ಇಂದಿನಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭ
ಬೆಂಗಳೂರು, ಸೆಪ್ಟೆಂಬರ್ 4: ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದ್ದ ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ ಇಂದಿನಿಂದ(ಸೆಪ್ಟೆಂಬರ್ 4) ಆರಂಭವಾಗಲಿದೆ.
ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ಶಿಕ್ಷಕರ ವಲಯದಲ್ಲಿ ತೀವ್ರ ಆಕ್ರೋಶ ಉಂಟು ಮಾಡಿತ್ತು.
ಕಡ್ಡಾಯ ವರ್ಗಾವಣೆಗೆ ತಡೆ: ಶಿಕ್ಷಣ ಸಚಿವರ ಮನೆ ಮುಂದೆ ಶಿಕ್ಷಕರ ಪ್ರತಿಭಟನೆ
ಅಷ್ಟೇ ಅಲ್ಲದೆ ಮಂಗಳವಾರ ಬಸವೇಶ್ವರನಗರದಲ್ಲಿರುವ ಸುರೇಶ್ ಕುಮಾರ್ ನಿವಾಸದ ಮುಂದೆ ಶಿಕ್ಷಕರು ಪ್ರತಿಭಟನೆಯನ್ನೂ ಕೂಡ ನಡೆಸಿದ್ದರು.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆ ಸಂಬಂಧ ಹಲವು ದಿನಾಂಕಗಳನ್ನು ಪ್ರಕಟಿಸಿ ಮತ್ತೆ ದಿಢೀರ್ ರದ್ದು ಮಾಡಲಾಗಿತ್ತು. ಶಿಕ್ಷಕರ ಕಡ್ಡಾಯ ವರ್ಗಾವಣೆ ವಿಚಾರವಾಗಿ ಸಾಕಷ್ಟು ಗೊಂದಲ ಶುರುವಾಗಿತ್ತು.
ಈ ಎಲ್ಲಾ ಗೊಂದಲಗಳನ್ನು ಸಧ್ಯಕ್ಕೆ ಬಗೆಹರಿಸಲಾಗಿದ್ದು, ಬುಧವಾರದಿಂದ ವರ್ಗಾವಣೆ ಆರಂಭವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಕೋರಿಕೆ ವರ್ಗಾವಣೆ ಅವಧಿ ಮುಗಿದು ಹೋಗಿದೆ. ಕಡ್ಡಾಯ ವರ್ಗಾವಣೆಗೆ ಕೋರ್ಟ್ನಿಂದ ತಡೆ ಬಂದಿಲ್ಲ, 2007ರ ನಿಯಮದಂತೆ ಕಡ್ಡಾಯ ವರ್ಗಾವಣೆ ಮಾಡಲಾಗುವುದು . ಈವರೆಗೆ 16,066 ಶಿಕ್ಷಕರ ವರ್ಗಾವಣೆ ಆಗಿದೆ. ಅಂತರ್ ಘಟಕ ವರ್ಗಾವಣೆಯ 14,076 ಅರ್ಜಿಗಳು ಪರಿಶೀಲನಾ ಹಂತದಲ್ಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.