಷರಾದ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಅಧ್ಯಕ್ಷರಾದ ನರೇಂದ್ರ ರೈ ದೇರ್ಲ ಅವರು ವೈಯಕ್ತಿಕ ಕಾರಣಗಳಿಂದ ಆದೇಶವನ್ನು ತಿರಸ್ಕರಿಸಿದರು.
ನೇಮಕಕ್ಕೂ ಮುನ್ನ ಸಂಪರ್ಕಿಸಬೇಕಿತ್ತು
ಆದೇಶ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನರೇಂದ್ರ ರೈ ದೇರ್ಲ ಅವರು, ಟ್ರಸ್ಟ್ ಮತ್ತು ಪ್ರತಿಷ್ಠಾನಕ್ಕೆ ಸಂಬಂಧಿಸಿದಂತೆ ನೇಮಕ ಕುರಿತು ಯಾವುದೇ ಅಧಿಕಾರಿಗಳು, ವ್ಯಕ್ತಿಗಳು ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಇಂತಹ ಪ್ರತಿಷ್ಠಾನಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ನಮ್ಮನ್ನೂ ಸಂಪರ್ಕಿಸಬಹುದಿತ್ತು. ಪೂರ್ವಾನುಮತಿ ಪಡೆದಿದ್ದರೆ ಇನ್ನು ಒಳಿತಾಗುತ್ತಿತ್ತು. ಅದು ಆಗದ ಹಿನ್ನೆಲೆ ಈ ರೀತಿಯ ಮುಜುಗರಕ್ಕೆ ಒಳಗಾಗುವುದು ತಪ್ಪುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸಮಯವಿಲ್ಲ ಎಂದ ಚಕ್ರವರ್ತಿ
ಇನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ಸಹ ವೈಯಕ್ತಿಕ ಕಾರಣ ನೀಡಿ ಸರ್ಕಾರಿ ಆದೇಶ ತಿರಸ್ಕರಿಸಿದ್ದಾರೆ. ಗಳಗನಾಥರ ಬಗ್ಗೆ ನನಗೆ ಅಪಾರ ಗೌರವವಿದೆ. ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದು ಅಚ್ಚರಿ ಜತೆಜತೆಗೆ ಸಂತಸವು ಆಯ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸಮಯ ಕೊಡುವಷ್ಟು ಸಮಯ, ಪುರುಸೊತ್ತು ನನ್ನಲ್ಲಿ ಇಲ್ಲದ್ದರಿಂದ ಅತ್ಯಂತ ವಿನೀತನಾಗೇ ಈ ಗೌರವ ಮರಳಿಸಬೇಕಾಗಿದೆ. ಗಳಗನಾಥರ ಕುರಿತು ನನ್ನಷ್ಟೇ ನನಗಿಂತಲೂ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿರುವವರು ಇದ್ದಾರೆ. ಅಂತವರನ್ನು ನೇಮಕಕ್ಕೆ ಆಯ್ಕೆ ಮಾಡಿ ಎಂದಿದ್ದಾರೆ.
ಆದೇಶ ಆಕ್ಷೇಪಿಸಿದ ನಿರ್ಧಾರಕ್ಕೆ ಸ್ವಾಗತ
ಗಳಗನಾಥರ ಕನ್ನಡಕ್ಕೆ ಮಾಡಿದ ಸೇವೆಗೆ ನಾವೆಷ್ಟೂ ಋಣಿಯಾದರೂ ಕಡಿಮೆಯೇ. ಅವರ ಕೆಲಸ ಮಾಡುವ ಈ ಅವಕಾಶ ಸ್ವೀಕರಿಸಲಾಗದಿರುವುದಕ್ಕೆ ಖಂಡಿತವಾಗಿಯೂ ಖೇದವಿದೆ. ನನ್ನನ್ನು ಸೂಕ್ತವೆಂದು ಈ ಪ್ರತಿಷ್ಠಾನಕ್ಕೆ ಆಯ್ಕೆ ಮಾಡಿದವರಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸೂಲಿಬೆಲೆ ಹಾಗೂ ನರೇಂದ್ರ ರೈ ದೇರ್ಲ ಅವರ ನೀರ್ಧಾರವನ್ನು ಹಲವರು ಸ್ವಾಗತಿಸಿ ಮೆಚ್ಚುಗೆ ಮಾತನಾಡಿದರೆ, ಕೆಲವರು ಟೀಕೆಗಳನ್ನು ಮಾಡಿದ್ದಾರೆ
ಮೃತರ ಹೆಸರು ಸೇರ್ಪಡೆಗೆ ವಿರೋಧ
ಅಚ್ಚರಿ ಎಂಬಂತೆ ಸರ್ಕಾರ ತನ್ನ ನೇಮಕ ಆದೇಶದಲ್ಲಿ ಮೃತರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರ ಹೆಸರು ಮತ್ತು ಜಾತಿಯನ್ನು ನಮೂದಿಸಿ ಯಡವಟ್ಟು ಮಾಡಿಕೊಂಡಿದೆ. ರಾಜೇಶ್ವರಿ ತೇಜಸ್ವಿ ಅವರು ಕಳೆದ ವರ್ಷ 2021ರಲ್ಲೇ ಡಿಸೆಂಬರ್ನಲ್ಲಿ ನಿಧನರಾಗಿದ್ದಾರೆ. ಅವರ ಹೆಸರು ಸೇರಿಸಲಾಗಿದೆ. ಸದಸ್ಯರ ಆಯ್ಕೆ ಪಕ್ಕ ಜಾತಿ ಸೂಚನೆ ಹಾಕಲಾಗಿದೆ ಎಂದು ಸಾರ್ವಜನಿಕ ವಲಯದಿಂದ ವಿರೋಧ, ಟೀಕೆಗಳು ಕೇಳಿ ಬಂದವು. ಸರ್ಕಾರದ ಈ ನಡೆಯನ್ನು ಖಂಡಿಸಲಾಯಿತು.
ಈ ಎಲ್ಲ ಕಾರಣಗಳಿಂದ ರಾಜ್ಯ ಸರ್ಕಾರ ಆಗಸ್ಟ 24ರಂದು ಹೊರಡಿಸಿದ್ದ ನೇಮಕ ಆದೇಶವನ್ನು ಆಗಸ್ಟ್ 25ರಂದು 24ಗಂಟೆಗಳಲ್ಲೇ ಹಿಂಪಡೆದು ಆ ಬಗ್ಗೆ ಆದೇಶ ಹೊರಡಿಸಿದೆ.