ಲೈಂಗಿಕ ದೌರ್ಜನ್ಯ ನಡೆದದ್ದು ಊಟದ ಸಂದರ್ಭ : ಬಾಲಕಿ ಹೇಳಿಕೆ
ಬೆಂಗಳೂರು, ಜ. 8: ಹೊಸಗುಡದಳ್ಳಿಯ ವೆಂಕಟೇಶ್ವರ ಶಾಲೆಯ ದೌರ್ಜನ್ಯಕ್ಕೊಳಗಾಗಿರುವ 2ನೇ ತರಗತಿ ವಿದ್ಯಾರ್ಥಿನಿ ಪೊಲೀಸರಿಗೆ ಬುಧವಾರ ಸಂಜೆ ಹೇಳಿಕೆ ನೀಡಿದ್ದಾಳೆ.
ವಿದ್ಯಾರ್ಥಿನಿಯ ಹೇಳಿಕೆ ಪ್ರಕಾರ, ಆರೋಪಿ ದೈಹಿಕ ಶಿಕ್ಷಕ ಮಂಗಳವಾರ ಮಧ್ಯಾಹ್ನ ಊಟದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿಯನ್ನು ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂಗೆ ಕರೆದೊಯ್ದ ಶಿಕ್ಷಕ ಆಕೆಯ ಬಟ್ಟೆ ಬಿಚ್ಚಲು ಆರಂಭಿಸಿದ್ದಾನೆ. ತಕ್ಷಣ ಬಾಲಕಿ ಕೂಗಿಕೊಂಡಾಗ ಮತ್ತೆ ಬಟ್ಟೆ ಹಾಕಿ ಆಕೆಯ ತರಗತಿಗೆ ಕಳುಹಿಸಿದ್ದಾನೆ. ಆಗ ಸುಮ್ಮನುಳಿದಿದ್ದ ಬಾಲಕಿ ಮನೆಗೆ ಬಂದ ನಂತರ ತಾಯಿಗೆ ವಿಷಯ ತಿಳಿಸಿದ್ದಾಳೆ.
ಬಾಲಕಿಯಿಂದ ಹೇಳಿಕೆ ಪಡೆದ ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ. [ಬಾಲಕಿ ಮೇಲೆ ದೌರ್ಜನ್ಯ ಪ್ರಕರಣ, ನಿಜವಾಗಿ ನಡೆದಿದ್ದೇನು?]

ಬ್ಯಾಟರಾಯನಪುರ, ಜೆ.ಜೆ.ನಗರ, ಚಾಮರಾಜಪೇಟೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ
ಹೊಸಗುಡದಳ್ಳಿಯ ವೆಂಕಟೇಶ್ವರ ಶಾಲೆಯಲ್ಲಿ ಬುಧವಾರ ದೈಹಿಕ ಶಿಕ್ಷಕನ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ, ಜೆ.ಜೆ. ನಗರ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆಯು ಜ. 7ರಂದು ಬುಧವಾರ ಮಧ್ಯಾಹ್ನ 12 ಗಂಟೆಯಿಂದಲೇ ಜಾರಿಗೆ ಬಂದಿದೆ. ಜ. 8ರಂದು ಗುರುವಾರ ಮಧ್ಯರಾತ್ರಿ 12 ಗಂಟೆಯವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. [ಬೆಂಗಳೂರಲ್ಲಿ ಗಲಭೆ, ನಿಷೇಧಾಜ್ಞೆ]
ಬ್ಯಾಟರಾಯನಪುರ, ಜೆ.ಜೆ. ನಗರ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೆಳಗಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
- ಕಾನೂನು ಭಂಗ ಉಂಟುಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ.
- ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ.
- ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ.
- ಯಾವುದೇ ಸಂರಕ್ಷಾರ ಪದಾರ್ಥ ಅಥವಾ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳು ಅಥವಾ ಉಪಕರಣಗಳ ಒಯ್ಯುವಂತಿಲ್ಲ, ಶೇಖರಿಸುವಂತಿಲ್ಲ.
- ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿ ಪ್ರದರ್ಶಿಸುವುದು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳ ಪ್ರದರ್ಶನ ನಿಷೇಧಿಸಲಾಗಿದೆ.
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊರಿಸಿ ದೈಹಿಕ ಶಿಕ್ಷಕನ ಮೇಲೆ ಪಾಲಕರು ಹಾಗೂ ಸಾರ್ವಜನಿಕರು ದಾಳಿ ನಡೆಸಿದ್ದಾರೆ. ಪೊಲೀಸರು ಬಂದು ಶಿಕ್ಷಕನನ್ನು ಬಂಧಿಸಿರುವುದಾಗಿ ತಿಳಿಸಿದರೂ ಲೆಕ್ಕಿಸದೆ ಶಾಲೆಯ ಒಳಗೆ ನುಗ್ಗಲು ಯತ್ನಿಸಿದ್ದಾರೆ. ವಾಹನ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಎಂ.ಎನ್. ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications