ಚುನಾವಣಾ ಪ್ರಚಾರಕ್ಕೆ ಹೊರಟ ಕ್ಯಾಬ್: ಪ್ರಯಾಣಿಕರ ಪರದಾಟ
ಬೆಂಗಳೂರು, ಏಪ್ರಿಲ್ 24: ಕಳೆದೊಂದು ವಾರದಿಂದ ಬೆಂಗಳೂರು ನಗರದ ಅನೇಕ ಉದ್ಯೋಗಿಗಳು ಆ್ಯಪ್ ಆಧರಿತ ಕ್ಯಾಬ್ಗಳಿಗಾಗಿ ಪರದಾಡುತ್ತಿದ್ದು, ಒಂದು ವೇಳೆ ಕ್ಯಾಬ್ ಸಿಕ್ಕರೂ ನಿಗದಿತ ಸಮಯಕ್ಕೆ ಕಚೇರಿ ತಲುಪದೇ ಪರದಾಡುತ್ತಿದ್ದಾರೆ, ಇದಕ್ಕೆ ಕಾರಣ ವಿಧಾನಸಭೆ ಚುನಾವಣೆ.
ಹೌದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಪ್ರಕ್ರಿಯೆ ಆರಂಭವಾಗಿದ್ದೇ ತಡ, ರಾಜಕೀಯ ಚಟುವಟಿಕೆ ಗರಿಗೆದರಿವೆ. ಒಂದೆಡೆ ಕ್ಯಾಬ್ ಗಳಿಗೆ ಭಾರಿ ಬೇಡಿಕೆ ಬಂದಿದ್ದರೆ ಮತ್ತೊಂದೆಡೆ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಾಗಲಿ, ಬಹಿರಂಗ ಪ್ರಚಾರ ಮತ್ತಿತರ ಕಾರಣಗಳಿಂದ ಟ್ರಾಫಿಕ್ ಜಾಮ್ ವಿಪರೀತವಾಗುತ್ತಿದೆ.
ರೈಲ್ವೆ ಪ್ರಯಾಣಿಕರು ವಾರ ಮೊದಲೇ ಓಲಾ ಬುಕ್ ಮಾಡಬಹುದು
ನಿತ್ಯ ವಾಣಿಜ್ಯ ವ್ಯವಹಾರಗಳಿಗೆ ಕ್ಯಾಬ್ ಗಳನ್ನು ಬಳಸುತ್ತಿದ್ದ ಕ್ಯಾಬ್ ಮಾಲೀಕರು ಹಾಗೂ ಚಾಲಕರು ತಮ್ಮ ವಾಣಿಜ್ಯ ವ್ಯವಹಾರ ನಿಲ್ಲಿಸಿ, ರಾಜಕಾರಣಿಗಳ ಬಳಕೆಗೆ ತಮ್ಮ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಓಡಿಸುತ್ತಿದ್ದು, ಇದರಿಂದ ಜನಸಾಮಾನ್ಯರ ಬಳಕೆಗೆ ಕ್ಯಾಬ್ ಗಳು ವಿರಳವಾಗುತ್ತಿವೆ. ಹೀಗಾಗಿ ಆ್ಯಪ್ನಲ್ಲಿ ತಾಸುಗಟ್ಟಲೆ ಕಾದರೂ ಕ್ಯಾಬ್ ಗಳು ಲಾಗಿನ್ ಆಗುತ್ತಿಲ್ಲ. ಇದರಿಂದ ಸಹಸ್ರಾರು ಉದ್ಯೋಗಿಗಳು ಪರದಾಡುವಂತಾಗಿದೆ.
ಮತ್ತೊಂದೆಡೆ ಊಬರ್ ಮತ್ತು ಓಲಾದಂತಹ ಸಂಸ್ಥೆಗಳು ಕ್ಯಾಬ್ ಹಾಗೂ ಚಾಲಕರಿಲ್ಲದೇ ಗ್ರಾಹಕರ ಬೇಡಿಕೆ ಈಡೇರಿಸಲು ಹರಸಾಹಸ ಮಾಡುತ್ತಿದ್ದಾರೆ. ಒಂದೆಡೆ ವಹಿವಾಟಿನ ಸ್ಪರ್ಧೆ ಮತ್ತೊಂದೆಡೆ ಚಾಲಕರ ಕೊರತೆಯಿಂದ ಈ ಕಂಪನಿಗಳು ಕೂಡ ಪರದಾಡುವಂತಾಗಿವೆ.
ಪ್ರತಿದಿನ ಸಿ.ವಿ.ರಾಮನ್ ನಗರದಿಂದ ಕಚೇರಿಗೆ ತಲುಪಲು ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಲು 3-4 ನಿಮಿಷ ಬೇಕಾಗುತ್ತಿತ್ತು. ಆದರೆ ಈಗ 15 ನಿಮಿಷ ಕಾದರೂ ಕ್ಯಾಬ್ ಸಿಗುತ್ತಿಲ್ಲ. ಅಲ್ಲದೇ 180 ರೂ.ಗಳಿಗೆ ತಲುಪುತ್ತಿದ್ದ ನಾನು ಈಗ 300 ರೂ.ಗಳ ಡಬಲ್ ಹಣ ಕೊಡಬೇಕಾದ ಸ್ಥಿತಿ ಎದುರಾಗಿದೆ ಐಟಿ ಉದ್ಯಮಿ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ.