Bengaluru Airport: ಈ ಕಾರಣದಿಂದಲೇ ಬೆಂಗಳೂರಿನ 2ನೇ ಏರ್ಪೋರ್ಟ್ ಮತ್ತೆ ವಿಳಂಬ
ಕರ್ನಾಟಕ ಸರ್ಕಾರವು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಿಸಲು ತರಾತುರಿಯಲ್ಲಿದೆ. ಕಳೆದ ಐದಾರು ತಿಂಗಳಿನಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆಯೇ ಹೊರತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕೊನೇ ಪಕ್ಷ ಯಾವ ಜಾಗದಲ್ಲಿ ಈ ಎರಡನೇ ಏರ್ಪೋರ್ಟ್ ಬರಲಿದೆ ಎಂಬ ಖಚಿತ ಮಾಹಿತಿಯೂ ಇಲ್ಲ. ಹಾಗಾಗಿ ಎರಡನೇ ವಿಮಾನ ನಿಲ್ದಾಣವು ಇನ್ನೂ ಬಾಯಿಮಾತಲ್ಲೇ ಇದ್ದು, ಇದರ ವಿಳಂಬಕ್ಕೆ ಕಾರಣಗಳೂ ಸಾಕಷ್ಟಿವೆ.
ಮೂಲಗಳ ಪ್ರಕಾರ ಕರ್ನಾಟಕ ಸರ್ಕಾರ ಬೆಂಗಳೂರಿನ ಎರಡನೇ ಏರ್ಪೋರ್ಟ್ಗೆ ಈಗಾಗಲೇ ಎರಡು ಕಡೆ ಸ್ಥಳ ನಿಗದಿ ಮಾಡಿದೆ. ಆದರೆ, ಅದನ್ನು ಘೋಷಿಸಲು ಹಿಂದೇಟು ಹಾಕುತ್ತಿದೆ. ಇದಕ್ಕೆ ಕಾರಣ ಕೂಡ ಇದೆ ಎಂದು ಹೇಳಲಾಗುತ್ತಿದೆ. ಒಂದು ಏರ್ಪೋರ್ಟ್ ನಿರ್ಮಾಣ ಅಂದ್ರೆ ತಮಾಷೆ ಮಾತಲ್ಲ. ಮುಂದಿನ ಪೀಳಿಗೆಯ ದೂರದೃಷ್ಟಿಯಿಂದಲೇ ಯೋಜನೆ ರೂಪಿಸಬೇಕಾಗುತ್ತೆ. ಏರ್ಪೋರ್ಟ್ನಿಂದ ಏನೆಲ್ಲ ಲಾಭ-ನಷ್ಟ ಎನ್ನುವುದನ್ನು ಅಂದಾಜಿಸಬೇಕಾಗುತ್ತೆ. ಈಗಾಗಲೇ ಸರ್ಕಾರ ಇದೆಲ್ಲ ಪ್ಲ್ಯಾನ್ ಮಾಡಿಕೊಂಡಿದ್ದರೂ ಆ ಒಂದು ಕಾರಣದಿಂದ ಸ್ಥಳ ಘೋಷಣೆ ಮಾಡುತ್ತಿಲ್ಲ.

ಹೌದು, ಎರಡನೇ ಏರ್ಪೋರ್ಟ್ಗೆ ಸ್ಥಳ ಘೋಷಣೆ ಮಾಡದಿರಲು ಬಹುಮುಖ್ಯ ಕಾರಣ ಪಕ್ಕದ ತಮಿಳುನಾಡು ಸರ್ಕಾರ. ಮೊದಲೆಲ್ಲ ಕಾವೇರಿ ನೀರಿನ ವಿಚಾರಕ್ಕೆ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು, ಈಗ ಏರ್ಪೋರ್ಟ್ ವಿಚಾರಕ್ಕೂ ಕರ್ನಾಟಕಕ್ಕೆ ಸೆಡ್ಡು ಹೊಡೆಯಲು ತರಾತುರಿಯಲ್ಲಿದೆ. ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಎರಡನೇ ಏರ್ಪೋರ್ಟ್ ನಿರ್ಮಿಸಲು ಸಜ್ಜಾಗಿದ್ದರೆ, ಬೆಂಗಳೂರಿಗೆ ಸಮೀಪವೇ ಇರುವ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಿಸಲು ತಮಿಳು ನಾಡು ಸರ್ಕಾರ ಕೂಡ ಪೈಪೋಟಿಗೆ ಬಿದ್ದಿದೆ.
ಈಗಾಗಲೇ ಹೊಸೂರಿಗೆ ಭೇಟಿ ನೀಡಿರುವ ಅಲ್ಲಿನ ಸರ್ಕಾರದ ಅಧಿಕಾರಿಗಳು, ರಾಜಕಾರಣಿಗಳು ಎರಡು ಏರ್ಪೋರ್ಟ್ಗಾಗಿ ಎರಡು ಸ್ಥಳಗಳ ಪರಿಶೀಲನೆಯೂ ನಡೆಸಿ, ವರದಿಗಾಗಿ ಕಾಯುತ್ತಿದೆ. ಬೆಂಗಳೂರಿನಲ್ಲಿ ಮತ್ತೊಂದು ಏರ್ಪೋರ್ಟ್ ಬರುವ ಮುನ್ನವೇ ಹೊಸೂರಿನಲ್ಲಿ ತಮ್ಮ ಏರ್ಪೋರ್ಟ್ ನಿರ್ಮಿಸಲು ಜಿದ್ದಾಜಿದ್ದಿಗೆ ಬಿದ್ದಿದೆ. ಇದು ಕರ್ನಾಟಕಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗಡಿಯಲ್ಲಿರುವ ಹೊಸೂರು ಬೆಂಗಳೂರಿಗೆ ಕೂಗಳತೆ ದೂರದಲ್ಲೇ ಇದೆ. ಒಂದು ವೇಳೆ ತಮಿಳು ನಾಡು ಸರ್ಕಾರದಿಂದ ಅಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣವಾದರೆ, ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈಗ ಪ್ರಸ್ತಾಪಿಸಿರುವ ಎರಡನೇ ಏರ್ಪೋರ್ಟ್ ಆದರೆ, ಬೆಂಗಳೂರು ವ್ಯಾಪ್ತಿಯಲ್ಲೇ ಮೂರು ಏರ್ಪೋರ್ಟ್ಗಳು ಇದ್ದಂತಾಗುತ್ತವೆ. ಇದರಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು.

ತಮಿಳುನಾಡು ಸರ್ಕಾರವು ಹೊಸೂರಿನ ಕೈಗಾರಿಕಾ ಪ್ರದೇಶಕ್ಕಾಗಿ ವಿಶೇಷ ವಿಮಾನ ನಿಲ್ದಾಣವನ್ನು ನಿರ್ಮಿಸಲು ಬದ್ಧವಾಗಿದೆ ಎಂದು ಹೊಸೂರಿನ ಕೈಗಾರಿಕಾ ಸಂಘಗಳಿಗೆ ಭರವಸೆ ಕೂಡ ನೀಡಿದೆ. ಅಲ್ಲಿನ ಕೈಗಾರಿಕಾ ಸಚಿವ ಟಿಆರ್ಬಿ ರಾಜಾ ಅವರು ಹೊಸೂರು ಸಣ್ಣ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ ನಡೆಸಿದ್ದು, ಹೊಸೂರು ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡುವ ಪ್ರಕ್ರಿಯೆ ಶೀಘ್ರವೇ ಮುಗಿಯಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಇತ್ತ ಕರ್ನಾಟಕ ಬಿಡದಿ, ಕನಕಪುರ ಅಥವಾ ನೆಲಮಂಗಲದಲ್ಲಿ ಎರಡನೇ ಏರ್ಪೋರ್ಟ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಇತ್ತೀಚೆಗೆ ಹೇಳಿರುವಂತೆ ಬೆಂಗಳೂರು ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಶೀಘ್ರವೇ ಸ್ಥಳ ಘೋಷಿಸುತ್ತೇವೆ ಎಂದಿದ್ದರು.
ಆದರೆ ವಾರ ಕಳೆದರೂ ಈ ಬಗ್ಗೆ ಘೋಷಣೆ ಮಾಡಲೇ ಇಲ್ಲ. ವಿಮಾನ ನಿಲ್ದಾಣ ಸ್ಥಾಪನೆಗೆ ಹಲವು ಪ್ರದೇಶಗಳ ಪ್ರಸ್ತಾವನೆ ಬಂದಿದ್ದು, ಅವುಗಳನ್ನು ಪರಿಶೀಲಿಸಿ ಸಂಚಾರ ಮತ್ತು ವಿಮಾನ ಹಾರಾಟ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಸ್ಥಳ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು. ಈಗ ಹೊಸೂರು ಬಳಿಯೇ ಮತ್ತೊಂದು ಏರ್ಪೋರ್ಟ್ ಬರುತ್ತಿರುವುದರಿಂದ ಬೆಂಗಳೂರಿನ ಎರಡನೇ ಏರ್ಪೋರ್ಟ್ನ ಸ್ಥಳ ಬದಲಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೇ ಎರಡನೇ ಏರ್ಪೋರ್ಟ್ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications